ಮೋದಿ ಅಭಿವೃದ್ಧಿಗೆ ಜನ ಬೆಂಬಲ: ಸುನಿಲ್‌ ಕುಮಾರ್‌

| Published : Nov 17 2025, 02:00 AM IST

ಸಾರಾಂಶ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಕಳ ಹಾಗೂ ಹೆಬ್ರಿಯಲ್ಲಿನ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಕಳ ಹಾಗೂ ಹೆಬ್ರಿಯಲ್ಲಿನ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.

ವಿಕಾಸ ಕಚೇರಿ ಬಳಿ ನಡೆದ ವಿಜಯೋತ್ಸವದಲ್ಲಿ ಕಾರ್ಕಳ ಶಾಸಕರು ವಿ. ಸುನೀಲ್ ಕುಮಾರ್ ಭಾಗವಹಿಸಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ದೇಶದ ಜನತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ ಬೆಂಬಲವೇ ಈ ಜಯ. ಕಾಂಗ್ರೆಸ್ ನಾಯಕರು ಜನಸಾಮಾನ್ಯರ ಸಮಸ್ಯೆಗಳಿಂದ ದೂರವಾಗಿ ವಿದೇಶ ಪ್ರವಾಸಗಳಲ್ಲಿ ತೊಡಗಿರುವುದರಿಂದ ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಎರಡು ಅಂಕಿಗೂ ಏರಲಾರದೆ ಹೀನಾಯ ಸೋಲು ಕಂಡಿದೆ ಎಂದರು.

ಮೋದಿ ವಿರೋಧಿಸಲು ಮಾತ್ರ ಘಟಬಂಧನ

ಮಹಾಘಟಬಂಧನ ಜನಪರ ಧೋರಣೆಗಾಗಿ ರಚನೆಯಾಗದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ವಿರೋಧಿಸಲು ಮಾತ್ರ ಹುಟ್ಟಿಕೊಂಡ ಕೂಟ. ಈಗ ಅದೇ ಕೂಟ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್ ಹೈಕಮಾಂಡ್ ಆಂತರಿಕ ಗೊಂದಲಗಳಿಂದ ಸಂಕಷ್ಟಕ್ಕೆ ಒಳಗಾಗಿರುವುದನ್ನೂ ಅವರು ಉಲ್ಲೇಖಿಸಿದರು. ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆ ಇದ್ದು, ಬಿಜೆಪಿ ಕೂಡ ತನ್ನ ಸಿದ್ಧತೆಗಳನ್ನು ಮುಂದುವರಿಸುತ್ತಿದೆ ಎಂದು ಹೇಳಿದರು.ಹೆಬ್ರಿಯಲ್ಲಿಯೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಲಡ್ಡು ಹಂಚಿಕೊಳ್ಳುವ ಮೂಲಕ ವಿಜಯೋತ್ಸವ ನಡೆಸಿದರು.