ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶಾಂತಿ, ಸಾಮರಸ್ಯ ಮತ್ತು ಸೌಹರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿ ಮುಖಂಡರೊಂದಿಗೆ ಶಾಂತಿ ಸಭೆ ನಡೆಯಿತು.ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕುಶಾಲನಗರ ಉಪವಿಭಾಗದ ಡಿವೈಎಸ್ಪಿ ಪಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಾಲಿಸಬೇಕಾದ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸುಂಟಿಕೊಪ್ಪ ಠಾಣಾಧಿಕಾರಿ ಭಾರತಿ, ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ವಿವಿಧ ಮಸೀದಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.----------------------------
ಮಳೆಯಿಂದ 1442 ವಿದ್ಯುತ್ ಕಂಬಗಳಿಗೆ ಹಾನಿವಿವಿಧ ಸಲಕರಣೆಗಳೊಂದಿಗೆ ನಿರಂತರವಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆಕನ್ನಡಪ್ರಭ ವಾರ್ತೆ ಮಡಿಕೇರಿ
ತೀವ್ರವಾದ ಮಳೆ-ಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1442 ವಿದ್ಯುತ್ ಕಂಬಗಳು, 11 ಸಂಖ್ಯೆ ವಿದ್ಯುತ್ ಪರಿವರ್ತಕಗಳು ಹಾಗೂ 13.105 ಕಿ.ಮೀ ವಾಹಕಗಳು ಹಾನಿಗೊಳಗಾಗಿರುತ್ತದೆ.ಈಗಾಗಲೇ 1091 ಸಂಖ್ಯೆ ಕಂಬಗಳನ್ನು ಹಾಗೂ 09 ಸಂಖ್ಯೆ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಬದಲಾಯಿಸಲಾಗಿದೆ. ದೈನಂದಿನ ಚಟುವಟಿಕೆಯಲ್ಲಿ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಮಳೆ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯುತ್ ಕಂಬಗಳ ಮುರಿಯುವಿಕೆ ಮುಂದುವರಿಯುತ್ತಿದೆ.ವಿದ್ಯುತ್ ಜಾಲದ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಲು, ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಂಖ್ಯೆಯ ಸಿಬ್ಬಂದಿ, ಇತರೆ ವಿಭಾಗಗಳಿಂದ 52 ಸಂಖ್ಯೆ ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ 75 ಸಂಖ್ಯೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಇವರ ಜೊತೆ 124 ಸಂಖ್ಯೆ ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿ ವಿವಿಧ ಸಲಕರಣೆಗಳೊಂದಿಗೆ ನಿರಂತರವಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರಾಮಚಂದ್ರ ಅವರು ತಿಳಿಸಿದ್ದಾರೆ.ಕಳೆದ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಕಾಮಗಾರಿ ಹಾಗೂ ಮಾರ್ಗದ ವಿಫಲತೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಮಳೆಗಾಳಿಯಿಂದ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.ಜಿಲ್ಲೆಯಾದ್ಯಂತ ಮಳೆ ಗಾಳಿಯಿಂದಾಗಿ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಜಾಲದ ಮರು ಸ್ಥಾಪನೆಯಲ್ಲಿ ನಿರತರಾಗಿರುತ್ತಾರೆ. ಶಾಖಾಧಿಕಾರಿಗಳು ಬ್ರೇಕ್ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರುವುದಿಲ್ಲ. ಆದ್ದರಿಂದ ಗ್ರಾಹಕರ ದೂರುಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ಟೋಲ್ ಫ್ರೀ ಸಂಖ್ಯೆ “1800-599-0061” ನೀಡಲಾಗಿದ್ದು, ವಿದ್ಯುತ್ ಜಾಲದ ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಹಕರು ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.