ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ೩,೭೦,೦೫೪ ಮಂದಿ ಪೈಕಿ ೬೦,೬೫೧ ಮಂದಿಯ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಗುರುತಿಸಿದ್ದ ೮೧,೧೦೦ ಸಂಶಯಾಸ್ಪದ ಪ್ರಕರಣಗಳ ಕುರಿತು ಮೂರು ತಿಂಗಳ ಕಾಲ ನಡೆದ ಪಿಂಚಣಿದಾರರ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಅನರ್ಹತೆ ಸಾಬೀತಾಗಿದೆ.
ರಾಜ್ಯ ಸರ್ಕಾರ ನಿಯಮಬಾಹಿರವಾಗಿ ಪಿಂಚಣಿ ಪಡೆಯುತ್ತಿರುವವರನ್ನು ಪರಿಶೀಲಿಸಲು ಸಂಯೋಜನೆ ಆ್ಯಪ್ನ್ನು ಸಿದ್ಧಪಡಿಸಿಕೊಂಡಿತ್ತು. ಅದರಲ್ಲಿ ಇಡೀ ರಾಜ್ಯಾದ್ಯಂತ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿತ್ತು. ಮಂಡ್ಯ ಜಿಲ್ಲೆಯಲ್ಲಿ ೮೧,೧೦೦ ಫಲಾನುಭವಿಗಳನ್ನು ಅನರ್ಹರು ಎಂದು ರಾಜ್ಯ ಸರ್ಕಾರ ಗುರುತಿಸಿ ಅವರ ಪಿಂಚಣಿಯನ್ನು ಕಡಿತಗೊಳಿಸಿತ್ತು.ಸಂಶಯಾಸ್ಪದ ಪ್ರಕರಣಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಏಪ್ರಿಲ್ ತಿಂಗಳಿಂದ ಶುರುವಾದ ಸಂಶಯಾಸ್ಪದ ಪ್ರಕರಣಗಳ ಪರಿಶೀಲನೆ ಕಾರ್ಯ ಇದುವರೆಗೆ ಶೇ.೯೮.೬ರಷ್ಟು ಪೂರ್ಣಗೊಂಡಿದೆ. ಸರ್ಕಾರ ಗುರುತಿಸಿದ್ದ ೮೧,೧೦೦ ಸಂಶಯಾಸ್ಪದ ಪ್ರಕರಣಗಳಲ್ಲಿ ೬೦,೬೫೧ ಮಂದಿ ಅನರ್ಹರೆಂದು ಖಚಿತಪಡಿಸಿಕೊಂಡು ೧೯,೩೩೧ ಮಂದಿ ಅರ್ಹರೆಂದು ಗುರುತಿಸಲಾಗಿದೆ. ಇನ್ನೂ ೧,೧೧೮ ಫಲಾನುಭವಿಗಳ ಪರಿಶೀಲನೆಯನ್ನು ಬಾಕಿ ಉಳಿಸಲಾಗಿದ್ದು, ಅದೂ ಕೂಡ ಮಾಸಾಂತ್ಯದೊಳಗೆ ಪೂರ್ಣಗೊಳ್ಳಲಿದೆ.
ಫಲಾನುಭವಿಗಳು ಹೊಂದಿದ್ದ ಆದಾಯ ದೃಢೀಕರಣ ಪತ್ರ, ಪಾನ್ಕಾರ್ಡ್, ಆಧಾರ್ ಮತ್ತು ಮತದಾರರ ಗುರುತಿನ ಚೀಟಿ, ತೆರಿಗೆ ಪಾವತಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಿ ಅನರ್ಹರನ್ನು ಪಿಂಚಣಿ ಯೋಜನೆಯಿಂದ ಕೈಬಿಡಲಾಗಿದೆ. ಫಲಾನುಭವಿಗಳ ವಾರ್ಷಿಕ ಆದಾಯ ₹೩೨ ಸಾವಿರ ಮೇಲ್ಪಟ್ಟು ಇದ್ದರೆ. ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯಲ್ಲಿ ವಯಸ್ಸಿನ ವ್ಯತ್ಯಾಸವಿದ್ದರೆ. ಪಾನ್ ಕಾರ್ಡ್ ಹೊಂದಿ ತೆರಿಗೆ ಪಾವತಿಸುತ್ತಿದ್ದರೆ, ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹವರನ್ನು ಗುರುತಿಸಿ ಪಿಂಚಣಿ ಯೋಜನೆಯಿಂದ ಹೊರಗಿಡಲಾಗಿದೆ.
ರಾಜ್ಯ ಸರ್ಕಾರ ಗುರುತಿಸಿದ್ದ ೮೧,೧೦೦ ಸಂದೇಹಾಸ್ಪದ ಪ್ರಕರಣಗಳ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಿನಿಂದ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ. ಇನ್ನು ಪ್ರತಿ ತಾಲೂಕುಗಳ ತಹಸೀಲ್ದಾರ್ ಅವರು ಅರ್ಹತೆಯನ್ನು ದೃಢೀಕರಿಸುವ ಫಲಾನುಭವಿಗಳು ಮಾತ್ರ ಮುಂದಿನ ದಿನಗಳಲ್ಲಿ ಪಿಂಚಣಿ ಪಡೆಯಲಿದ್ದಾರೆ. ಕಂದಾಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಫಲಾನುಭವಿಗಳ ಅರ್ಹತೆಯ ಪರಿಶೀಲನೆ ನಡೆಸಲಾಗುತ್ತಿದೆ.
----ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿದ್ದ ೩,೭೦,೦೫೪ ಮಂದಿ
ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ವೃದ್ಧಾಪ್ಯ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಯೋಜನೆಗಳಡಿ ಜಿಲ್ಲೆಯಲ್ಲಿ ೩,೭೦,೦೫೪ ಮಂದಿ ₹೩೭,೯೫,೦೮,೮೦೦ ಮೊತ್ತದ ಪಿಂಚಣಿಯನ್ನು ಪಡೆಯುತ್ತಿದ್ದರು. ೬೦ ವರ್ಷ ಮೇಲ್ಪಟ್ಟವರು ೪೫, ೨೩೪, ೬೫ ವರ್ಷ ಮೇಲ್ಪಟ್ಟವರು ೧೦೪,೭೪೭, ಸಂಧ್ಯಾ ಸುರಕ್ಷಾ ಯೋಜನೆಯಡಿ ೯೦೬೨೧, ವಿಧವಾ ವೇತನ ೮೮೨೭೬ ಅಂಗವಿಕಲ ವೇತನ ೧೯೪೩೮, ಮನಸ್ವಿನಿ ಯೋಜನೆಯಡಿ ೬೨೮೯,ಮೈತ್ರಿ ಯೋಜನೆಯಡಿ ೩೯ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ನೀಡುವ ವಿಧವಾ ವೇತನ ೪೮೮ ಮಂದಿ ಸೇರಿ ೩,೭೦,೦೫೪ ಜನರು ಪಿಂಚಣಿ ಪಡೆಯುತ್ತಿದ್ದರು. ಇವರಲ್ಲಿ ೬೦,೬೫೧ ಮಂದಿಯನ್ನು ಇದೀಗ ಪಿಂಚಣಿ ಯೋಜನೆಯಿಂದ ಹೊರಗಿಡಲಾಗಿದೆ.-------
ಸಂಶಯಾಸ್ಪದ ಪ್ರಕರಣಗಳು, ಅರ್ಹ, ಅನರ್ಹ ಪ್ರಕರಣಗಳ ವಿವರ------------------------
ತಾಲೂಕು, ಶಂಕಿತರು, ಅರ್ಹರು, ಅನರ್ಹರು, ಪೂರ್ಣ, ಬಾಕಿ------------------------------------------
ಕೆ.ಆರ್.ಪೇಟೆ, ೧೪೭೩೦, ೧೪೪೮, ೧೨೭೫೭, ೧೪೨೦೫, ೫೨೫ಮದ್ದೂರು, ೧೨೫೯೨, ೨೪೮೪, ೯೯೮೬, ೧೨೪೭೦, ೧೨೨
ಮಳವಳ್ಳಿ, ೧೨೪೯೪, ೧೯೬೦, ೧೦೪೪೪, ೧೨೪೦೪, ೯೦ಮಂಡ್ಯ, ೨೦೬೨೬, ೭೮೭೪, ೧೨೪೮೪, ೨೦೩೫೮, ೨೬೮
ನಾಗಮಂಗಲ, ೬೫೪೯, ೧೪೬೪, ೫೦೮೪, ೬೫೪೮, ೦೧ಪಾಂಡವಪುರ, ೭೪೨೬, ೨೮೮೦, ೪೪೫೦, ೭೩೩೦, ೯೬
ಶ್ರೀರಂಗಪಟ್ಟಣ, ೬೬೮೩, ೧೨೨೧, ೫೪೪೬, ೬೬೬೭, ೧೬-------------------------------------------
ಒಟ್ಟು, ೮೧೧೦೦, ೧೯೩೩೧, ೬೦೬೫೧, ೭೯೯೮೨, ೧೧೧೮------------------------------------------
ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿದ್ದವರಲ್ಲಿ ೩.೭೦ ಲಕ್ಷ ಮಂದಿಯಲ್ಲಿ ೮೧,೧೦೦ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಪರಿಶೀಲನೆಗೆ ಕಳುಹಿಸಿತ್ತು. ಈ ಪ್ರಕರಣಗಳ ಕುರಿತು ದಾಖಲೆಗಳ ಪರಿಶೀಲನೆ ನಡೆಸಿದಾಗ ೬೦,೬೫೧ ಜನರು ಅನರ್ಹರಾಗಿದ್ದಾರೆ. ಅರ್ಹರು ಯಾರನ್ನೂ ಯೋಜನೆಯಿಂದ ಕೈಬಿಟ್ಟಿಲ್ಲ.- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ