ಕನ್ನಡಪ್ರಭ ವಾರ್ತೆ, ಮಂಡ್ಯ
ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ಆ.೬, ೭ಮತ್ತು ೮ರಂದು ತುಮಕೂರು ಜಿಲ್ಲೆಯ ದೊಡ್ಡಹೊಸೂರು ಗ್ರಾಮದಲ್ಲಿ ನಡೆಯುವ ಭಾರತದ ಮಣ್ಣು, ನೀರು, ಜೀವನೋಪಾಯಗಳು, ಸಂವಿಧಾನದ ಮೌಲ್ಯಗಳು ಮತ್ತು ಭಾರತದ ಯುವಜನರ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಕೈಗೊಳ್ಳುತ್ತಿರುವ ಶಾಂತಿಯುತವಾದ ಜನ ಚಳವಳಿಯಲ್ಲಿ ಜಿಲ್ಲೆಯಿಂದಲೂ ನೂರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ತಿಳಿಸಿದರು.ಎಐ ಪಾರ್ಕ್ ಎನ್ನುವುದು ಕೇವಲ ಡೇಟಾ ಕೇಂದ್ರ ಅಷ್ಟೇ ಅಲ್ಲ. ಅದು ಕೆಲಸ, ಜೀವನ, ಇಷ್ಟನ್ನೂ ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳ ನಗರ ಪ್ರದೇಶಗಳಾಗಿರುತ್ತವೆ. ಇದಕ್ಕೆ ಕೆ.ಆರ್ಎಸ್ನಂತಹ ಜಲಾಶಯದ ೯ ಪಟ್ಟು ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ. ಜೊತೆಗೆ ಜಾಗತಿಕವಾಗಿ ಲಭ್ಯವಿರುವ ಮೂರನೇ ಒಂದು ಭಾಗದಷ್ಟು ವಿದ್ಯುತ್ನ ಅವಶ್ಯಕತೆ ಇದೆ. ಇದರಿಂದ ಎಷ್ಟು ಪ್ರಮಾಣದ ಭೂಮಿ, ನೀರು ಹಾಗೂ ವಿದ್ಯುತ್ನ್ನು ಬಳಕೆ ಮಾಡಬಹುದು ಎಂದು ಆತಂಕ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.
ಈಗಾಗಲೇ ವಿಶ್ವದ ಹಲವಾರು ರಾಷ್ಟ್ರಗಳು ಎಐ ಡೇಟಾ ಸೆಂಟರ್ನ್ನು ನಿಷೇಧ ಮಾಡಿವೆ. ಹೀಗಿರುವಾಗ ಭಾರತದಲ್ಲಿ ಎಐ ಡೇಟಾ ಸೆಂಟರ್ಗಳು ತಲೆ ಎತ್ತಲು ಆರಂಭಿಸಿವೆ. ತುಮಕೂರು ಜಿಲ್ಲೆಯ ದೊಡ್ಡಹೊಸೂರು ಗ್ರಾಮ ಹಾಗೂ ಬಿಡದಿಯಲ್ಲಿ ಟೌನ್ಶಿಪ್ ನೆಪವೊಡ್ಡಿ ರೈತರಿಂದ ಸಾವಿರಾರು ಎಕರೆ ಜಮೀನನ್ನು ಪಡೆದು ಎಐ ಡೇಟಾ ಸೆಂಟರ್ ಸ್ಥಾಪಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ವಿಶಾಖಪಟ್ಟಣಂನಲ್ಲಿ ಎಐ ಡೇಟಾ ಸೆಂಟರ್ ಸ್ಥಾಪಿಸಿ ಅಲ್ಲಿನ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಇದರ ದುಷ್ಪರಿಣಾಮಗಳು ಭೀಕರವಾಗಿರುವುದರಿಂದ ನಮ್ಮಲ್ಲಿ ಎಐ ಡೇಟಾ ಸೆಂಟರ್ ಸ್ಥಾಪನೆ ಬೇಡ ಎಂಬ ಹೋರಾಟವನ್ನು ಗಾಂಧಿ ಸಹಜ ಬೇಸಾಯ ಆಶ್ರಮ ಕೈಗೆತ್ತಿಕೊಂಡಿದೆ. ಹಾಗಾಗಿ ನಾವೂ ಸೇರಿದಂತೆ ಜಿಲ್ಲೆಯಿಂದ ಸಾಕಷ್ಟು ರೈತರು, ಪ್ರಗತಿರರು, ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಚಳವಳಿಯಲ್ಲಿ ಭಾಗವಹಿಸುತ್ತಿದ್ದೇವೆ ಎಂದರು.
ಆ.೬ರಂದು ಚಳವಳಿಯ ಪೂರ್ವಭಾವಿ ಸಭೆ ನಡೆಯಲಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎ ಸಂಶೋಧಕ ಜೀವ್ಜೇನ್, ರಮ್ಮೆಲ್ಟ್ ಎಲಿನ್, ಕೃಷಿ ತಜ್ಞ ಡಾ. ಮಂಜುನಾಥ್, ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸುವರು.
ಆ.೭ರಂದು ಕೆಂಗೇರಿಯ ವಿಶ್ವಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ, ಆ.೮ರಂದು ಹೋರಾಟದ ರೂಪುರೇಷೆ ಸಿದ್ಧಪಡಿಸುವ ಕುರಿತಂತೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.
ರೈತ ಮುಖಂಡರಾದ ಚಂದ್ರಶೇಖರ್, ಅಣ್ಣಯ್ಯ, ಮುಖಂಡರಾದ ಸಿ.ಕುಮಾರಿ, ಸುಶೀಲಮ್ಮ, ಆನಂದ್, ಶಿವಪ್ರಕಾಶ್ ಗೋಷ್ಠಿಯಲ್ಲಿದ್ದರು.