ನಿರಂತರ ಪುಸ್ತಕ ಓದುವದರಿಂದ ಮನಶಾಂತಿ

| Published : Feb 08 2024, 01:33 AM IST

ಸಾರಾಂಶ

ಕರ್ನಾಟಕ ನಾಮಕರಣ ಸಂಭ್ರಮವು ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ. ಕರ್ನಾಟಕ ನಾಮಕರಣವಾಗಲು ಗದುಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯವೇ ಪ್ರೇರಣೆಯಾಗಿದೆ

ಗದಗ: ಜ್ಞಾನ ವಿಸ್ತರಿಸುವಲ್ಲಿ ಪುಸ್ತಕಗಳ ಪಾತ್ರ ಬಹುಮುಖ್ಯವಾಗಿದೆ. ನಿರಂತರ ಪುಸ್ತಕ ಓದುವದರಿಂದ ಮನ ಶಾಂತಿ ಹಾಗೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕರ್ನಾಟಕ ನಾಮಕರಣ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕಾಲೇಜಿನ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ ಹುಲಕುಂದ ರಚಿಸಿದ ಸಮಾಜಶಾಸ್ತ್ರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರಾಧ್ಯಾಪಕರು ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಬೇಕು. ಕರ್ನಾಟಕ ನಾಮಕರಣ ಸಂಭ್ರಮವು ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ. ಕರ್ನಾಟಕ ನಾಮಕರಣವಾಗಲು ಗದುಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯವೇ ಪ್ರೇರಣೆಯಾಗಿದೆ. ಇದು ಐತಿಹಾಸಿಕ ಸಂಗತಿಯಾಗಿದ್ದು, ಇಂತಹ ಬಹುಮುಖ್ಯ ಸಂಗತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕೆಂದು ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಈ ಭಾಗದ ಹುಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಆಶಾಕಿರಣವಾಗಿದೆ ಎಂದರು.

ಡಾ. ಶಿವಪ್ಪ ಕುರಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ, ಲೇಖಕ ಪ್ರಶಾಂತ ಹುಲಕುಂದ, ಸಾಹಿತಿ ಪ್ರೊ. ಅನ್ನದಾನಿ ಹಿರೇಮಠ, ಪ್ರೊ.ಕೆ.ಎಚ್. ಬೇಲೂರ, ಡಾ. ಜಿ.ಬಿ. ಪಾಟೀಲ, ಡಾ.ರಾಜೇಂದ್ರ ಗಡಾದ, ಡಾ. ಅಪ್ಪಣ್ಣ ಹಂಜೆ, ಡಾ. ಲಕ್ಷ್ಮಣ ಮುಳಗುಂದ, ರಮೇಶ ಹುಲಕುಂದ, ಡಾ. ಜಿತೇಂದ್ರ ಜಹಾಗೀರದಾರ, ಮಹಾಂತೇಶ ಗೊರವನಕೊಳ್ಳ ಹಾಗೂ ವಿದ್ಯಾರ್ಥಿಗಳು ಇದ್ದರು.

ಕಿರಣಕುಮಾರ ರಾಯರ ನಿರೂಪಿಸಿದರು. ಚಂದ್ರಪ್ಪ.ಎಚ್ ಸ್ವಾಗತಿಸಿದರು. ನವೀನ ತಿರ್ಲಾಪೂರ ವಂದಿಸಿದರು.