ನೆಲಮಂಗಲ/ದಾಬಸ್ಪೇಟೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ನಗರ ವ್ಯಾಪ್ತಿಯ ಕುಣಿಗಲ್ ಬೈಪಾಸ್ ಹಾಗೂ ಸೊಂಡೆಕೊಪ್ಪ ಬೈಪಾಸ್ ಸಮೀಪ ಪ್ರಸನ್ನ ಆಂಜನೇಯ ವಿಗ್ರಹದ ಬಳಿ ನಿರ್ಮಿಸಿರುವ ಪಾದಚಾರಿಗಳ ಮೇಲ್ಸೇತುವೆ (ಸ್ಕೈವಾಕ್) ಸಂಪೂರ್ಣ ಹಾಳಾಗಿ ಅಪಾಯದ ಅಂಚಿಗೆ ತಲುಪಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನೆಲಮಂಗಲ/ದಾಬಸ್ಪೇಟೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ನಗರ ವ್ಯಾಪ್ತಿಯ ಕುಣಿಗಲ್ ಬೈಪಾಸ್ ಹಾಗೂ ಸೊಂಡೆಕೊಪ್ಪ ಬೈಪಾಸ್ ಸಮೀಪ ಪ್ರಸನ್ನ ಆಂಜನೇಯ ವಿಗ್ರಹದ ಬಳಿ ನಿರ್ಮಿಸಿರುವ ಪಾದಚಾರಿಗಳ ಮೇಲ್ಸೇತುವೆ (ಸ್ಕೈವಾಕ್) ಸಂಪೂರ್ಣ ಹಾಳಾಗಿ ಅಪಾಯದ ಅಂಚಿಗೆ ತಲುಪಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ನಗರದಿಂದ ಜಕ್ಕಸಂದ್ರ ಹಾಗೂ ಪ್ರಸನ್ನ ಆಂಜನೇಯ ಬಡಾವಣೆಯ ಕಡೆಗೆ ತೆರಳುವ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಇದೇ ಪಾದಚಾರಿಗಳ ಮೇಲ್ಸೇತುವೆಯನ್ನು ಅವಲಂಬಿಸಿದ್ದಾರೆ. ಪ್ರತಿದಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ನೂರಾರು ಮಂದಿ ಈ ಸೇತುವೆಯಲ್ಲೇ ಸಂಚರಿಸುತ್ತಿದ್ದಾರೆ.ಆದರೆ, ಸೇತುವೆಯ ಕಬ್ಬಿಣದ ಭಾಗಗಳು ತುಕ್ಕು ಹಿಡಿದು ಹಾಳಾಗಿವೆ. ಕೆಲವೆಡೆ ತೂತುಗಳು ಬಿದ್ದಿದೆ. ಸೇತುವೆ ಬಳಸುವ ವೇಳೆ ಯಾವುದೇ ಸಮಯದಲ್ಲಾದರೂ ಅನಾಹುತ ಸಂಭವಿಸಬಹುದೆಂಬ ಭಯದಲ್ಲೇ ಪಾದಚಾರಿಗಳು ಸಂಚರಿಸುವಂತಾಗಿದೆ.
ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹಾಗೂ ಅತಿ ವೇಗದ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಹೀಗಾಗಿ ಪಾದಚಾರಿಗಳ ಸುರಕ್ಷತೆಗಾಗಿ ನಿರ್ಮಿಸಿರುವ ಮೇಲ್ಸೇತುವೆಯೇ ಇದೀಗ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಮೇಲ್ಸೇತುವೆ ಈ ಮಟ್ಟಿಗೆ ಹಾಳಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ದುರಂತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ, ತುಕ್ಕು ಹಿಡಿದಿರುವ ಹಾಗೂ ತೂತು ಬಿದ್ದಿರುವ ಭಾಗಗಳನ್ನು ದುರಸ್ತಿ ಮಾಡಿ ಪಾದಚಾರಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೋಟೋ 4 : ನೆಲಮಂಗಲ ನಗರ ವ್ಯಾಪ್ತಿಯ ಕುಣಿಗಲ್ ಬೈಪಾಸ್ನಲ್ಲಿರುವ ಸ್ಕೈವಾಕ್.