ಸಾರಾಂಶ
ಕಾಶ್ಮೀರದ ಪೆಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರ ಸದ್ಗತಿಗಾಗಿ, ಅಭಿನವ ಭಾರತ್ ಸಂಘಟನೆಯಿಂದ ಸೋಮವಾರ ಮಲ್ಪೆಯ ಹನುಮಾನ್ ವಿಠೋಭಾ ಭಜನಾ ಮಂದಿರದಲ್ಲಿ ‘ಗೀತಾ ತ್ರಿಷ್ಟುಪ್ ಹೋಮ’ ನಡೆಸಿ, ಮಲ್ಪೆ ಸಮುದ್ರದಲ್ಲಿ ತಿಲತರ್ಪಣ ಬಿಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾಶ್ಮೀರದ ಪೆಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರ ಸದ್ಗತಿಗಾಗಿ, ಅಭಿನವ ಭಾರತ್ ಸಂಘಟನೆಯಿಂದ ಸೋಮವಾರ ಮಲ್ಪೆಯ ಹನುಮಾನ್ ವಿಠೋಭಾ ಭಜನಾ ಮಂದಿರದಲ್ಲಿ ‘ಗೀತಾ ತ್ರಿಷ್ಟುಪ್ ಹೋಮ’ ನಡೆಸಿ, ಮಲ್ಪೆ ಸಮುದ್ರದಲ್ಲಿ ತಿಲತರ್ಪಣ ಬಿಡಲಾಯಿತು.ಈ ವೇಳೆ ಹೋಮದ ಆಯೋಜಕ, ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ ಸಮಾಜ, ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಹಿಂದೂರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಇದು ಘೋರ ದುರಂತ ಎಂದು ವಿಷಾದಿಸಿದರು.ನಮ್ಮ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಪ್ರತೀವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀವರ್ಷ ಪಿತೃ ತರ್ಪಣ ಬಿಡುತ್ತೇವೆ. ಆದರೆ ಪೆಹಲ್ಗಾಮ್ ಘಟನೆ ನಡೆದು ಎರಡು ವಾರದಲ್ಲಿ ಸಮಾಜಕ್ಕೆ ಈ ಘಟನೆ ಮರೆತುಹೋಗಿರುವುದು ವಿಪರ್ಯಾಸ ಎಂದರು.
ಪೆಹಲ್ಗಾಮ್ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡ ನೆನಪಿಲ್ಲ. ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಧಾರ್ಮಿಕವಾಗಿ ಸಮಾಜವನ್ನ ಹೇಗೆ ಒಗ್ಗೂಡಿಸಬಹುದೆಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.ವೇದಮೂರ್ತಿ ಸುರಾಲು ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಉದ್ಯಮಿ ಅಜಯ್ ಕೊಡವೂರು, ಹಿಂದೂ ಮುಖಂಡ ಪಾಂಡುರಂಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.-------------ಗೀತಾ ತ್ರಿಷ್ಟುಪ್
ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನ ಮಾತು ಗೀತಾ ತ್ರಿಷ್ಟುಪ್. ಗೀತಾ ತ್ರಿಷ್ಟುಪ್ ಮಂತ್ರದಿಂದ ಸಾವಿರ ಸಂಖ್ಯೆಯ ಜಪ ಮಾಡಿ ಹೋಮ ನಡೆಸಲಾಗಿದೆ. ಮೃತ 25 ಮಂದಿಯ ಪರವಾಗಿ 25 ಕಾರ್ಯಕರ್ತರು ತಿಲತರ್ಪಣ ಬಿಟ್ಟು ಸಮುದ್ರದಲ್ಲಿ ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಇದು ಎಲ್ಲ ಕಡೆಯಲ್ಲೂ ಆಯೋಜನೆ ಆಗಬೇಕು ಎಂದು ಆಯೋಜಕರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.