ಜೆಡಿಎಸ್‌ನ ಪಂಚರತ್ನ ಯೋಜನೆ ಜನರಿಗೆ ಅರ್ಥವಾಗಲಿಲ್ಲ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ

| Published : Dec 16 2023, 02:00 AM IST

ಜೆಡಿಎಸ್‌ನ ಪಂಚರತ್ನ ಯೋಜನೆ ಜನರಿಗೆ ಅರ್ಥವಾಗಲಿಲ್ಲ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನ ಪಂಚರತ್ನ ಯೋಜನೆ ಜನರಿಗೆ ಅರ್ಥವಾಗಲಿಲ್ಲ, ಜನರು ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಮರುಳಾದರು. ಇದರಿಂದ ರೈತ ಪರವಾಗಿ ನಿಂತಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಯೋಜನೆಗಳಿಗೆ ಹಿನ್ನಡೆಯಾಯಿತು: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ

ಕನ್ನಡಪ್ರಭ ವಾರ್ತೆ ಭಾರತೀನಗರರೈತರು ಮತ್ತು ಜನಸಾಮಾನ್ಯರ ಪರ ಯೋಜನೆ ರೂಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.

ಶ್ರೀಚಾಮುಂಡೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಳೆದ ಚುನಾವಣೆ ವೇಳೆ ಜನರು ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಮರುಳಾದರು. ಇದರಿಂದ ರೈತ ಪರವಾಗಿ ನಿಂತಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಯೋಜನೆಗಳಿಗೆ ಹಿನ್ನಡೆಯಾಯಿತು ಎಂದರು.

ಸರ್ಕಾರ ಕೊಡುವಂತಹ 2 ಸಾವಿರದಿಂದ ನಿಮ್ಮ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುತ್ತೇವೆಂದು ಹೇಳಿ ವಿದ್ಯುತ್ ಮತ್ತು ಬಸ್‌ದರವನ್ನು ಹೆಚ್ಚಳ ಮಾಡಿ ರೈತರಿಗೆ ಬರೆ ಎಳೆದಿದ್ದಾರೆ. ಇಂತಹ ಯೋಜನೆಗಳು ನಮಗೆ ಬೇಕೇ ಪ್ರಶ್ನಿಸಿದರು.

ಈ ಹಿಂದೆ ಸ್ವಾಭಿಮಾನದಿಂದ ಬದುಕುತ್ತಿದ್ದ ನಮ್ಮ ಜನ ಕೆಲವರು ಹಣ, ಹೆಂಡ, ಬಾಡುಗಳಿಗೆ ಮಾರು ಹೋಗಿದ್ದಾರೆ. ಹಿಂದಿನ ನಮ್ಮ ಪೂರ್ವಿಕರು ಜೀತ ಮಾಡಿಯಾದರೂ ಹೆಂಡತಿ-ಮಕ್ಕಳನ್ನು ಸಾಕುತ್ತಿದ್ದರು. ಯಾರ ಮುಂದೆಯೂ ಕೈ ಚಾಚುತ್ತಿರಲಿಲ್ಲ. ಇಂದು ಪರಿಸ್ಥಿತಿ ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ವಿಷಾದಿಸಿದರು.

ಆಟೋ ಮತ್ತು ಬಸ್ ಚಾಲಕರಿಂದ ಕನ್ನಡ ರಾಜ್ಯದಲ್ಲಿ ಹೆಚ್ಚು ಪ್ರತಿಬಿಂಬಿಸುತ್ತಿದೆ. ಸರ್ಕಾರ ಕೇವಲ ನವೆಂಬರ್ 1 ರಂದು ರಾಜ್ಯೋತ್ಸವವನ್ನು ಆಚರಣೆ ಮಾಡಿ ಕದ ತೆರೆದು ಮುಚ್ಚುತ್ತಾರೆ. ಆದರೆ, ಆಟೋಚಾಲಕರು ಮತ್ತು ಬಸ್ ಚಾಲಕರು ನವಂಬರ್‌ನಿಂದ ಮಾರ್ಚ್ ತಿಂಗಳ ವರೆವಿಗೂ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಲೇ ಇರುತ್ತಾರೆಂದು ಪ್ರಶಂಸಿದರು.

ರಾಷ್ಟ್ರ ಕವಿ ಕುವೆಂಪು ಇಂಗ್ಲೀಷ್ ಭಾಷೆಯಿಂದ ಕನ್ನಡದ ಸಾಹಿತ್ಯ, ಕವಿತೆಗಳನ್ನು ಬರೆಯಲು ಮೊದಲು ಪ್ರಾರಂಭಿಸಿದರು. ಕನ್ನಡ ಭಾಷೆಯನ್ನು ತಮ್ಮ ಉಸಿರನ್ನಾಗಿಸಿಕೊಂಡು ಪ್ರಪಂಚಕ್ಕೆ ಕನ್ನಡದ ಕಂಪುಗಳನ್ನು ಹರಡಿದಂತಹ ಮಹಾನ್ ಕವಿ ಎಂದು ಬಣ್ಣಿಸಿದರು.

ಇದೇ ವೇಳೆ ಆಟೋಚಾಲಕರಿಂದ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಜರುಗಿತು. ಇದೇ ವೇಳೆ ಕಿರುತೆರೆ ಕಲಾವಿದ ಕ್ಯಾತಘಟ್ಟದ ಅಭಿ, ಸಂಘದ ಗೌರವಾಧ್ಯಕ್ಷ ಕೆ.ಟಿ.ಸುರೇಶ್, ಸಂಘಟನಾ ಗೌರವಾಧ್ಯಕ್ಷ ಅಣ್ಣೂರು ವಿನು, ಅಧ್ಯಕ್ಷ ರವಿ, ಕಾರ್ಯದರ್ಶಿ ಲಕ್ಷ್ಮಣ್, ನರಸಿಂಹ, ಸಿದ್ದರಾಮು, ಜಗದೀಶ್, ಸ್ವಾಮಿ, ಕೆ.ಪಿ.ದೊಡ್ಡಿ ಶಿವರಾಮು, ಬೊಮ್ಮನದೊಡ್ಡಿ ರವೀಂದ್ರ , ರಘುವೆಂಕಟೇಗೌಡ, ಗೌರಿಶಂಕರ ಸೇರಿದಂತೆ ಆಟೋ ಚಾಲಕರು ಮತ್ತು ಮಾಲಕರು ಹಲವರಿದ್ದರು.15ಕೆಎಂಎನ್ ಡಿ28

ಭಾರತೀನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ, ಕನ್ನಡರಾಜ್ಯೋತ್ಸವದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಧ್ವಜಾರೋಹಣ ನೆರವೇರಿಸಿದರು.-------------