ಬಂಡೆಬೊಮ್ಮನಹಳ್ಳಿಯಲ್ಲಿ 1 ಕೋಟಿ ರು.ವೆಚ್ಚದ ಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಅಭಿವೃದ್ಧಿಯ ಮಾನದಂಡಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಜನ ನಾಯಕರನ್ನು ಕ್ಷೇತ್ರದ ಜನರು ಕೈಬಿಡುವುದಿಲ್ಲ ಎನ್ನುವುದಕ್ಕೆ ನಾನು ಸಾಕ್ಷಿ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.ಸಮೀಪದ ಬಂಡೆಬೊಮ್ಮನಹಳ್ಳಿ ಗ್ರಾಮದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರಥಮ ಬಾರಿಗೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ನಂತರ ನಾಲ್ಕುವರೆ ವರ್ಷದಲ್ಲಿ ಜನರ ಮನಸ್ಸನ್ನು ಅರ್ಥಮಾಡಿಕೊಂಡು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ ಪರಿಣಾಮ ಎರಡನೆ ಬಾರಿಗೂ ನನ್ನನ್ನು ಗೆಲ್ಲಿಸಿದರು ಎಂದರು.
ಭರಮಸಾಗರದಲ್ಲಿ ಚುನಾವಣೆಗೆ ನಿಂತಾಗ ಜನರ ಬಳಿ ಹೋಗಿ ಮತ ಕೇಳಲು ರಸ್ತೆಗಳಿರಲಿಲ್ಲ. ನಾಲ್ಕುವರೆ ವರ್ಷದಲ್ಲಿ ರಸ್ತೆ, ಶಾಲಾ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿದ್ದರ ಪರಿಣಾಮ ಎರಡನೆ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 380 ಹಳ್ಳಿಗಳಲ್ಲಿ ಯಾವ ಗ್ರಾಮಕ್ಕೆ ಹೋದರು ಜನ ರಸ್ತೆ ರಾಜ ಬಂದ ಎಂದು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ ಪುನಃ ಗೆಲ್ಲಿಸಿದರು. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದಾಗ ಮತದಾರರು ಕೈಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದರು.ನಿಮ್ಮ ಊರಿನಲ್ಲಿ ಕೆರೆ ಏರಿ ಮೇಲೆ ಒಂದು ಬಸ್ ಹೋಗುತ್ತಿತ್ತು. ಅದನ್ನು ಮನಗಂಡು ಏರಿ ಅಗಲಗೊಳಿಸಿದ್ದರಿಂದ ಈಗ ಏಕ ಕಾಲದಲ್ಲಿ ಎರಡು ಬಸ್ಗಳು ಸಂಚರಿಸುತ್ತಿವೆ. ಐದು ಕೋಟಿ ರೂ.ವೆಚ್ಚದಲ್ಲಿ ಬ್ರಿಡ್ಜ್ ಕಟ್ಟಿಸಿದ್ದೇನೆ. ಎಲ್ಲಿ ಏನು ಅವಶ್ಯಕತೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಬಡ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ತಾಲ್ಲೂಕಿಗೆ ಹದಿಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಒಂದು ಶಾಲೆಯಿದ್ದರೆ ಸುತ್ತಮುತ್ತಲಿನ ಏಳೆಂಟು ಹಳ್ಳಿ ಮಕ್ಕಳಿಗೆ ಅನುಕೂಲವಾಗುತ್ತದೆ. ಬೆಳಿಗ್ಗೆ ಮನೆಗಳಿಗೆ ಹೋಗಿ ಮಕ್ಕಳನ್ನು ಕರೆ ತಂದು ಮಧ್ಯಾಹ್ನ ಬಿಸಿಯೂಟ, ಹಾಲು, ಬಾಳೆಹಣ್ಣು, ಮೊಟ್ಟೆ, ಪೌಷ್ಠಿಕಾಂಶವುಳ್ಳ ಕಾಳು, ಪಠ್ಯಪುಸ್ತಕ, ಶೂ, ಸಾಕ್ಸ್ ನೀಡಲಾಗುತ್ತದೆ. ನಂತರ ಸಂಜೆ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದು ಎಂದರು.
ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಿಂದ ತಾಲೂಕಿನಾದ್ಯಂತ ಪ್ರತಿಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಲಾಗಿದೆ. 2053ನೇ ಇಸವಿಯವರೆಗೆ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಎರಡ್ಮೂರು ತಿಂಗಳಲ್ಲಿ ನೀರು ನೀಡುತ್ತೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.ಹೊಳಲ್ಕೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಿದ್ದೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸಂತೋಷ್, ರಮೇಶ್, ನಾಗರಾಜಪ್ಪ, ಉಮೇಶ್, ಮಹೇಶಣ್ಣ, ಪರಮೇಶಣ್ಣ, ಡಾ.ವಿದ್ಯಾ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.