ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ: ಖಾದರ್
KannadaprabhaNewsNetwork | Published : Oct 23 2023, 12:15 AM IST
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ: ಖಾದರ್
ಸಾರಾಂಶ
ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ವಿಧ್ಯಾರ್ಥಿಗಳ ಕೊರತೆಯಿಂದ ಬಡವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳು ಸೊರಗದಂತೆ ಅಭಿವೃದ್ಧಿಪಡಿಸಲು ಎಸ್ಡಿಎಂಸಿ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅನಿವಾರ್ಯವಾಗಿದೆ. ಶೈಕ್ಷಣಿಕ ಅಭಿವೃದ್ದಿಯಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ ಎಂದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ತಾಲೂಕಿನ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಾರ್ವಜನಿಕರ ಸಹಕಾರದಿಂದ ಶಾಲೆಯೊಂದು ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಗುಡ್ಡೇಕೇರಿಯ ಈ ಶಾಲೆ ಮಾದರಿಯಾಗಿದೆ ಎಂದರು. ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಶಿಕ್ಷಣಕ್ಕೆ ಆದ್ಯತೆ ನೀಡಿದಲ್ಲಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬಹುದಾಗಿದೆ. ಈ ಶಾಲೆಯ ಒಟ್ಟಾರೆ ಬೆಳವಣಿಗೆ ಪ್ರಶಂಸನೀಯವಾಗಿದೆ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲೇ ಕೊನೆಯಾಗಬಾರದು ಎಂದೂ ಹೇಳಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬದ್ಧತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಸಾರ್ವಜನಿಕರ ಬೆಂಬಲ ಪಡೆದಿರುವ ಗ್ರಾಮೀಣ ಭಾಗದಲ್ಲಿರುವ ಈ ಪ್ರೌಢಶಾಲೆಗೆ ಇಂಗ್ಲಿಷ್ ಮಾಧ್ಯಮ ವಿಭಾಗದ ಬಹಳ ವರ್ಷಗಳ ಪೋಷಕರ ಬೇಡಿಕೆಯಾಗಿದೆ. ಆದರೆ, ಶಾಲೆಯಲ್ಲಿ 200 ವಿದ್ಯಾರ್ಥಿಗಳು ಇರಬೇಕೆಂಬ ಶಿಕ್ಷಣ ಇಲಾಖೆ ನಿಯಮದಿಂದಾಗಿ ಇದಕ್ಕೆ ಹಿನ್ನಡೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಭಂದನೆಯನ್ನು ಸಡಿಲಗೊಳಿಸಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ಕೊಡಿಸುವಂತೆ ಮನವಿ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಆಗುಂಬೆ ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಭಟ್, ಸದಸ್ಯರಾದ ಶಶಾಂಕ ಹೆಗ್ಡೆ, ಜಯೇಶ್ ಹೆಗ್ಡೆ, ಎಚ್.ಚಂದ್ರಶೇಖರ್, ಜಯರಾಂ ಹೆಗ್ಡೆ, ತಾಪಂ ಇಒ ಎಂ.ಶೈಲಾ, ಮುಖ್ಯೋಪಾಧ್ಯಾಯ ಮಂಜುಬಾಬು ಇದ್ದರು. - - - -22ಟಿಟಿಎಚ್02: ತೀರ್ಥಹಳ್ಳಿಯ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ವಿಧ್ಯಾಥಿಗಳೊಂದಿಗೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಸಂವಾದ ನಡೆಸಿದರು. ಶಾಸಕ ಆರಗ ಜ್ಞಾನೇಂದ್ರ ಇನ್ನಿತರ ಗಣ್ಯರು ಇದ್ದರು.