ಬ್ಯಾಂಕ್ ವ್ಯವಹಾರಗಳು ನಿಗದಿತ ಸಮಯಕ್ಕೆ ನಡೆಯಲು ಅನುಕೂಲ ಕಲ್ಪಿಸಬೇಕು
ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ನಿತ್ಯ ನಾನಾ ಸಮಸ್ಯೆ ಎದುರಿಸುವಂತಾಗಿದೆ.
ಹಿರೇವಂಕಲಕುಂಟಾ ಭಾಗದ ಗ್ರಾಹಕರಿಗೆ ಇದೊಂದೇ ಏಕೈಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿದೆ. ೪೦ಕ್ಕೂ ಅಧಿಕ ಹಳ್ಳಿಗಳ ಗ್ರಾಹಕರು ಖಾತೆ ಹೊಂದಿದ್ದಾರೆ. ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವ ಏಕೈಕ ಬ್ಯಾಂಕ್ ಇದಾಗಿದ್ದು, ಈ ಬ್ಯಾಂಕ್ನಲ್ಲಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಕೊರತೆಯಿಂದ ಗ್ರಾಹಕರಿಗೆ ಸಮರ್ಪಕವಾಗಿ ಹಣ ಕೂಡ ಸಿಗುತ್ತಿಲ್ಲ.ಗ್ಯಾರಂಟಿ ಸ್ಕೀಂ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಣೆ, ಕೆವೈಸಿ ಮಾಡಿಸುವುದು, ಹಣ ಜಮೆ ಮಾಡುವುದು, ಡಿಡಿ ತೆಗೆಯುವುದು, ಆರ್ಟಿಜಿಎಸ್, ಹಣ ವರ್ಗಾವಣೆ, ಸಾಲ ಸೌಲಭ್ಯ ಪಡೆಯುವುದು ಸೇರಿ ನಾನಾ ಸೌಲಭ್ಯಗಳು ನಿಗದಿತ ಅವಧಿಗೆ ಆಗುತ್ತಿಲ್ಲ. ಸಾಮಾಜೀಕ ಭಧ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳ ನಿರ್ವಹಣೆಯ ಒತ್ತಡ ಬ್ಯಾಂಕ್ನಲ್ಲಿದೆ. ಅನೇಕ ಕೆಲಸಗಳ ನಿಮಿತ್ತ ಬ್ಯಾಂಕಿಗೆ ಬರುವ ಗ್ರಾಹಕರು ಗಂಟೆಗಟ್ಟಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೆಜಿಬಿ ಬ್ಯಾಂಕ್ಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು. ಎಲ್ಲ ಬ್ಯಾಂಕ್ ವ್ಯವಹಾರಗಳು ನಿಗದಿತ ಸಮಯಕ್ಕೆ ನಡೆಯಲು ಅನುಕೂಲ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಮೇಲಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು ಎಂದು ಗ್ರಾಹಕರಾದ ಶಿವರಾಜ ಸಜ್ಜನ್, ಅಮರೇಗೌಡ್ರ ಮಾಲಿಪಾಟೀಲ್ , ಗಿರಿಜಾ ಹರ್ಲಾಪುರ, ಸುಜಾತ, ಶ್ರೀಕಾಂತಗೌಡ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.
ಬ್ಯಾಂಕ್ನಲ್ಲಿ ಗ್ರಾಹಕರಿಗೆ ಸರಿಯಾಗಿ ಸೇವೆ ಸಿಗುತ್ತಿಲ್ಲ.ಇಲ್ಲಿ ಅನೇಕ ಜನರು ಖಾತೆ ಹೊಂದಿದ್ದು, ಇಷ್ಟೊಂದು ದೊಡ್ಡ ಬ್ಯಾಂಕ್ನ ಕೌಂಟರ್ಗಳಲ್ಲಿ ಕೇವಲ ಇಬ್ಬರು ಸಿಬ್ಬಂದಿ ಸಾಲದು. ಇಬ್ಬರು ಸಹಾಯಕ ವ್ಯವಸ್ಥಾಪಕರು, ಓರ್ವ ಕ್ಲರ್ಕ್ ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲ. ಬ್ಯಾಂಕಿನಲ್ಲಿ ಏಳುಜನ ಸಿಬ್ಬಂದಿ ಅವಶ್ಯಕತೆ ಇದೆ. ಕೂಡಲೆ ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲವಾದರೆ ಗಾಣದಾಳ ಅಥವಾ ತಾಳಕೇರಿ ಗ್ರಾಮದಲ್ಲಿ ಇನ್ನೊಂದು ಶಾಖೆ ಪ್ರಾರಂಭಿಸಬೇಕು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಬಂಧಕರು, ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬ್ಯಾಂಕ್ ಗ್ರಾಹಕ ಶರಣಪ್ಪ ಕಂಬಳಿ ತಿಳಿಸಿದ್ದಾರೆ.ಬ್ಯಾಂಕ್ನಲ್ಲಿ ಐದು ಜನ ಬ್ಯಾಂಕ್ ಮಿತ್ರರಿದ್ದು, ಸಾಧ್ಯವಾದಷ್ಟು ಹಳ್ಳಿಯ ಜನಗಳಿಗೆ ಸೇವೆ ಸಲ್ಲಿಸುತಿದ್ದೇವೆ. ಬ್ಯಾಂಕ್ನ ಆದೇಶದ ಪ್ರಕಾರ ಸಾಮಾಜಿಕ ಭದ್ರತಾ ಯೋಜನೆಯ ನಿರ್ವಹಣೆ ನಾವೇ ಮಾಡುತಿದ್ದೇವೆ. ಸಿಬ್ಬಂದಿ ಕೊರತೆ ಇದೆ ಎಂದು ಬ್ಯಾಂಕ್ ಮಿತ್ರ ನಿಲೋಗಲ್ ಶಂಕರ ಸಾಹುಕಾರ ತಿಳಿಸಿದ್ದಾರೆ.