ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನೆಹರು ಆಳ್ವಿಕೆಯಲ್ಲಿ ದೇಶ ಭಕ್ತರನ್ನು ಹುಡುಕಿ ಹುಡುಕಿ ಜೈಲಿಗೆ ಕಳುಹಿಸಲಾಯಿತು. ಶ್ಯಾಮ್ಪ್ರಸಾದ್ ಮುಖರ್ಜಿ ಜೈಲಿನಲ್ಲಿ ಸತ್ತಿದ್ದಾಗಿ ಭಾರತೀಯ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರದ ಸಂಸ್ಥಾಪಕ ಜಿ.ಬಿ.ಹರೀಶ್ ಹೇಳಿದರು.ಕಲಾಮಂದಿರಲ್ಲಿ ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ 142 ನೇ ಸಾವರ್ಕರ್ ಜಯಂತಿ ಪ್ರಯುಕ್ತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಬಾಲಗಂಗಾಧರ ತಿಲಕ್ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಾವರ್ಕರ್ ಅವರು, ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಮಾಡಿದ್ದ ಸಂಕಲ್ಪ ಸದಾ ಸ್ಫೂರ್ತಿಯಾಗಿದೆ. ಹಿಂದುತ್ವವನ್ನು ಮನುಕುಲದ ಸ್ಫೂರ್ತಿ ಮತ್ತು ಚೈತನ್ಯದ ಸೆಲೆಯಾಗಿ ಗುರುತಿಸುವ ಸಾವರ್ಕರ್ ಹಿಂದುತ್ವದಿಂದಲೇ ಹಿಂದುಸ್ಥಾನ ಉಳಿದಿದೆ ಎನ್ನುತ್ತಾರೆ. ಅವರಿಗೆ ಹಿಂದುತ್ವ ಒಂದು ಪದವಲ್ಲ. ಅದು ಇತಿಹಾಸ. ಇಸ್ಲಾಂನ ಖಡ್ಗದ ಹೊಡೆತದಿಂದ ಜಗತ್ತಿನ ಅನೇಕ ರಾಷ್ಟ್ರಗಳು ರಾಷ್ಟ್ರಗಳಾಗಿಯೇ ಉಳಿಯಲಿಲ್ಲ. ಆದರೆ ಭಾರತ ಉಳಿದಿದ್ದರೆ ಹಿಂದುತ್ವವೇ ಈ ದೇಶದ ಆತ್ಮ ಎಂದರು.60 ರಿಂದ 65 ವರ್ಷ ದೇಶಕೋಸ್ಕರ ಪ್ರತಿಯೊಂದು ಹನಿ ರಕ್ತವನ್ನು ವೀರ ಸಾವರ್ಕರ್ ಹರಿಸಿದ್ದಾರೆ. ಭಾರತ ಸರ್ಕಾರ ಸಾವರ್ಕರ್ ಅವರ ಸೇವೆ ಪಡೆಯಬೇಕಿತ್ತು. ರಾಜಗುರು- ಭಗತ್ ಸಿಂಗ್ ಮುಂತಾದ ಕ್ರಾಂತಿ ಕಾರಿಗಳ ಬಗ್ಗೆ ಸುಳ್ಳು ಇತಿಹಾಸ ಬರೆಯಲಾಗಿದೆ. ಸಾವರ್ಕರ್ ಅವರನ್ನು ವೀರ್ ಎಂದು ಮೊದಲ ಬಾರಿಗೆ ಭಗತ್ಸಿಂಗ್ ಬಲವಂತ್ ಹಿಂದಿ ಪತ್ರಿಕೆಯಲ್ಲಿ ಬರೆಯುತ್ತಾರೆ. 1901 ರಲ್ಲಿ ಸಾವರ್ಕರ್ ಮಿತ್ರ ಮಂಡಳಿ ಸೊಸೈಟಿ ಆರಂಭಿಸಿದರು. ಯುವಕರನ್ನು ಬಡಿದೆಬ್ಬಸಿದ್ದಾಗಿ ಅವರು ಹೇಳಿದರು.
1907ರಲ್ಲಿ ಲಂಡನ್ ನಲ್ಲಿ ಕಾನೂನು ವ್ಯಾಸಂಗ ಮಾಡಲು ಸಾವರ್ಕರ್ ತೆರಳಿದ್ದರು. ಭಾರತ ಹಾಗೂ ಇಂಗ್ಲೆಂಡ್ ಎರಡೂ ಕಡೆಯು ಹೋರಾಟ ಮಾಡುತ್ತಿದ್ದರು. ಅವರ ಮೇಲಿನ ದ್ವೇಷಕ್ಕೆ ಪದವಿ, ಉದ್ಯೋಗ ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಆದರೆ ನಾಲಗೆ ಕಿತ್ತುಕೊಳ್ಳಲು ಆಗಲಿಲ್ಲ ಎಂದರು.ನೆಹರು ತೀರಿ ಹೋಗಿದ್ದಾರೆ ಎಂದು ಸಾವರ್ಕರ್ ಜನ್ಮದಿನ ಮಾಡಲಿಲ್ಲ. ಅಲ್ಲದೆ ಅವರು ತೀರಕೊಂಡಾಗ ಯಾವುದೇ ಸಂಸ್ಕಾರ ಮಾಡಬೇಡಿ ಅಂದಿದ್ದರು. ದೇಶದ ಭಕ್ತರು ಸಾವರ್ಕರ್ ಅವರ ವಿಚಾರಗಳನ್ನು ಮನೆ ಮನೆಗೆ ತಲುಪಿಸಬೇಕು. ಸಾವರ್ಕರ್ ಹಿಂದುತ್ವಕ್ಕೆ ಬೆಂಬಲ ನೀಡಬೇಕು. ಹಿಂದೂಗಳು ಬಹುಸಂಖ್ಯಾತರಾದರೆ ಸಂವಿಧಾನ ಬೆಲೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ .ಜಿ.ಬಿ. ಹರೀಶ್ ಅವರಿಗೆ ವಿನಾಯಕ ದಾಮೋದರ ವೀರ ಸಾವರ್ಕರ್ 142 ನೇ ಜಯಂತಿಯ ಸ್ಮರಣಾರ್ಥವಾಗಿ 1 ಲಕ್ಷ ರೂ. ನಗದು, ವೀರ ಸಾವರ್ಕರ್ ಅವರ ಪ್ರತಿಮೆ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ, ಶಿವಬಸಪ್ಪ ಸ್ವಾಮೀಜಿ, ಶಾಸಕ ಟಿ.ಎಸ್. ಶ್ರೀವತ್ಸ, ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ಸಾಮಾಜಿಕ ಚಿಂತಕ ಚಂದ್ರಶೇಖರ್, ರಾಕೇಶ್ ಭಟ್, ಶಿವಕುಮಾರ್ ಚಿಕ್ಕಕಾನ್ಯ, ಸಂದೇಶ್. ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಯಶಸ್ವಿ ಸೋಮಶೇಖರ್, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್ ಮೊದಲಾದವರು ಇದ್ದರು.