ಹೊಳೆನರಸೀಪುರ: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಏಳೆಂಟು ದಿನಗಳಿಂದ ಮೈಕೊರೆಯುವ ಚಳಿ ಪ್ರಾರಂಭವಾಗಿದೆ. ಶೀತಗಾಳಿ, ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಿದ್ದರಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಜತೆಗೆ ಚಳಿಯಿಂದಾಗಿ ಜನತೆ ಮುದುಡಿ ಹೋಗಿದ್ದು, ಬೆಳಗಿನ ಜಾವ ಸುಭಾಷ್ ವೃತ್ತ, ಎಪಿಎಂಸಿ ಮಾರುಕಟ್ಟೆ, ಬಸ್ ನಿಲ್ದಾಣದ ಹತ್ತಿರ ಹೀಗೆ ಎಲ್ಲೆಂದರಲ್ಲಿ ಹಾಳೆ, ರಟ್ಟಿಗೆ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ

ಮೈ ನಡುಗಿಸುವ ಹೆಚ್ಚಿನ ಚಳಿ ಇರುವುದರಿಂದ ಪ್ರತಿದಿನ ಬೆಳಗ್ಗೆ ೫.೩೦ರಿಂದ ೬ ಗಂಟೆ ಸಮಯದಲ್ಲಿ ವಾಯುವಿಹಾರಕ್ಕೆಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ ಬಯಲು ರಂಗಮಂದಿರ, ಮಹಾರಾಜ ಪಾರ್ಕ್, ನದಿ ತೀರಿದ ವಾಕಿಂಗ್ ಪಾಥ್, ಅರಕಲಗೂಡು ರಸ್ತೆ, ಮಲ್ಲಪ್ಪನಹಳ್ಳಿ ರಸ್ತೆ, ರೈಲ್ವೆ ನಿಲ್ದಾಣ, ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಸೂರ್ಯನ ಆಗಮನದ ನಂತರವೇ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡುಬರುತ್ತಿದೆ. ದಿನಪತ್ರಿಕೆ ವಿತರಿಸುವವರು, ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ಅವುಗಳನ್ನು ಸರಬರಾಜು ಮಾಡುವ ರೈತರು, ಕೆಲವು ಉದ್ಯೋಗ ಮಾಡುವವರು, ಪುರಸಭೆ ಪೌರಕಾರ್ಮಿಕರು ಎಷ್ಟೆ ಚಳಿ, ಮಳೆ, ಗಾಳಿ ಇದ್ದರೂ ಅನಿವಾರ್ಯವಾಗಿ ಈ ಮೈ ಕೊರೆಯುವ ಚಳಿಯಲ್ಲಿಯೇ ನಡುಗುತ್ತ ತಮ್ಮ ಕಾಯಕ ಮಾಡುತ್ತಾರೆ. ಗ್ರಾಮೀಣ ಪ್ರದೇಶದಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಬೆಳಗ್ಗೆ ಚಳಿಗೆ ನಡುಗುತ್ತಾ ಬರುತ್ತಿರುವುದನ್ನು ಕಾಣಬಹುದು.