ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಪೌರಕಾರ್ಮಿಕರ ಹೋರಾಟದಿಂದ ನಗರದಲ್ಲಿ ಸ್ವಚ್ಛತೆ ಇತರೆ ಸಮಸ್ಯೆ ಆಗಿದ್ದರೆ ಸಾರ್ವಜನಿಕರು ಕೂಡ ಪೌರಕಾರ್ಮಿಕರ ಕಷ್ಟಗಳನ್ನು ಕೆಲ ದಿನಗಳ ಕಾಲ ಅರ್ಥ ಮಾಡಿಕೊಂಡು ಸಹಿಸಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಎಚ್.ಎಸ್. ಸ್ವರೂಪ್ ಮನವಿ ಮಾಡಿದರು.ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪೌರನೌಕರ ಮುಷ್ಕರವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರದಂದು ಶಾಸಕ ಎಚ್.ಎಸ್. ಸ್ವರೂಪ್ ಭೇಟಿ ನೀಡಿ ಅವರ ಬೇಡಿಕೆಯನ್ನು ಆಲಿಸಿದಲ್ಲದೇ ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಹೇಳಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ನಗರಸಭೆ ಈಗಾಗಲೇ ನಗರ ಪಾಲಿಕೆಯಾಗಿ ಮೇಲೆ ದರ್ಜೆಗೆ ಏರಿಸಲಾಗಿದ್ದು, ಪೌರಕಾರ್ಮಿಕರು ಎಲ್ಲಾ ಸೇರಿ ಒಳಚರಂಡಿ ಇರಬಹುದು, ನೀರುಘಂಟಿಗಳು ಇರಬಹುದು, ಚಾಲಕರು ಸೇರಿದಂತೆ ಪ್ರತಿಯೊಬ್ಬರನ್ನು ನಗರಸಭೆಯ ಸಾಮಾನ್ಯ ನೌಕರರೆಂದು ಪರಿಗಣಿಸಲು ಹಿಂದೆಯೂ ಕೂಡ ಹೋರಾಟ ಮಾಡಿ ಮನವಿ ಮಾಡಿದ್ದಾರೆ. ನಾನು ಕೂಡ ಶಾಸಕನಾಗಿ ಆಯ್ಕೆಯಾಗಿ ಮೊದಲ ಅಧಿವೇಶನದಲ್ಲಿ ಇವರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೇನೆ ಎಂದರು. ಎಂಜಿನಿಯರ್ಗೆ ಸಿಗುವ ಸೌಲಭ್ಯಗಳು ಪೌರ ನೌಕರರಿಗೆ ಸೌಲತ್ತುಗಳು ಸಿಗುವಂತಾಗಬೇಕು. ಹೊರಗುತ್ತಿಗೆ ಇರುವ ನೌಕರರಿಗೆ ಸಂಬಳವನ್ನು ನೇರವಾಗಿ ಅವರ ಖಾತೆಗೆ ಸರಕಾರದಿಂದ ಬರಬೇಕೆಂದು ಹಾಗೂ ಇತರೆ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಹಿಂದೆನೂ ಸದನದಲ್ಲಿ ಪ್ರಶ್ನೆ ಮಾಡಿದ್ದೆ. ನಗರ ಭಾಗಕ್ಕೆ ಏನಾದದೂ ಸ್ವಚ್ಛತೆ ಇದೆ ಎಂದರೇ ಪೌರಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರಿಂದ ಮಾತ್ರ. ಈಗಾಗಲೇ ಮೂರ್ನಾಲ್ಕು ದಿನಗಳಿಂದ ಪೌರಕಾರ್ಮಿಕರು ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ನಗರ ಭಾಗಕ್ಕೆ ಅನೇಕ ಸಮಸ್ಯೆಗಳು ಎದುರಾಗಿದೆ. ಅವರು ಪಟ್ಟಿರುವ ಶ್ರಮಕ್ಕೆ ಕೂಲಿ ಕೇಳಿದ್ದಾರೆ ಹೊರತು ಬೇರೆ ಏನೂ ಕೇಳಿಲ್ಲ. ಕಾರ್ಮಿಕರ ಏನು ಬೇಡಿಕೆ ಇದೆ ಅದೇನು ದೊಡ್ಡ ಬೇಡಿಕೆ ಇರುವುದಿಲ್ಲ. ಸರಕಾರವು ಶೀಘ್ರವೇ ಈಡೇರಿಸಬೇಕು ಎಂದು ಇದೆ ವೇಳೆ ಒತ್ತಾಯಿಸುವುದಾಗಿ ಹೇಳಿದರು. ನಿಮ್ಮ ಹೋರಾಟದ ಜೊತೆ ನಾವು ಇರುವುದಾಗಿ ಇದೆ ವೇಳೆ ಕೈಜೋಡಿಸಿದರು. ಕಳೆದ ನಾಲ್ಕು ದಿನಗಳಿಂದ ಸ್ವಚ್ಛತೆ ಇತರೆ ಸಮಸ್ಯೆ ಆಗಿದ್ದರೇ ಸಾರ್ವಜನಿಕರು ಕೂಡ ಪೌರಕಾರ್ಮಿಕರ ಕಷ್ಟಗಳನ್ನು ಕೆಲ ದಿನಗಳ ಕಾಲ ಅರ್ಥ ಮಾಡಿಕೊಂಡು ಸಹಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಯೋಗೇಶ್, ಶಾಖಾ ಅಧ್ಯಕ್ಷ ಎನ್.ಆರ್ ವೆಂಕಟೇಶ್, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ರಂಜನ್, ಖಜಾಂಚಿ ಎಚ್.ಜಿ. ರಾಮು ಇತರರು ಉಪಸ್ಥಿತರಿದ್ದರು.