ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಗೌರವ ಕೊಡಿ: ಡಾ. ಚಂದ್ರು ಲಮಾಣಿ

| Published : May 29 2025, 12:34 AM IST

ಸಾರಾಂಶ

ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ತಿರಂಗಾ ಯಾತ್ರೆ ಮುಂಡರಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ನಡೆಯಿತು. ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಪಟ್ಟಣದಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ಆಗಮಿಸಿತು.

ಮುಂಡರಗಿ: ಪಿಒಕೆ ಮರಳಿ ಪಡೆಯುವುದು ಭಾರತೀಯ ಯೋಧರ ಗುರಿಯಾಗಿದ್ದು, ದೇಶದ ಸೈನ್ಯ ಸಾಕಷ್ಟು ಪ್ರಬಲವಾಗಿದೆ. ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಪ್ರತಿಯೊಬ್ಬ ಭಾರತೀಯರೂ ಗೌರವ ಕೊಡಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು, ಆನಂತರ ತಹಸೀಲ್ದಾರ್‌ ಕಚೇರಿ ಎದುರಿನಲ್ಲಿ ಮಂಗಳವಾರ ಜರುಗಿದ ಸಮಾರೋಪ ಸಭೆಯಲ್ಲಿ ಅವರು ಮಾತನಾಡಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ 26 ಭಾರತೀಯರ ಹತ್ಯೆಗೆ ನಮ್ಮ ದೇಶ ಪ್ರತಿಕ್ರಿಯೆ ನೀಡಿದೆ. ಉಗ್ರಗಾಮಿಗಳ ನೆಲೆ ಧ್ವಂಸ ಮಾಡುವುದೇ ದೇಶದ ಮತ್ತು ದೇಶದ ಯೋಧರ ಗುರಿಯಾಗಿದೆ. ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಕಿಸ್ತಾನ ತನ್ನ ವರ್ತನೆ ಬದಲಾಯಿಸಿಕೊಳ್ಳದಿದ್ದರೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

ಮಾಜಿ ಸೈನಿಕ ರಮೇಶ ಮಾತನಾಡಿ, ನಮ್ಮ ದೇಶದ ಬಗ್ಗೆ ಮತ್ತು ಯೋಧರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿರಬೇಕು. ದೇಶಕ್ಕೆ ಅನ್ನ ನೀಡುವ ರೈತರಿಗೆ ಮತ್ತು ದೇಶದ ಗಡಿ ಕಾಯುವ ಯೋಧರಿಗೆ ಕೊಡುವ ಗೌರವ ಸೈನಿಕರಲ್ಲಿ ಮತ್ತಷ್ಟು ಶಕ್ತಿ ತುಂಬಲು ಸಾಧ್ಯ ಎಂದರು.

ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಕೊಟ್ರೇಶ ಅಂಗಡಿ ಮಾತನಾಡಿ, ಉಗ್ರರನ್ನು ಸದೆಬಡಿದ ನಮ್ಮ ಯೋಧರನ್ನು ಇಡೀ ದೇಶವೇ ಸ್ಮರಿಸಿ, ಬೆಂಬಲಿಸುತ್ತಿದೆ. ದೇಶವನ್ನು ಸದಾ ಸಂರಕ್ಷಿಸಿಕೊಳ್ಳುವಂತಹ ಶಕ್ತಿ ಭಾರತಕ್ಕಿದ್ದು, ಉಗ್ರರನ್ನು ಪೋಷಿಸುವ ದೇಶಕ್ಕೆ ತಕ್ಕ ಪಾಠ ಕಲಿಸಲಾಗುತ್ತಿದೆ. ದೇಶದ ಯೋಧರಿಗೆ ಗೌರವ ಮತ್ತು ಬೆಂಬಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಜ್ಯೋತಿ ಹಾನಗಲ್, ತಿಮ್ಮಪ್ಪ ದಂಡಿನ, ಎಸ್.ಎಸ್. ಗಡ್ಡದ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಶಿವಕುಮಾರ ಕುರಿ, ರಂಗಪ್ಪ ಕೋಳಿ, ರಮೇಶ ಹುಳಕಣ್ಣವರ, ಮೈಲಾರಪ್ಪ ಕಲಕೇರಿ, ಅಶೋಕ ಚೂರಿ, ಪವಿತ್ರಾ ಕಲ್ಲಕುಟಿಗರ, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ, ಅಂಬವ್ವ ಕಟ್ಟೀಮನಿ, ಬಸವರಾಜ ಚಿಗಣ್ಣವರ, ಮಾರುತಿ ನಾಗರಹಳ್ಳಿ, ಶ್ರೀನಿವಾಸ ಅಬ್ಬಿಗೇರಿ, ಪರಶುರಾಮ ಕರಡಿಕೊಳ್ಳ, ಗಿರೀಶ ಶೀರಿ, ಧ್ರುವಕುಮಾರ ಹೂಗಾರ, ದಾವಲ ನಮಾಜಿ, ವೆಂಕಪ್ಪ ಪುರದ, ಬಸನಗೌಡ ಪಾಟೀಲ, ಅಂದಪ್ಪ ಉಳ್ಳಾಗಡ್ಡಿ, ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ತಾಲೂಕಾಧ್ಯಕ್ಷ ವಾಸಪ್ಪ ಕಾಶಭೋವಿ, ರೇವಣಸಿದ್ದಯ್ಯ, ವೆಂಕಪ್ಪ ಕಲಹಾಳ, ಹನುಮಂತಪ್ಪ ಮೇಗೂರ, ಶರಣಪ್ಪ ಹಲವಾಗಲಿ, ಗೌಸು ನದಾಫ್, ರಾಘವೇಂದ್ರ ಹಡಪದ ಪಾಲ್ಗೊಂಡಿದ್ದರು.

ಮಾಜಿ ಯೋಧರನ್ನು ಗೌರವಿಸಲಾಯಿತು. ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಜಾಗ್ರತ ವೃತ್ತ, ಬಜಾರ, ಅಂಬಾಭವಾನಿ ನಗರ, ಹೊಸ ಬಸ್ ನಿಲ್ದಾಣ, ಬೃಂದಾವನ ವೃತ್ತ, ಭಜಂತ್ರಿ ಓಣಿ, ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಯಾತ್ರೆಯಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.