ಸಾರಾಂಶ
ಪಟ್ಟಣದ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಶಾಲಾ ಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.
ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿಪಟ್ಟಣದ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಶಾಲಾ ಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ಕೆಲವು ಸಲ ಬೈಕ್ ಸವಾರರ ಮೇಲೂ ದಾಳಿ ಮಾಡಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಸವಾರಿಸಬೇಕಾದ ಅನಿವಾರ್ಯತೆ ಇದೆ. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕಾದ ಪುರಸಭೆ, ಪಶು ಸಂಗೋಪನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪಟ್ಟಣದ ಶಂಕರನಗರ, ಕನಕ ನಗರ, ವಿದ್ಯಾನಗರ, ಬಸವನಗರ, ವಿಕ್ರಂಪುರ, ಸಿದ್ಧಾರ್ಥ ನಗರ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗಿದ್ದು, ರಸ್ತೆಗಳಲ್ಲಿ ಮಹಿಳೆಯರು, ವಯೋವೃದ್ಧರು ವಾಯು ವಿಹಾರ ಮಾಡಲು ಹಿಂದೇಟು ಹಾಕುವಂತಾಗಿದೆ. ಚಿಕ್ಕ ಮಕ್ಕಳು ಅಂಗಡಿ ಇತರೆ ಕೆಲಸಗಳಿಗೆ ಹೊರ ಹೋಗಲು ಹೆದರುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಬಿಡುವ ಮಹಿಳೆಯರು, ಬೈಕ್ ಮೇಲೆ ತೆರಳುವ ಪಾಲಕರು ಆತಂಕದಿಂದಲೇ ಸಂಚರಿಸುತ್ತಿದ್ದಾರೆ. ಬೀದಿ ನಾಯಿಗಳು ಬೈಕ್ ಸವಾರರು, ಚಿಕ್ಕಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿ ವೇಳೆ ವಿವಿಧ ವಾರ್ಡ್, ಕಾಲೋನಿಗಳಲ್ಲಿ ಬೀದಿ ನಾಯಿಗಳು ಉಪಟಳ ಹೆಚ್ಚಾಗಿದೆ.ಗ್ರಾಮೀಣ ಪ್ರದೇಶದಲ್ಲೂ ನಾಯಿಗಳ ಕಾಟ ವಿಪರೀತವಾಗಿದ್ದು, ಗುಂಪು, ಗುಂಪಾಗಿ ಓಡಾಡಿ ರೈತರ ಜಮೀನುಗಳಲ್ಲಿ ಬೆಳೆದ ಗೋವಿನ ಜೋಳದ ಫಸಲನ್ನು ಹಾಳು ಮಾಡುತ್ತಿವೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ರೈತರು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ವಿಜಯಪುರ ರಸ್ತೆ, ಬಸ್ ನಿಲ್ದಾಣ ರಸ್ತೆಯಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ಓಡಾಡುತ್ತಿರುತ್ತವೆ. ಅಂಗಡಿಗಳು, ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ, ಭಾಗೀರಥಿ ನಾಲಾದಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬುದು ಸ್ಥಳೀಯರ ಆರೋಪ. ನಿಯಂತ್ರಣಕ್ಕೆ ಕ್ರಮವಿಲ್ಲ:ನಾಯಿಗಳ ಹಾವಳಿ ತಡೆಯಲು ಕೆಲ ವರ್ಷಗಳ ಹಿಂದೆ ಪುರಸಭೆಯಿಂದ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು. ಅನೇಕ ವರ್ಷಗಳಿಂದ ಪಶು ಸಂಗೋಪನಾ ಇಲಾಖೆಯಿಂದ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದೇ ಇರುವುದು ಮತ್ತು ಇವುಗಳ ನಿಯಂತ್ರಣಕ್ಕೆ ಕ್ರಮ ಪುರಸಭೆ ಕ್ರಮ ಕೈಗೊಳ್ಳದೆ ಇರುವುದರಿಂದ ಇತ್ತೀಚೆಗೆ ಇವುಗಳ ಉಪಟಳ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.ಪುರಸಭೆ ಆಡಳಿತ ಚುರುಕಾಗಲಿ :ಪುರಸಭೆಯವರು, ಪಶು ಸಂಗೋಪನ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೀದಿ ನಾಯಿಗಳು ಹಾವಳಿಗೆ ನಿಯಂತ್ರಣ ಹಾಕಲು ಕ್ರಮ ಕೈಗೊಳ್ಳಬೇಕು. ನಿಯಂತ್ರಣ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಹಾಗೂ ಕಡಿತಕ್ಕೆ ಒಳಗಾದರೆ ಚುಚ್ಚುಮದ್ದು ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಬೇಸತ್ತು ಹೋಗಿದ್ದೇವೆ. ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಭಯದಿಂದಲೇ ಸಂಚರಿಸುತ್ತಿದ್ದಾರೆ. ರಾತ್ರಿ ವೇಳೆ ನಿದ್ದೆಗೆಡಿಸುತ್ತಿರುವ ಈ ನಾಯಿಗಳ ಹಾವಳಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
-ಮಹಾಂತೇಶ ಹೊನ್ನಳ್ಳಿ, ಶಂಕರನಗರ ನಿವಾಸಿ.ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ದೂರುಗಳು ಬಂದಿವೆ. ಒಂದೆರಡು ದಿನಗಳಲ್ಲಿ ಟೆಂಡರ್ ಕರೆದು ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಸಹ ದಾಳಿಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಬೇಕು.
-ಅಶೋಕ ಗುಡಿಮನಿ, ಮುಖ್ಯಾಧಿಕಾರಿ, ಪುರಸಭೆ ಅಥಣಿ.ಪುರಸಭೆ, ಗ್ರಾಪಂ ಆಡಳಿತ ತಮ್ಮ ವ್ಯಾಪ್ತಿಯಲ್ಲಿನ ಬೀದಿನಾಯಿಗಳನ್ನು ಹಿಡಿದು ಕೊಟ್ಟರೆ ಇಲಾಖೆಯ ಸಿಬ್ಬಂದಿಯಿಂದ ಅವುಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈಗಾಗಲೇ ಪುರಸಭೆ ಅಧಿಕಾರಿಗಳು, ತಾಪಂ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
- ಡಾ.ಜ್ಞಾನದೇವ ಕಾಂಬಳೆ, ವೈದ್ಯಾಧಿಕಾರಿ ಪಶು ಸಂಗೋಪನಾ ಇಲಾಖೆ, ಅಥಣಿ.