ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆರ್ಥಿಕ ಅಶಿಸ್ತಿನ ಮೂಲಕ ಕನ್ನಡ ಸಾಹಿತ್ಯ ಪರಿಷತ್ನ್ನು ದಿವಾಳಿ ಮಾಡುತ್ತಿರುವ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಮೇ ೧೭ರಂದು ಮಂಡ್ಯದಲ್ಲಿ ಸಮಾನ ಮನಸ್ಕರ ಒಕ್ಕೂಟದಿಂದ ಜನ ಚಳವಳಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ತನಗೆ ಅನುಕೂಲಕರವಾದ ರೀತಿಯಲ್ಲಿ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದು, ಈ ಸಂಬಂಧ ಏಪ್ರಿಲ್ ೧೭ರಂದು ಸಮಾನ ಮನಸ್ಕರ ಒಕ್ಕೂಟದಿಂದ ಸಭೆ ನಡೆಸಿ ಆತನನ್ನು ಅಮಾನತಿನಲ್ಲಿಟ್ಟು ಕಸಾಪಗೆ ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡುವಂತೆ ಏ.೨೭ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಸಾಹಿತಿಗಳು ಭಾಗಿ:ಒಕ್ಕೂಟದ ತೀರ್ಮಾನದಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಸಭೆಯನ್ನು ಮೇ ೧೭ಕ್ಕೆ ಹಮ್ಮಿಕೊಳ್ಳಲಾಗಿದೆ. ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದು, ಮುಖ್ಯಮಂತ್ರಿ ಚಂದ್ರು, ಡಾ.ಮುದ್ದುಕೃಷ್ಣ, ಹಂಪಾ ನಾಗರಾಜಯ್ಯ ಸೇರಿದಂತೆ ಹಲವು ಹಿರಿಯ ಸಾಹಿತಿಗಳು, ಕನ್ನಡಪರ, ಪ್ರಗತಿಪರ ಹೋರಾಟಗಾರರು, ವಿಚಾರವಂತರು ಪಾಲ್ಗೊಳ್ಳುವರು ಎಂದರು.
ಸಂಪುಟ ದರ್ಜೆ ಸ್ಥಾನ ಹಿಂಪಡೆಯಲಿ:ಸಮ್ಮೇಳನದ ಮೂಲಕ ಮಹೇಶ್ ಜೋಶಿ ಅಶಿಸ್ತು, ಹಣ ದುರುಪಯೋಗ, ಸರ್ವಾಧಿಕಾರಿ ಧೋರಣೆಯ ಅಧ್ಯಕ್ಷಗಿರಿಯನ್ನು ಅಮಾನತ್ತಿನಲ್ಲಿಡುವುದು, ಸರ್ಕಾರದ ಸಂಪುಟ ದರ್ಜೆಯ ಸ್ಥಾನಮಾನ ಹಿಂಪಡೆಯುವುದು, ೨೦೨೨, ೨೩ರಲ್ಲಿನ ಬೈಲಾ ತಿದ್ದುಪಡಿ ಹಿಂಪಡೆಯುವುದು, ಅಜೀವ ಸದಸ್ಯರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿರುವುದು, ಮತ್ತೆ ತಿದ್ದುಪಡಿ ತರುವ ತೀರ್ಮಾನ ಹಿಂಪಡೆಯುವಂತೆ ಒತ್ತಾಯಿಸಿ ಸಾಹಿತಿಗಳು, ವಿಚಾರವಂತರು, ಕನ್ನಡ, ಪ್ರಗತಿರ ಹೋರಾಟಗಾರರು, ಕಸಾಪ ಅಜೀವ ಸದಸ್ಯರು, ಸಮಾನ ಮನಸ್ಕರ ಒಕ್ಕೂಟದ ಸಮಾವೇಶ ನಡೆಸಲು ತೀರ್ಮಾನಿಸಿದೆ ಎಂದರು.
ಕಸಾಪ ಅಧ್ಯಕ್ಷ ಸರ್ಕಾರಕ್ಕಿಂತಲೂ ದೊಡ್ಡವನಲ್ಲ, ತಾನೇ ಸರ್ಕಾರಕ್ಕಿಂತ ದೊಡ್ಡವನು ಎಂಬ ಹಮ್ಮಿನಿಂದ ವರ್ತಿಸುತ್ತಿದ್ದು, ಸಮ್ಮೇಳನದ ಖರ್ಚಿನ ಲೆಕ್ಕ ನೀಡುತ್ತಿಲ್ಲ, ಜಿಲ್ಲಾಧಿಕಾರಿಗಳಿಗೂ ಹೆದರದೇ ಸರ್ವಾಧಿಕಾರಿತನ ತೋರುತ್ತಿದ್ದಾನೆ. ಸಾಹಿತ್ಯ ಸಮ್ಮೇಳನಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ಬದಲು ಜನರಿಂದ ದೇಣಿಗೆ ಸಂಗ್ರಹಿಸಲಿ, ಸರ್ಕಾರವೂ ಇತಿ ಮಿತಿಯಲ್ಲಿ ಹಣ ನೀಡಲಿ ಎಂದು ಸಲಹೆ ನೀಡಿದರು.ಸಾಹಿತಿಗಳಲ್ಲಿ ಭಯದ ವಾತಾವರಣ ಸೃಷ್ಠಿಸಿ, ಬೈಲಾ ತಿದ್ದುಪಡಿ ಮಾಡುವ ಹುನ್ನಾರು ಹೊಂದಿರುವ ಈತ ತೊಲಗಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಯಲಿ ಎಂದು ಆಶಿಸಿದರು.
ಸರ್ಕಾರ ಮಧ್ಯಸ್ಥಿಕೆ ವಹಿಸಲಿ:ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಕಸಾಪ ಬೈಲಾ ತಿದ್ದುಪಡಿ ರದ್ದು ಮಾಡಲು ಸರ್ಕಾರ ಮಧ್ಯಸ್ಥಿಕೆ ವಹಿಸಿ, ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲೆಕ್ಕ ನೀಡಲು ತಾಕೀತು ಮಾಡಬೇಕು ಎಂದು ಆಗ್ರಹಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳು ಅಥವಾ ಜೋಶಿಯದ್ದಲ್ಲ. ಅದು ಕನ್ನಡಿಗರ ಸಂಸ್ಥೆ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮದಾಗಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಿ.ಪಿ.ಸ್ವಾಮಿ ಮಾತನಾಡಿ, ಜೋಶಿ ತನ್ನ ಅಧಿಕಾರವಧಿಯ ೪ ವರ್ಷಗಳಲ್ಲಿ ೩ ಬಾರಿ ಬೈಲ ತಿದ್ದುಪಡಿ ಮಾಡಿದ್ದಾರೆ, ತನ್ನ ವಿರುದ್ಧ ೨೫ ಲಕ್ಷ ರು. ದಂಡ ಕಟ್ಟುವ ಅಪರಾಧವಿದ್ದು, ಇದರ ಹಿನ್ನಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮೇ ೪ರ ಪೂರ್ವ ಸಭೆಗೆ ಭಾಗವಹಿಸಲು ಮನವಿ:
ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಮಹೇಶ್ ಜೋಶಿ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲು ಮಾಡಿ, ಅವರನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡುತ್ತಾ, ಸಾಹಿತಿಗಳನ್ನು ಭಯದಲ್ಲಿ ಇಡುವ ಕೆಲಸ ಮಾಡಲಾಗುತ್ತಿದೆ. ಮೇ ೧೭ರ ಜನಚಳವಳಿಗೂ ಮುನ್ನ ಮೇ ೪ರಂದು ಜಿಲ್ಲೆಯ ಹಿರಿಯ ಸಾಹಿತಿಗಳು ಕನ್ನಡಪರ, ಪ್ರಗತಿಪರ, ರೈತಪರ ಹೋರಾಟಗಾರರು, ಮುಖ್ಯಸ್ಥರು, ಮತ್ತು ಸದಸ್ಯರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಎಲ್ಲರೂ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಕಾರಸವಾಡಿ ಮಹದೇವು, ಎಂ.ವಿ.ಕೃಷ್ಣ ಇದ್ದರು.