ಜನರ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇನಷ್ಟೇ: ಸಚಿವ ಸತೀಶ ಜಾರಕಿಹೊಳಿ

| Published : Aug 16 2024, 12:53 AM IST

ಜನರ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇನಷ್ಟೇ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಿ ಎಂದು ನಾನು ಹೇಳಿಲ್ಲ. ಉಳ್ಳವರಿಗೆ ಕೊಡಬೇಡಿ. ಅರ್ಹರಿಗೆ ಗ್ಯಾರಂಟಿ ಯೋಜನೆ ಕೊಡಬೇಕು. ಈ ಬಗ್ಗೆ ಪರಿಷ್ಕರಣೆ ಮಾಡಬೇಕೆಂಬುದು ಜನರ ಅಭಿಪ್ರಾಯ. ಜನರ ಅಭಿಪ್ರಾಯವನ್ನೇ ನಾನು ಹೈಕಮಾಂಡ್ ಗೆ ತಿಳಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಿ ಎಂದು ನಾನು ಹೇಳಿಲ್ಲ. ಉಳ್ಳವರಿಗೆ ಕೊಡಬೇಡಿ. ಅರ್ಹರಿಗೆ ಗ್ಯಾರಂಟಿ ಯೋಜನೆ ಕೊಡಬೇಕು. ಈ ಬಗ್ಗೆ ಪರಿಷ್ಕರಣೆ ಮಾಡಬೇಕೆಂಬುದು ಜನರ ಅಭಿಪ್ರಾಯ. ಜನರ ಅಭಿಪ್ರಾಯವನ್ನೇ ನಾನು ಹೈಕಮಾಂಡ್ ಗೆ ತಿಳಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ, ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಬೇಕು. ಪರಿಷ್ಕರಣೆ ಮಾಡಬೇಕೆಂದು ಸತೀಶ ಜಾರಕಿಹೊಳಿ ಅವರೇ ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ನಾನೇನು ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು.

ಅನುದಾನ ಕೊರತೆಯಿಲ್ಲ:

ಯಾವುದೇ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ, 14 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅನೇಕ ಬದಲಾವಣೆಗಳು ಕಂಡಿದೆ. ಜಿಲ್ಲೆಯಲ್ಲಿ ಆರೋಗ್ಯ, ಶೈಕ್ಷಣಿಕ ಪ್ರಗತಿಗಾಗಿ ಪ್ರಯತ್ನಿಸಲಾಗುವುದು. ಗ್ರಾಮೀಣ ಮಟ್ಟದಲ್ಲಿಯೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬುವುದು ಸರ್ಕಾರದ ಮತ್ತು ನನ್ನ ವೈಯಕ್ತಿಕ ಗುರಿ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚು ಮಳೆ ಸುರಿದ ಕಾರಣ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಡೆ ರಸ್ತೆಗಳು ಹಾಳಾಗಿದ್ದು, ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ಮಳೆ ನಿಂತ ಮೇಲೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದರು.

ಬಿಮ್ಸ್ ಆವರಣದಲ್ಲಿ ₹ 188 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ವರ್ಷಕ್ಕೆ ₹ 38 ಕೋಟಿ ಅನುದಾನ ಅವಶ್ಯಕತೆ ಇದ್ದು, ಸಿಎಂ ಅನುಮೋದನೆ ನೀಡಿದ್ದಾರೆ.ಆಸ್ಪತ್ರೆಗೆ 570 ಸಿಬ್ಬಂದಿ ಅವಶ್ಯಕತೆ ಇದ್ದು, ತಿಂಗಳ ಹಿಂದಷ್ಟೇ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೊಂದಿಗೆ ನೇಮಕಾತಿಗಾಗಿ ಸಭೆ ನಡೆಸಿದ್ದು, ಶೀಘ್ರ ಆಸ್ಪತ್ರೆ ಆರಂಭಿಸಲಾಗುವುದು ಎಂದು ಹೇಳಿದರು.

ಸಮಯ ಬಂದಾಗ ಜಿಲ್ಲೆ ವಿಭಜನೆ:

ಬೆಳಗಾವಿ ಜಿಲ್ಲೆ ವಿಭಜನೆ ಆಗಲು ಸಮಯ ಬಂದೇ ಬರುತ್ತದೆ. ಸಮಯ ಬರುವರೆಗೆ ಕಾಯಬೇಕಷ್ಟೇ, ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕೆಂದು ನಮ್ಮ ಆಶಯ ಇದೆ. ಆದರೆ ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳುತ್ತದೆ ಎಂದರು.

ಹಳೆಯ ಯೋಜನೆ ಪೂರ್ಣಗೊಳಿಸಲು ಸೂಚನೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಕಾಮಗಾರಿ ಹಂತದಲ್ಲಿರುವ 70 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಂಪೂರ್ಣ ಕಾಮಗಾರಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದೇನೆ. ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆ ಕೇಂದ್ರದಿಂದ ನೀಡಿಲ್ಲ. 12 ವರ್ಷಗಳ ಹಿಂದೆ ನೀಡಿರುವ ಕೆಲವು ಯೋಜನೆಗಳು ಇನ್ನು ಪೂರ್ಣಗೊಂಡಿಲ್ಲ. ಅದಕ್ಕಾಗಿ ಹಳೇ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆಂದು ದೆಹಲಿಯಲ್ಲಿ ನಡೆದ ಸಭೆ ಬಗ್ಗೆ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ರಿಂಗ್‌ ರೋಡ್‌ ನಿರ್ಮಿಸಲು ಅನುಮತಿ ದೊರತಿದೆ. ರಾಜ್ಯ ಸರ್ಕಾರದಿಂದ ಭೂಮಿ ಸ್ವಾಧೀನ ಪಡೆಯಬೇಕು. ಎಷ್ಟು ಬೇಗ ಭೂಮಿಯನ್ನು ಸ್ವಾಧೀನ ಪಡೆಯುತ್ತೇವೆ ಅಷ್ಟು ಬೇಗ ಕಾಮಗಾರಿ ಆರಂಭವಾಗುತ್ತದೆ. ಈಗಾಗಲೇ ಟೆಂಡರ್‌ ಆಗಿತ್ತು. ಹೆಚ್ಚಿನ ಸಮಯ ಆಗಿದ್ದರಿಂದ ಟೆಂಡರ್‌ ಕ್ಯಾನ್ಸಲ್‌ ಆಗಿದೆ. ಹೊಸ ಟೆಂಡರ್‌ ಕರೆಲಾಗುತ್ತದೆ ಎಂದು ತಿಳಿಸಿದರು.