ಜನರೇ ರಂಗಭೂಮಿ ಬೆಳೆಸಬೇಕು: ವೆಂಕಟರಮಣ ಐತಾಳ್‌

| Published : Feb 27 2025, 12:36 AM IST

ಜನರೇ ರಂಗಭೂಮಿ ಬೆಳೆಸಬೇಕು: ವೆಂಕಟರಮಣ ಐತಾಳ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಕಳ ಯಕ್ಷ ರಂಗಾಯಣ ಅಧ್ಯಕ್ಷ ಬಿ.ಆರ್. ವೆಂಕಟರಮಣ ಐತಾಳ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನಾಟಕ, ರಂಗಚಟುವಟಿಕೆಗಳಿಗೆ ಜನರ ಬೆಂಬಲದ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ದೊರೆಯುತ್ತಿತ್ತು. ಅದು ನಿಂತು ಹೋಗಿದೆ. ಜನರೇ ರಂಗಭೂಮಿಯನ್ನು ಬೆಳೆಸಬೇಕಾದ ಕಾಲದಲ್ಲಿ ನಾವು ಇದ್ದೇವೆ ಎಂದು ಕಾರ್ಕಳ ಯಕ್ಷ ರಂಗಾಯಣ ಅಧ್ಯಕ್ಷ ಬಿ.ಆರ್. ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟಿದ್ದಾರೆ.

ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಟಕ ಬರೆದವರನ್ನು, ನಿರ್ದೇಶಿಸಿದವರನ್ನು, ಅಭಿನಯಿಸಿದವರನ್ನು ಎಲ್ಲರೂ ಗುರುತಿಸುತ್ತಾರೆ. ಸನ್ಮಾನಿಸುತ್ತಾರೆ. ಆದರೆ, ಹಿನ್ನೆಲೆಯಲ್ಲಿದ್ದುಕೊಂಡು ಕೆಲಸ ಮಾಡುವವರನ್ನು ಗುರುತಿಸುವುದು ಕಡಿಮೆ. ನೇಪಥ್ಯದಲ್ಲಿ ಇರುವವರನ್ನೂ ಗುರುತಿಸುವ ಮೂಲಕ ಸುಮನಸಾ ಕೊಡುವೂರು ಸಂಘಟನೆ ವಿಶಿಷ್ಟ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ಕಲಾವಿದರಿಗೆ ಜಾತಿ, ಮತ, ಪಂಥ, ಲಿಂಗದ ಭೇದ ಇರುವುದಿಲ್ಲ. ನಾಟಕದಲ್ಲಿ ಹೆಣ್ಣು ಗಂಡಾಗಬಹುದು. ಗಂಡು ಹೆಣ್ಣಾಗಬಹುದು. ನಾಟಕವು ಮನರಂಜನೆ ಮಾತ್ರವಾಗದೇ ಅರಿವು ಮೂಡಿಸುವ ಸಮಾಜಕ್ಕೆ ದಿಕ್ಕು ತೋರಿಸುವ ಪ್ರಕ್ರಿಯೆ ಎಂದು ಹೇಳಿದರು.

ರಂಗಸನ್ಮಾನ ಪಡೆದ ರಾಜು ಕಡೆಕಾರ್ ಕವನ ವಾಚನದ ಮೂಲಕ ಕೃತಜ್ಞತೆ ಸಲ್ಲಿಸಿದರು. ನಿರ್ಮಿತಿ ಕೇಂದ್ರದ ನಿರ್ದೇಶಕ ದಿವಾಕರ ಪೂಜಾರಿ ಅಂಬಲಪಾಡಿ, ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲಿಯಾನ್, ಕಲ್ಯಾಣಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಮಲ್ಪೆಯ ಉದ್ಯಮಿ ರವಿರಾಜ್ ತಿಂಗಳಾಯ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಇದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಸ್ವಾಗತಿಸಿದರು. ಚಂದ್ರಕಾಂತ್ ಕಲ್ಮಾಡಿ ವಂದಿಸಿದರು. ರಾಧಿಕಾ ದಿವಾಕರ್ ಮತ್ತು ಕಾವ್ಯ ನಿರೂಪಿಸಿದರು. ಬಳಿಕ ಅನಿಕೇತನ ಹಾಸನ ಕಲಾವಿದರು ‘ಕಿರಗೂರಿನ ಗಯ್ಯಾಳಿಗಳು’ ನಾಟಕ ಪ್ರದರ್ಶಿಸಿದರು.