ಗಣಿ ಮತ್ತು ಕಲ್ಲು ಕ್ರಷರ್ ಮಾಲೀಕರ ಮೇಲೆ ಭಾರಿ ಪ್ರಮಾಣದ ದಂಡ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿರುವುದರಿಂದ ಕರ್ನಾಟಕದಾದ್ಯಂತ ಕಟ್ಟಡ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ ಎಂದು ಬೆಳಗಾವಿ ಜಿಲ್ಲಾ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ್ ಹಟ್ಟಿಹೊಳಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಣಿ ಮತ್ತು ಕಲ್ಲು ಕ್ರಷರ್ ಮಾಲೀಕರ ಮೇಲೆ ಭಾರಿ ಪ್ರಮಾಣದ ದಂಡ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿರುವುದರಿಂದ ಕರ್ನಾಟಕದಾದ್ಯಂತ ಕಟ್ಟಡ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ ಎಂದು ಬೆಳಗಾವಿ ಜಿಲ್ಲಾ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ್ ಹಟ್ಟಿಹೊಳಿ ಆರೋಪಿಸಿದರು.ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೈನರ್ ಮಿನರಲ್ ಕನ್ಸೆಷನ್ ಕಾಯ್ದೆ 1994ರ ಅಡಿಯಲ್ಲಿ ಒಂದೇ ಬಾರಿ ತಿದ್ದುಪಡಿ ಮೂಲಕ ನಿಯಮ 44ಎ ಸೇರಿಸಿದೆ. 2006-07ವರೆಗಿನ ಸಾಮಾನ್ಯ ಕಟ್ಟಡ ಕಲ್ಲುಗಳ ಉತ್ಖನವನ್ನು ಪೂರ್ವಾನ್ವಯ ಮರುಪರಿಶೀಲಿಸುತ್ತಿದೆ ಎಂದು ತಿಳಿಸಿದರು.ಕರ್ನಾಟಕ ಮೈನರ್ ಮಿನರಲ್ ಕಾಯ್ದೆ 1994 ಜಾರಿಯಾದಾಗಿನಿಂದಲೇ ಗಣಿ ಗುತ್ತಿಗೆದಾರರು ಮತ್ತು ಪರವಾನಗಿದಾರರಿಗೆ ನಷ್ಟವಾಗಿದೆ. ಕಾಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಎತ್ತಿರುವ ಆಡಿಟ್ ಆಕ್ಷೇಪಣೆಗಳ ಬಳಿಕ, ಗಣಿ ಇಲಾಖೆ ಕೋಟ್ಯಂತರ ರುಪಾಯಿ ಪೂರ್ವಾನ್ವಯ ದಂಡ ವಸೂಲಿ ಮಾಡಲು ಮುಂದಾಗಿದೆ. ಇದು ಅತ್ಯಂತ ಅನ್ಯಾಯದ ಕ್ರಮ. ಇಷ್ಟು ವರ್ಷ ಸರ್ಕಾರಿ ಇಲಾಖೆಗಳ ರೂಢಿಗೆ ಅನುಗುಣವಾಗಿ ಕೆಲಸ ಮಾಡಿದ ಕ್ವಾರಿ ಉದ್ಯಮದ ಮೇಲೆ ಆಡಳಿತಾತ್ಮಕ ಲೋಪದ ಹೊರೆಯನ್ನು ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಸ್ತಾವಿತ ವಸೂಲಾತಿ ಮತ್ತು ದಂಡದಿಂದ MSME ವಲಯ ನಾಶವಾಗಲಿದೆ. ಸಾವಿರಾರು ಜನರ ಜೀವನೋಪಾಯಕ್ಕೆ ಅಪಾಯ ಬರಲಿದೆ. ಕರ್ನಾಟಕದಾದ್ಯಂತ ಕಟ್ಟಡ ನಿರ್ಮಾಣ, ವಸತಿ, ರಸ್ತೆ, ನೀರಾವರಿ, ಮೂಲಸೌಕರ್ಯ ಯೋಜನೆಗಳಿಗೆ ಕೆಟ್ಟ ಪರಿಣಾಮ ಆಗಲಿದೆ. ಅನೇಕ ಕ್ವಾರಿ, ಕ್ರಷರ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವ್ಯವಹಾರ ನಡೆಸಲು ಕಷ್ಟವಾಗಲಿದೆ. ಶೀಘ್ರದಲ್ಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ವಸಂತ್ ತಹಶೀಲ್ದಾರ್, ಬಾಲಾಸಾಹೇಬ್ ಧಾಮ್ಮೇಕರ್, ಸಂದೀಪ್ ಓಲ್ಕರ್, ಸಂಕೇತ್ ಮಬ್ರೇಕರ್, ಅಮಿತ್ ಚೌಗುಲೆ, ಮಾಣಿಕ್ ನಿಲಾಟ್ಕರ್, ರಾಜು ಗುಂಡೋಜಿ, ಅಡ್ವಕೇಟ್ ಘರಬುಡೆ, ಅನಿಲ್ ಗೌಂಡಡ್ಕರ್ ಉಪಸ್ಥಿತರಿದ್ದರು.