ಸಾರಾಂಶ
371ಜೆ ಕಲಂ ಸಮರ್ಪಕ ಅನುಷ್ಠಾನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಬರುವ ಅ.6 ರಿಂದ ಜನಾಂದೋಲನ ಚಳವಳಿ ಹಮ್ಮಿಕೊಂಡಿದ್ದು, ಈ ಭಾಗದ ಎಲ್ಲ ಸಂಘ-ಸಂಸ್ಥೆಗಳು ಮತ್ತು ಜನಪರ ರಾಜಕೀಯ ಪಕ್ಷಗಳು ಬೆಂಬಲಿಸಬೇಕು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ಕೋರಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
371ಜೆ ಕಲಂ ಸಮರ್ಪಕ ಅನುಷ್ಠಾನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಬರುವ ಅ.6 ರಿಂದ ಜನಾಂದೋಲನ ಚಳವಳಿ ಹಮ್ಮಿಕೊಂಡಿದ್ದು, ಈ ಭಾಗದ ಎಲ್ಲ ಸಂಘ-ಸಂಸ್ಥೆಗಳು ಮತ್ತು ಜನಪರ ರಾಜಕೀಯ ಪಕ್ಷಗಳು ಬೆಂಬಲಿಸಬೇಕು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ಕೋರಿದರು.ನಗರದ ಸರ್ಕ್ಯೂಟ್ ಹೌಸ್ನಲ್ಲಿ ಭಾನುವಾರ ನಡೆದ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಬಳ್ಳಾರಿಯಿಂದ ಪ್ರಾರಂಭವಾಗುವ ಜನಾಂದೋಲನ ಸಿಂಧನೂರಿಗೆ ಅ.8ಕ್ಕೆ ಬರಲಿದ್ದು, ಇಲ್ಲಿಯ ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಬೇಕು. ಪಕ್ಷಾತೀತವಾಗಿ ನಡೆಯುವ ಹೋರಾಟದಿಂದ ಮಾತ್ರ ಸಮಸ್ಯೆಗೆ ಪರಿಹಾರ ಲಭಿಸುತ್ತದೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಸಿಂಧನೂರು ಕ್ಷೇತ್ರದಲ್ಲಿ ತಮ್ಮ ಸಹೋದರ ವೆಂಕಟರಾವ್ ನಾಡಗೌಡ ಶಾಸಕರಾಗಿದ್ದ ಅವಧಿಯಲ್ಲಿ 650 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅತಿಥಿ ಶಿಕ್ಷಕರಿಗೆ ಗೌರವಧನವನ್ನು ಸಹ ವಿಧಾನಸೌಧದಲ್ಲಿ ಚರ್ಚಿಸಿ ಹೆಚ್ಚಿಸಲಾಯಿತು. ನವಲಿ ಜಲಾಶಯದ ಅನುಷ್ಠಾನಕ್ಕೆ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಾಗಿದೆ ಎಂದರು.ಮುಖಂಡ ಎಚ್.ಎನ್.ಬಡಿಗೇರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್ಸಾಬ್ ಮಾತನಾಡಿದರು.
ನಗರಸಭೆ ಸದಸ್ಯ ಕೆ.ಜಿಲಾನಿಪಾಷಾ, ಮುಖಂಡರಾದ ಡಾ.ವಸೀಮ್ ಅಹ್ಮದ್, ಖಾದರ್ಸುಭಾನಿ, ಅನ್ವರ್ಪಾಷಾ ಮಾತನಾಡಿದರು. ವೆಲ್ಪೇರ್ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಶೇಖ್ ಫರೀದ್ ಉಮರಿ, ಉಪಾಧ್ಯಕ್ಷ ಮಹಮ್ಮದ್ ಖಾನ್ಸಾಬ್, ಮಾಧ್ಯಮ ಕಾರ್ಯದರ್ಶಿ ರಿಜ್ವಾನ್ ಹುಮನಾಬಾದ್, ತಾಲೂಕು ಘಟಕದ ಅಧ್ಯಕ್ಷ ಬುಡ್ಡಣ್ಣಿ ಖಾಜಾಸಾಬ್, ಯಾಕೂಬ್ ಅಲಿ, ಲಿಯಾಖತ್ ಅಲಿ, ಜಗದೀಶ ಭಾಗವಹಿಸಿದ್ದರು.