ರೋಣ: ತಾಲೂಕಿನ ಕೊತಬಾಳ ಗ್ರಾಪಂ ಪಿಡಿಒ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಡಿಒ ಮಕ್ತುಂಹುಸೇನ ಕರಡಿಗಡ್ಡ(46) ಆತ್ಮಹತ್ಯೆ ಮಾಡಿಕೊಂಡವರು. ಇವರು ಪಟ್ಟಣದ ಶ್ರೀನಗರ ಬಡಾವಣೆಯ ಬಾಡಿಗೆ ಮನೆಯಲ್ಲಿನ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಬೆಳಕಿಗೆ ಬಂದಿದೆ.ಮೃತ ಪಿಡಿಒ ಮಕ್ತುಂಹುಸೇನ ಕರಡಿಗಡ್ಡ ಮೂಲತಃ ಧಾರವಾಡದ ಗಣೇಶ ನಗರದವರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ತಾಲೂಕಿನ ಕೊತಬಾಳ ಮತ್ತು ಅಸೂಟಿ ಗ್ರಾಪಂ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಟ್ಟಣದ ಶ್ರೀನಗರ ಬಡಾವಣೆಯ ನಿವೃತ್ತ ಶಿಕ್ಷಕ ಅಬ್ದುಲ್ ಅಜೀಜ ಇಂಡಿಕರ್ ಎಂಬುವರ ಬಾಡಿಗೆ ಮನೆಯಲ್ಲಿ 2 ತಿಂಗಳಿನಿಂದ ವಾಸವಾಗಿದ್ದರು ಪತ್ನಿ, ಮೂವರು ಮಕ್ಕಳು ಧಾರವಾಡಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವ ಮಂಗಳವಾರ ಸಂಜೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಡಿಒ ಮನೆ ಬಿಟ್ಟು ಹೊರಗೆ ಬಾರದಿರುವುದನ್ನು ಗಮನಿಸಿದ ಮನೆ ಮಾಲೀಕರು ನೋಡಿದಾಗ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.ಡೆತ್ನೋಟನಲ್ಲಿ, ತನಗೆ ಕಾಲಿನ ನೋವು ವಿಪರೀತವಾಗಿದ್ದು, ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನ ನೌಕರಿಯನ್ನು ಪತ್ನಿ ಆಸ್ಮಾಗೆ ನೀಡುವಂತೆ, ನನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾರೆ.
ಪತ್ನಿಯಿಂದ ದೂರು: ಪತಿ ಮಕ್ತುಂಹುಸೇನ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪತ್ನಿ ಆಸ್ಮಾ ಅವರಿಗೆ ಸಂಶಯ ಮೂಡಿದ್ದು, ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ರೋಣ ಪೊಲೀಸರು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.