ಸಾರಾಂಶ
ಹಾವೇರಿ: ವಧು- ವರಾನ್ವೇಷಣೆ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಧು- ವರರು ಮೂರ್ನಾಲ್ಕು ದಿನದಲ್ಲಿ ಕುಟುಂಬದವರ ಜತೆಗೆ ಚರ್ಚಿಸಿ, ಯೋಚಿಸಿ ವೆಬ್ಸೈಟ್ನಲ್ಲಿ ತಮ್ಮಿಷ್ಟದ ಸಂಗಾತಿಯನ್ನು ಆಯ್ಕೆ ಮಾಡಿ ಆಯೋಜಕರಿಗೆ ತಿಳಿಸುವಂತೆ ಶ್ರೀಕ್ಷೇತ್ರ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸುಕ್ಷೇತ್ರ ಅಗಡಿ ಆನಂದವನದಲ್ಲಿ ಭಾನುವಾರ ಶೇಷಾಚಲ ಸದ್ಗುರು ಸಂಸ್ಥಾನ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಂಗಳಸೂತ್ರ ಫೌಂಡೇಶನ್ ಹಾಗೂ ಹೇಮಕುಶ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಉಚಿತ ಬ್ರಾಹ್ಮಣ ವಧು- ವರಾನ್ವೇಷಣೆ ಸಮಾವೇಶದ ಸಮಾರೋಪ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅಗಡಿ ಆನಂದವನವು ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಬ್ರಾಹ್ಮಣ ಸಮಾಜದವರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಶಿಬಿರ, ಕೃತಕ ಅಂಗಾಂಗ ಜೋಡಣೆ ಹೀಗೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಅದೇ ರೀತಿ ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ವಯಸ್ಸಾದರೂ ಮದುವೆಯಾಗುತ್ತಿಲ್ಲ ಎಂಬ ಕೊರಗನ್ನು ದೂರ ಮಾಡಿಸಲು ಎರಡು ದಿನಗಳ ಕಾಲ ವಧು- ವರರಾನ್ವೇಷಣೆ ಸಮಾವೇಶ ನಡೆಸುವ ಮೂಲಕ ಶ್ರೀಮಠವು ಅಳಿಲು ಸೇವೆ ಮಾಡುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸಿದ್ದ ವಧು- ವರರು ನಿರಾಶೆಭಾವವನ್ನು ಮರೆತು ಆದಷ್ಟು ಶೀಘ್ರದಲ್ಲಿ ನಮಗೆ ಈ ವರ, ಈ ವಧು ಇಷ್ಟವಾಗಿದೆ ಎಂದು ಮಾಹಿತಿ ತಿಳಿಸಿ ಕಲ್ಯಾಣೋತ್ಸವ ಮಾಡಿಕೊಳ್ಳಬೇಕು. ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ವಧು- ವರ ಅನ್ವೇಷಣಾ ಕಾರ್ಯಕ್ರಮ ಬಹಳ ವಿಶೇಷ ಕಾರ್ಯಕ್ರಮವಾಗಿದ್ದು, ವಿವಾಹವಾಗದವರು ಈ ಸಮಾವೇಶದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶೇಷಾಚಲ ಸದ್ಗುರುಗಳ ಮಠದಲ್ಲಿ ವಧು- ವರರನ್ನು ಕೂಡಿಸಿ, ಸಮಾಜದ ಉದ್ಧಾರ, ಸಮಾಜದ ಪ್ರತಿಷ್ಠೆ ಎತ್ತಿ ಹಿಡಿಯಲ್ಲಿ ಆಯೋಜಕರು ಶ್ರಮಿಸುತ್ತಿದ್ದಾರೆ. ಬಡವರಿಗೆ ವಧು- ವರನನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಾವೇಶ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಇಂತಹ ಸಮ್ಮೇಳನ ಹೆಚ್ಚು ಹೆಚ್ಚು ನಡೆಯಲಿ. ವಧು- ವರರ ಕಲ್ಯಾಣ ಆಗಲಿ ಎಂದರು.ಆನಂದವನದ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ಎರಡು ದಿನಗಳ ಕಾಲ ನಡೆದ ಸಮಾವೇಶ ಬಹಳ ಯಶಸ್ವಿಯಾಗಿದೆ. ಸುಮಾರು 30ಕ್ಕಿಂತ ಹೆಚ್ಚು ವಿವಾಹಗಳು ಈ ಸಮಾವೇಶದಲ್ಲಿ ನಿಶ್ಚಯವಾಗುವ ವಿಶ್ವಾಸವಿದೆ. ಸದ್ಗುರು ಶೇಷಾಚಲ ಶ್ರೀಗಳ ಆಶೀರ್ವಾದ ಎಲ್ಲ ವಧು- ವರರಿಗೆ ಇದ್ದು, ಕಂಕಣಭಾಗ್ಯ ನೆರವೇರಲಿದೆ. ಇದೊಂದು ಬ್ರಾಹ್ಮಣ ಸಮಾಜದ ಶಕ್ತಿ ಸಮಾವೇಶವಾಗಿದ್ದು, ಭಗವಂತನ ಕಲ್ಯಾಣೋತ್ಸವ ನಮ್ಮ ಮುಂದೆ ನಡೆಯುತ್ತಿರುವುದು ಸಂತಸವಾಗಿದೆ ಎಂದರು.ವೇದಿಕೆ ಕಾರ್ಯಕ್ರಮ ನಂತರ ಪ್ರಭು ವೆಂಕಟರಮಣ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ಅತ್ಯಂತ ವೈಭವಯುತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳಸೂತ್ರ ಫೌಂಡೇಶನ್ನ ಶ್ರೀನಿವಾಸ್ ಭಾರದ್ವಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಅತಿಥಿ ಮಹೋದಯರಿಗೆ ಗೌರವ ಸಮ್ಮಾನ ನಡೆಯಿತು.ಕಾರ್ಯಕ್ರಮದಲ್ಲಿ ಹೇಮಕುಶ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಲವ ಬಹದ್ದೂರ ದೇಸಾಯಿ, ಎಕೆಬಿಎಂಎಸ್ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ನಾಯ್ಕ, ಹೇಮಕುಶ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪವನಬಹದ್ದೂರ ದೇಸಾಯಿ, ಎಕೆಬಿಎಂಎಸ್ ಮಾಜಿ ಸಂಚಾಲಕ ವಿಜಯ ನಾಡಜೋಶಿ, ಮಾಜಿ ಕಾರ್ಯಕಾರಿಣಿ ಸದಸ್ಯ ಪ್ರಭಾಕರರಾವ್ ಮಂಗಳೂರು, ರಾಕಾ ದೇಶಪಾಂಡೆ, ದೀಪಾ ಪಾಟೀಲ, ಭಾಸ್ಕರ್ ದೀಕ್ಷಿತ್, ಮುರಳೀಧರ, ಸುಧೀರ್ ದೇಶಪಾಂಡೆ, ಶ್ರೀನಿವಾಸ ಶಿವಪೂಜೆ, ಮೋಹನ್ ದೀಕ್ಷಿತ್, ಮಾರ್ತಾಂಡ ದಿಕ್ಷೀತ, ಹುಬ್ಬಳ್ಳಿಯ ಕುರ್ತಕೋಟಿ ಸೇರಿದಂತೆ ಇತರರು ಇದ್ದರು.