ಜನರ ತೆರಿಗೆ ಹಣ ದುರುಪಯೋಗ ಆಗಬಾರದು

| Published : Dec 27 2024, 12:49 AM IST

ಸಾರಾಂಶ

ಎಲ್ಲಾ ಇಲಾಖೆಯ ಅಧಿಕಾರಿಗಳು ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸವಲತ್ತುಗಳನ್ನ ಒದಗಿಸಿಕೊಡಬೇಕು. ಸರ್ಕಾರದಿಂದ ಬರುವ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳು ಬಡ ಕಾರ್ಮಿಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಕಟ್ಟುವ ತೆರಿಗೆ ಹಣ ದುರುಪಯೋಗವಾಗಬಾರದು. ಮುಖ್ಯವಾಗಿ ತಮ್ಮ ಕ್ಷೇತ್ರವಾದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಇಲಾಖೆಯಿಂದ ಜನಸಾಮಾನ್ಯರಿಗೆ ಅನ್ಯಾಯ ಆಗಬಾರದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಎಲೆಕ್ಟ್ರಿಕ್ ಕಿಟ್ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.ಸೌಲಭ್ಯ ಅರ್ಹರಿಗೆ ತಲುಪಲಿ

ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸವಲತ್ತುಗಳನ್ನ ಒದಗಿಸಿಕೊಡಬೇಕು. ಸರ್ಕಾರದಿಂದ ಬರುವ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದೆ. ಮುಂದೆ ಸರ್ಕಾರದಿಂದ ಬರುವ ಯೋಜನೆಗಳಾಗಬಹುದು ಅನುದಾನಗಳಾಗಬಹುದು ಇನ್ನಿತರ ಯಾವುದೇ ರೀತಿಯ ಸೌಲಭ್ಯಗಳು ಬಹಳಷ್ಟು ಬಡ ಕಾರ್ಮಿಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡಬೇಕು ಎಂದರು. ಕಾರ್ಮಿಕ ಇಲಾಖೆಯ ವೃತ್ತಿ ನಿರೀಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯಗಳು ಬಹಳಷ್ಟು ಇವೇ ಅವುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಕಟ್ಟಡ ಕಾರ್ಮಿಕ ಇಲಾಖೆಯಿಂದ ಎಲೆಕ್ಟ್ರಿಷಿಯನ್ ಕಾರ್ಮಿಕರಿಗೆ 120 ಹಾಗೂ ವೆಲ್ಡಿಂಗ್ ಕಾರ್ಮಿಕರಿಗೆ 25 ಟೂಲ್ ಕಿಟ್ ಗಳನ್ನು ಶಾಸಕ ಬಿ ಎನ್ ರವಿ ಕುಮಾರ್ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್ ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಆರ್ ಹೇಮಾವತಿ, ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ ವೆಂಕಟೇಶ್, ಮೇಲೂರು ಮಂಜುನಾಥ್, ತಾದೂರು ರಘು, ನವೀನ್ ಕುಮಾರ್ , ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಕಾರ್ಮಿಕ ಇಲಾಖೆಯ ನವೀನ್ ಕುಮಾರ್ ವಿವಿಧ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.