ಸಾರಾಂಶ
- ಮುಗುಳವಳ್ಳಿಯಲ್ಲಿ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಗ್ರಾಮ ಪರಿಕ್ರಮ ಯಾತ್ರೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಸರ್ವಾಂಗೀಣ ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹಲವು ಕಾರ್ಯ ಕ್ರಮಗಳ ಕುರಿತ ಮಾಹಿತಿಯನ್ನು ಪ್ರತಿ ವ್ಯಕ್ತಿ ಮನಸಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಕರೆ ನೀಡಿದರು.ತಾಲೂಕಿನ ಮುಗಳವಳ್ಳಿಯಲ್ಲಿ ಜಿಲ್ಲಾ ರೈತ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪರಿಕ್ರಮ ಯಾತ್ರೆ ಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಾ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ. ನಾವು ಅಂಬೇಡ್ಕರ್ ಅನುಯಾಯಿಗಳೆಂದು ಸೃಷ್ಟಿ ಮಾಡಿಕೊಂಡು ಬಂದಿದ್ದಾರೆ. ಆದರೆ ಅಂಬೇಡ್ಕರ್ ಚುನಾವಣೆ ಸ್ಪರ್ಧಿಸಿದ ಸಂದರ್ಭದಲ್ಲಿ ಓರ್ವ ಅನಕ್ಷರಸ್ಥನನ್ನು ನಿಲ್ಲಿಸಿ ಅಂಬೇಡ್ಕರ್ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅಂದು ಅಂಬೇಡ್ಕರ್ ಅವರ ಪರವಾಗಿ ಕೆಲಸ ಮಾಡಿದ್ದು ಜನಸಂಘ ಎಂದರು. ರೈತರ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಚುನಾವಣೆಗೆ ಮುನ್ನ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡ್ತಿವಿ ಎಂದಿದ್ದರು. ಮೋದಿ ಅವರು ಕೊಡುತ್ತಿರುವ 5 ಕೆಜಿ ಅಕ್ಕಿಯನ್ನು ನಾನು ಕೊಟ್ಟೆ ಎಂದು ಸುಳ್ಳು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಸ್ವಾತಂತ್ರ್ಯ ನಂತರ ಇಡೀ ದೇಶದ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ್ದೇ ಇಲ್ಲ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರು. ಹಣ ಹಾಕುತ್ತಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರದ 4 ಸಾವಿರ ರು.ಹಣವನ್ನು ಯಡಿಯೂರಪ್ಪ ಸರ್ಕಾರದ ಇದ್ದಾಗ ಜಮಾ ಮಾಡಲಾಗುತಿತ್ತು. ಆದರೆ, ಈಗಿನ ಸರ್ಕಾರ ಅದನ್ನು ರದ್ದುಪಡಿಸಿದೆ. ಹಾಗಾಗಿ ಸಿದ್ದರಾಮಯ್ಯ ಸರ್ಕಾರ ರೈತರ ಪರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ರೈತ ಮೊರ್ಚಾ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದಿನದಲ್ಲಿ 18 ಗಂಟೆಗಳ ಕಾಲ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಲಂಚಮುಕ್ತ, ಕಪ್ಪು ಚುಕ್ಕೆ ರಹಿತವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ತಾಯಿ ನಿಧನರಾದ ಸಂದರ್ಭದಲ್ಲೂ ಸಂಸ್ಕಾರ ನೆರವೇರಿಸಿ ಮರು ಕ್ಷಣದಿಂದಲೇ ದೈನಂದಿನ ಕೆಲಸಕ್ಕೆ ಹಾಜರಾಗಿದ್ದರು ಎಂದರು. ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರ 15 ದಿನ ತೆಗೆದುಕೊಂಡಿತು. ಇದಲ್ಲದೆ ಮುಖ್ಯಮಂತ್ರಿಗಳಿಗೆ ಬಾಂಬ್ ಬೆದರಿಕೆ ಹಾಕುವ ಹಂತಕ್ಕೆ ಅವರು ಬಂದಿದ್ದಾರೆ. ಮತಕ್ಕಾಗಿ ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಿರುವುದು ಇದಕ್ಕೆ ಕಾರಣ ಎಂದು ದೂರಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಕೈಚೆಲ್ಲಿ ಕುಳಿತಿದ್ದರೆ ಪರಿಸ್ಥಿತಿ ಏನಾಗುತ್ತಿತೆಂಬುದು ಊಹಿಸಲು ಆಸಾಧ್ಯ. ಆದರೆ ರಾತ್ರಿ ಹಗಲು ಕೆಲಸ ಮಾಡಿದ ಪ್ರಧಾನಿ ಕೋವಿಡ್ಡನ್ನು ಓಡಿಸಿ ನಮ್ಮನ್ನೆಲ್ಲಾ ಬದುಕಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಿರಂಜನ್, ಮುಖಂಡರಾದ ದೀಪಕ್ ದೊಡ್ಡಯ್ಯ, ಪುಣ್ಯಪಾಲ್, ಕೆ.ಪಿ. ವೆಂಕಟೇಶ್, ನಾಗರಾಜ್, ದಿನೇಶ್ ಮುಗುಳವಳ್ಳಿ, ದಿನೇಶ್ ಪಾದಮನೆ ಹಾಗೂ ಕಾರ್ಯಕರ್ತರು ಇದ್ದರು.
9 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿಯಲ್ಲಿ ಜಿಲ್ಲಾ ರೈತ ಮೋರ್ಚಾಯಿಂದ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳ ಲಾಗಿತ್ತು. ಎಚ್.ಸಿ. ಕಲ್ಮರುಡಪ್ಪ, ದೇವರಾಜ್ ಶೆಟ್ಟಿ, ಶಂಭೈನೂರು ಆನಂದಪ್ಪ ಹಾಗೂ ಕಾರ್ಯಕರ್ತರು ಇದ್ದರು.