ಪಿಂಚಣಿ ಯೋಜನೆ, ರಾಜ್ಯ ಸರ್ಕಾರದ ಆದೇಶದಿಂದ ಅನ್ಯಾಯ: ಹನುಮಂತಪ್ಪ

| Published : Jan 28 2024, 01:16 AM IST

ಪಿಂಚಣಿ ಯೋಜನೆ, ರಾಜ್ಯ ಸರ್ಕಾರದ ಆದೇಶದಿಂದ ಅನ್ಯಾಯ: ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ‍ ಕೇವಲ ಹದಿಮೂರು ಸಾವಿರ ನೌಕರರಿಗೆ ಮಾತ್ರ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸಿ ಆದೇಶ ಮಾಡಿದ್ದು, ಇದರಿಂದ ಪಿಂಚಣಿದಾರರಿಗೆ ಅನ್ಯಾಯವಾಗಿದೆ

ಕನ್ನಡಪ್ರಭ ವಾರ್ತೆ ಗುತ್ತಲ

ಸರ್ಕಾರ‍ ಕೇವಲ ಹದಿಮೂರು ಸಾವಿರ ನೌಕರರಿಗೆ ಮಾತ್ರ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸಿ ಆದೇಶ ಮಾಡಿದ್ದು, ಇದರಿಂದ ಪಿಂಚಣಿದಾರರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಜಿ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವುದಾಗಿ ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿತ್ತು. ನಿಶ್ಚಿತ ಪಿಂಚಣಿ ಸೌಲಭ್ಯಕ್ಕಾಗಿ ಸುಮಾರು 3 ಲಕ್ಷ ನೌಕರರು ಸುದೀರ್ಘ ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಪ್ರಸ್ತುತ ಸರ್ಕಾರ‍ ಕೇವಲ ಹದಿಮೂರು ಸಾವಿರ ನೌಕರರಿಗೆ ಮಾತ್ರ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಖಾಸಗಿ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ 2006 ಏ. 1ಕ್ಕಿಂತ ಮುಂಚಿತವಾಗಿ ನೇಮಕವಾಗಿ ತದನಂತರ ಅನುದಾನಕ್ಕೆ ಒಳಪಟ್ಟ ಸಾವಿರಾರು ನೌಕರರಿಗೆ ಈ ಸೌಲಭ್ಯ ಅನ್ವಯವಾಗಿರುವುದಿಲ್ಲ. 2006 ಏ. 1ಕ್ಕಿಂತ ಮುಂಚಿತವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತಿಥಿ ಶಿಕ್ಷಕರಾಗಿ, ಅರೆಕಾಲಿಕ ಶಿಕ್ಷಕರಾಗಿ, ಅತಿಥಿ ಉಪನ್ಯಾಸಕರಾಗಿ, ದಿನಗೂಲಿ ನೌಕರರಾಗಿ, ಗುತ್ತಿಗೆ ಆಧಾರದ ಶಿಕ್ಷಕರು ಮತ್ತು ನೌಕರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, 2006 ಏ. 1ರ ನಂತರ ಕಾಯಂ ಆದ ಸಾವಿರಾರು ನೌಕರರಿಗೆ ಈ ಸೌಲಭ್ಯ ಅನ್ವಯವಾಗಿರುವುದಿಲ್ಲ.

ಕೆಲವೇ ಕೆಲವು ನೌಕರರಿಗೆ ಅನ್ವಯಿಸಿ ಮಾಡಿರುವ ಈ ಆದೇಶವನ್ನು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಸ್ವಾಗತ ಮಾಡುವುದಿಲ್ಲ ಮತ್ತು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಕೂಡಲೇ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ನೀಡುವ ಮೂಲಕ ಆದೇಶ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.