ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಾಡಿನ ಜನರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಆತ್ಮಗೌರವ ಬೆಳೆಸದೆ, ಕೇವಲ ಪರಾವಲಂಭಿಯಾಗಿ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಮಕೃಷ್ಣ, ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಭಾರತ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕರ್ನಾಟಕ ಕಾನೂನು ವಿವಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಯುವ ಸಂವಾದ-ಇಂಡಿಯಾ@2047’ ಉದ್ಘಾಟಿಸಿ ಮಾತನಾಡಿದ ಅವರು, ಜನರಲ್ಲಿ ದುಡಿಯುವ ಮನೋಭಾವ ಬೆಳೆಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಯುವಜನತೆಯೇ ದೇಶದ ನಿಜವಾದ ಸಂಪತ್ತು. ಆ ಸಂಪತ್ತನ್ನು ಸಂಪನ್ಮೂಲವಾಗಿಸುವ ಗುರುತರ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ. ಹಾಗಾಗಿ ದೇಶದ 60ರಷ್ಟು ಯುವಜನರನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ದಾಸ್ಯ ಮುಕ್ತ ಮನೋಸ್ಥಿತಿಯಿಂದ ಯುವಜನರನ್ನು ಹೊರತಂದು, ನಮ್ಮ ಪರಂಪರೆ ಮತ್ತು ನಡೆದು ಬಂದ ದಾರಿಯನ್ನು ನೆನಪಿಸುವ ಮೂಲಕ ನಾಗರಿಕರ ಜವಾಬ್ದಾರಿಯನ್ನು ನೆನಪು ಮಾಡುವುದೇ ಈ ಸಂವಾದಗಳ ಉದ್ದೇಶವಾಗಿದೆ ಎಂದು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.ವಿದೇಶಿಯರ ಭೌದ್ದಿಕತೆಗೆ ಹೊಲಿಕೆ ಮಾಡಿದರೆ ಭಾರತೀಯರು ಅತಿ ಬುದ್ದಿವಂತರು.ಆದರೆ ಅವರನ್ನು ಪರಾವಲಂಭಿಗಳಾಗಿ ಮಾಡುವುದು ತರವಲ್ಲ. ಅವರಲ್ಲಿ ಸ್ವಾಭಿಮಾನ ಬೆಳೆಸಿ, ತಮ್ಮಲ್ಲಿಯೇ ಇರುವ ಸಾಮರ್ಥ್ಯವನ್ನು ಉದ್ದೀಪಗೊಳಿಸುವ ಕೆಲಸ ಆಗಬೇಕು.ಪ್ರಾಕೃತಿಕ ಸಂಪತ್ತಿನಿಂದ ದೇಶದ ಅಭಿವೃದ್ಧಿಯನ್ನು ಅಳೆಯಲು ಸಾಧ್ಯವಿಲ್ಲ. ಅದು ಜನರ ಜ್ಞಾನದ ಮೇಲೆ ನಿಂತಿದೆ. ತಾವು ಗಳಿಸಿರುವ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ದೇಶವನ್ನು ಸಮರ್ಥವಾಗಿ ಕಟ್ಟಲು ಸಾಧ್ಯ ಎಂದು ವಿರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯೋದ್ಯಯ ಪ್ರತಿಷ್ಠಾನದ ಸಿಇಒ ಪ್ರೊ.ಕೆ.ಚಂದ್ರಣ್ಣ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಯುವ ಸಂವಾದ ಕಾರ್ಯಕ್ರಮ ಯುವಜನತೆಗೆ ಸಮರ್ಥವಾಗಿ ದೇಶ ಕಟ್ಟಲು ಮಾರ್ಗದರ್ಶನ ಮಾಡುವ ಉದ್ದೇಶ ಹೊಂದಿದೆ. ಯುವಜನರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನ ಕಳೆದುಕೊಳ್ಳುತಿದ್ದಾರೆ. ತಂದೆ,ತಾಯಿಗಳಿಂದ ದೂರವಾಗಿ ಬದುಕುವ ಯುವಜನರಿಗೆ ತಿಳಿ ಹೇಳುವ ಕೆಲಸ ಇದಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಎಸ್ ಸಂಯೋಜಕ ಡಾ.ನಟರಾಜು ಜಿ.ವೈ, ಭಾರತದಲ್ಲಿ ಶೇ ೬೦ರಷ್ಟು ಯುವಜನರನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರದ ಸುಮಾರು ಐದುನೂರು ಪದವಿ ಮತ್ತು ವಿವಿಗಳಲ್ಲಿ ಹಾಗೆಯೇ ಕರ್ನಾಟಕದ ೫೦ ವಿವಿಗಳಲ್ಲಿ ಇಂತಹ ಸಂವಾದ ಏರ್ಪಡಿಸಲು ತೀರ್ಮಾನಿಸಿದ್ದು, ತುಮಕೂರಿನಿಂದ ಆಯ್ಕೆಯಾಗಿರುವ ಏಕೈಕ ಕಾಲೇಜು ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪಿಕಾ.ಟಿ.ಸಿಯವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಅಲ್ಲದೆ ಕಾಲೇಜಿನ ಗುಡ್ಡಗಾಡು ಓಟಗಾರ ಜೀವನ್ ರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಕುಮಾರ್.ಎನ್.ಎಚ್,ಎನ್.ಎಸ್.ಎಸ್.ಅಧಿಕಾರಿ ಡಾ.ಕಿಶೋರ್,ವಿ, ಪ್ರಾಂಶುಪಾಲರಾದ ಶಾಮ್ ಸೈಯಿದ್ ಸೇರಿ ಹಲವರು ಉಪಸ್ಥಿತರಿದ್ದರು.