ಸಾರಾಂಶ
ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಭಾನುವಾರ ಶಾಂತಿಯುತ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಹರ್ಷದಿಂದ ಹೆಜ್ಜೆ ಹಾಕಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ನಗರದಲ್ಲಿ ಭಾನುವಾರ ಶಾಂತಿಯುತ ಮೆರವಣಿಗೆ ನಡೆಸಿದರು.ಸುನ್ನಿ ಜಮೈತುಲ್ ಉಲೆಮಾ ಕಮಿಟಿಯ ನೇತೃತ್ವದಲ್ಲಿ ಗಾಂಧಿ ಬಜಾರ್ ನ ಜಾಮಿಯಾ ಮಸೀದಿಯಿಂದ ಆರಂಭವಾದ ಈದ್ ಮಿಲಾದ್ ಮೆರವಣಿಗೆ ಗಾಂಧಿ ಬಜಾರ್ 2ನೇ ಕ್ರಾಸ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಓಲ್ಡ್ ಬಾರ್ ಲೈನ್ ರಸ್ತೆ -ಪೆನ್ಷನ್ ಮೊಹಲ್ಲಾ-ಬಾಲ್ರಾಜ್ ಅರಸ್ ರಸ್ತೆ-ಮಹಾವೀರ ಸರ್ಕಲ್-ಗೋಪಿ ಸರ್ಕಲ್- ನೆಹರು ರಸ್ತೆ- ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ -ಅಶೋಕ ಸರ್ಕಲ್-ಎನ್ ಟಿ ರಸ್ತೆ -ಗುರುದೇವ ರಸ್ತೆ -ಕ್ಲಾರ್ಕ್ ಪೇಟೆ, ನೂರಾನಿ ಮಸೀದಿ ಕೆ.ಆರ್ ಪುರಂ ರಸ್ತೆ ಮಾರ್ಗವಾಗಿ ಆಮೀರ್ ಅಹಮ್ಮದ್ ಸರ್ಕಲ್ ವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯ ಯುವಕರು ಭಾಗಿಯಾಗಿದ್ದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಭಿನ್ನವಾದ ಕಲಾಕೃತಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಸ್ಲಿಂ ಯುವ ಸಮೂಹ ಡಿಜೆ ಹಾಕಿಕೊಂಡು ಮೆರೆವಣಿಗೆಯಲ್ಲಿ ಕುಣಿದು ಸಂಭ್ರಮಿಸಿದರು. ಈದ್ ಮಿಲಾದ್ ಮೆರೆವಣಿಗೆಯಲ್ಲಿ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಭಾಗಿಯಾಗಿದ್ದು ವಿಶೇಷವಾಗಿತ್ತು.ವಿಶೇಷ ಅಲಂಕಾರ:
ಈದ್ ಮಿಲಾದ್ ಮೆರವಣಿಗೆ ಅಂಗವಾಗಿ ಅಮೀರ್ ಅಹಮದ್ ಸರ್ಕಲ್ ಹಸಿರು ಮಯವಾಗಿತ್ತು. ಸರ್ಕಲ್ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಧ್ಯದಲ್ಲಿ ಮೆಕ್ಕಾ ಮದೀನ ಮಾದರಿಯ ಅಲಂಕಾರ ಮಾಡಲಾಗಿತ್ತು. ಇನ್ನು, ಕೆ.ಆರ್.ಪುರಂ, ಎಂ.ಕೆ.ಕೆ ರಸ್ತೆಯಲ್ಲಿ ವಿದ್ಯುತ್ ದಿಪಾಲಂಕಾರ ಮಾಡಲಾಗಿತ್ತು. ಅಲ್ಲದೆ ರಸ್ತೆಯ ಪ್ರವೇಶದಲ್ಲಿ ಕಮಾನು ನಿರ್ಮಿಸಲಾಗಿತ್ತು. ನೆಹರು ರಸ್ತೆ, ಬಿ.ಎಚ್.ರಸ್ತೆಯಲ್ಲಿ ಹಸಿರು ಧ್ವಜ, ಬಂಟಿಂಗ್ಸ್ಗಳನ್ನು ಹಾಕಲಾಗಿತ್ತು.ಅಲಂಕಾರ ಕಣ್ತುಂಬಿಕೊಳ್ಳಲು ಮುಸ್ಲಿಂ ಸಮುದಾಯದವರು ಕುಟುಂಬ ಸಹಿತ ಸರ್ಕಲ್ ಬಳಿ ಆಗಮಿಸಿದ್ದರು. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಪೊಲೀಸ್ ಬಿಗಿ ಬಂದೋಬಸ್ತ್
ಈದ್ ಮಿಲಾದ್ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 25 ಪೊಲೀಸ್ ಉಪಾಧೀಕ್ಷಕರು, 60 ಪೋಲಿಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 200 ಸಹಾಯಕ ಪೊಲೀಸ್ ನಿರೀಕ್ಷಕರು, 3500 ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF ತುಕಡಿ, 08 ಡಿಎಆರ್ ತುಕಡಿ, 1 ಕ್ಯುಆರ್ಟಿ ತುಕಡಿ, 1 ಡಿಎಸ್ಡ್ಬ್ಯುಎಟಿ( DSWAT) ತುಕಡಿ, 10 ಕೆಎಸ್ಆರ್.ಪಿ ತುಕಡಿಗಳು, 05 ಡ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್ ಗಳನ್ನು ನಿಯೋಜಿಸಲಾಗಿತ್ತು.