ರಾಣಿಬೆನ್ನೂರು: ಹೆಸ್ಕಾಂ ಸಿಬ್ಬಂದಿ ಇಬ್ಬರೂ ರಾಷ್ಟ್ರೀಯ ಪಕ್ಷಿ ನವಿಲಿನ ಅಂತ್ಯಸಂಸ್ಕಾರವನ್ನು ಭಾರತೀಯ ಸಂಪ್ರದಾಯದಂತೆ ಮಾಡಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ನೂಕಾಪುರ ಸಮೀಪದ ಹೊನ್ನನಾಗದೇವತೆ ದೇವಸ್ಥಾನದ ಬಳಿ ಗುರುವಾರ ಸಂಜೆ ನಡೆದಿದೆ.
ದೇವಸ್ಥಾನದ ಎದುರಿಗೆ ಜಮೀನೊಂದರ ಜೋಡು ವಿದ್ಯುತ್ ಕಂಬಕ್ಕೆ ತಗುಲಿ ಕಂಬದ ಮೇಲೆಯೆ ನವಿಲು ಪ್ರಾಣ ಬಿಟ್ಟಿತ್ತು. ಇದರಿಂದಾಗಿ ಲೈನ್ ಟ್ರಿಪ್ ಆಗುವ ವಿಚಾರವಾಗಿ ಲೈನ್ ತೊಂದರೆ ಬಗ್ಗೆ ಲೈನ್ಮ್ಯಾನ್ಗಳಾದ ಸಂಗಮೇಶ ಕೋಟಿಕಲ್ ಹಾಗೂ ಚೇತನ್ ಬಳ್ಳಾರಿ ಲೈನ್ ಫಾಲ್ಟ್ ನೋಡುವಾಗ ನವಿಲು ವಿದ್ಯುತ್ ತಗುಲಿ ಮೃತಪಟ್ಟಿರುವುದು ಕಂಡುಬಂದಿದೆ.ತಕ್ಷಣವೆ ಲೈನ್ಮ್ಯಾನ್ಗಳಿಬ್ಬರೂ ನವಿಲನ್ನು ವಿದ್ಯುತ್ ಕಂಬದಿಂದ ಕಳೆಗಿಳಿಸಿ ಪಕ್ಕದಲ್ಲಿರುವ ಜಮೀನೊಂದರಲ್ಲಿ ತಾವೇ ಸ್ವತಃ ತೆಗ್ಗು ತೋಡಿ ಗ್ರಾಮಸ್ಥರ ಸಹಕಾರದಿಂದ ಅಂತಿಮ ಪೂಜೆ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸಿದರು.
ಅವರ ಕಾರ್ಯವನ್ನು ಇಡೀ ಗ್ರಾಮವೇ ಶ್ಲಾಘಿಸುವ ಜತೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಶಂಕರ್ ಚವ್ಹಾಣ, ಅರುಣ ರಾಠೋಡ, ಚೇತನ್ ರಾಠೋಡ, ವಾಲಪ್ಪ ಕೇತಾವತ್, ಗುಡ್ಡಪ್ಪ ಮರಡೇರ ಇದ್ದರು.ನವಿಲು ವಿದ್ಯುತ್ ಕಂಬಕ್ಕೆ ತಗುಲಿ ಅಸು ನೀಗಿರುವುದು ನಿಜಕ್ಕೂ ತುಂಬಾ ದುಃಖ ತಂದಿದೆ. ಆದರೆ ವಿಧಿ-ವಿಧಾನ ಪ್ರಕಾರ ಅಂತ್ಯಸಂಸ್ಕಾರ ಮಾಡಿದ್ದು ಮನಸ್ಸಿಗೆ ಸ್ವಲ್ಪ ನೆಮ್ಮದಿ ಅನಿಸಿತು ಎಂದು ಹನುಮಾಪುರ ವಿಭಾಗದ ಲೈನ್ಮಾನ್ ಸಂಗಮೇಶ ಕೋಟಿಕಲ್ ಹೇಳಿದರು.ಇವತ್ತು ನವಿಲು ಈ ರೀತಿ ಸತ್ತಿದ್ದು ತುಂಬಾ ಬೇಸರ ತಂದಿತು. ರಾಷ್ಟ್ರೀಯ ಪಕ್ಷಿಗೆ ಸಲ್ಲಿಸಬೇಕಾದ ಅಂತಿಮನಮನ ಗೌರವವನ್ನು ಸಲ್ಲಿಸಿದ್ದೇವೆ ಎಂದು ಯಲ್ಲಾಪುರ ವಿಭಾಗದ ಚೇತನ್ ಬಳ್ಳಾರಿ ಹೇಳಿದರು.ರಸ್ತೆಯ ಬದಿ ಜಮೀನೊಂದರಲ್ಲಿ ವಿದ್ಯುತ್ ಕಂಬಕ್ಕೆ ಸಿಲುಕಿ ಮೃತಪಟ್ಟ ನವಿಲನ್ನು ಇಬ್ಬರೂ ಲೈನ್ಮ್ಯಾನ್ಗಳು ಭಾರತೀಯ ಸಂಪ್ರದಾಯದ ವಿಧಿ-ವಿಧಾನದಂತೆ ಪೂಜೆ-ಪುನಸ್ಕಾರ ಸಲ್ಲಿಸಿ, ಅದರ ಅಂತ್ಯಕ್ರಿಯೆ ಮಾಡಿದ್ದು ನಿಜಕ್ಕೂ ಅವರ ಪ್ರಾಮಾಣಿಕ ಕಾರ್ಯ ಶ್ಲಾಘನೀಯ ಎಂದು ನೂಕಾಪುರ ಗ್ರಾಮಸ್ಥ ಸಂತೋಷ ನಾಯಕ ಹೇಳಿದರು.