ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಾರ್ವಜನಿಕ ಜೀವನದಲ್ಲಿ ಪ್ರೀತಿ ವಿಶ್ವಾಸಗಳನ್ನಿಟ್ಟುಕೊಂಡು ಸಮಾಜ ಮುಖಿ ಕೆಲಸ ಮಾಡಿದವರನ್ನು ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಸಾಣೇಹಳ್ಳಿ ತರಳಬಾಳು ಶಾಖ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.ಸಮೀಪದ ಆನವೇರಿಯಲ್ಲಿ ಗ್ರಾಪಂ ಅಧ್ಯಕ್ಷ ಜಿ.ಎಚ್ ನಟರಾಜ್ಗೌಡ ಶಿವಗಾಣಾರಾಧನೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ ಸರ್ವ ಶರಣರ ಸಮ್ಮೇಳನ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.
ಎದುರಿಗಿರುವವರನ್ನು ಗೌರವಿಸುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು. ವ್ಯಕ್ತಿಯ ಬಹುದೊಡ್ಡ ಸಂಪತ್ತು ತಂದೆ ತಾಯಿಗಳು. ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯಲ್ಲಿ ಮಹಿಳೆಯರಿಗೆ ಗೌರವ ನೀಡುವುದನ್ನು ರೂಡಿಸಿಕೊಳ್ಳಬೇಕು. ದಂಪತಿ ಕಲಹಗಳು ಮನೆ ಹೊಸ್ತಿಲು ದಾಟಬಾರದು. ಆಧುನಿಕ ಯುಗದ ಭರಾಟೆಯಲ್ಲಿ ನೀತಿಗಳಿಂದ ದೂರಾಗಿ ವಿನಾಶದ ದಾರಿ ತಲುಪುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜಕ್ಕೆ ಒಳ್ಳೆಯದನ್ನು ಕೊಡುಗೆ ನೀಡುವುದನ್ನು ರೂಡಿಸಿಕೊಳ್ಳಬೇಕು. ಆರ್ಥಿಕವಾಗಿ ಸ್ಥಿತಿ ವಂತನಾದ ಮಾತ್ರಕ್ಕೆ ಸಜ್ಜನ ವ್ಯಕ್ತಿ ಎನ್ನಲಾಗದು ವ್ಯಕ್ತಿ ಜೀವನದಲ್ಲಿ ಆಚಾರ ವಿಚಾರ ಸೇರಿದಂತೆ ನಡೆ ನುಡಿಗಳಲ್ಲಿ ಗುಣತ್ವವನ್ನು ಸಂಪಾದಿಸಿದವರು ನಿಜವಾದ ಆತ್ಮತೃಪ್ತರು ಎಂದರು.ಸಂಸ್ಕಾರ ಶಿಕ್ಷಣ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸರಿ ಇದ್ದರೆ ಎಲ್ಲವೂ ಸರಿ ಇರುತ್ತವೆ. ವಿಶ್ವಾಸದ ಬದುಕಿಗೆ ಪರಿಪೂರ್ಣತೆ ಸಿಕ್ಕಾಗ ಮಾತ್ರ ಅರ್ಥಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಒಳ್ಳೆಯವರ ಸಂಘ ನಮ್ಮಲ್ಲಿನ ಅವಗುಣಗಳನ್ನು ಕಳೆಯುತ್ತದೆ ಎಂಬುದು ಸರ್ವಕಾಲಿಕ ಸತ್ಯ. ವ್ಯಕ್ತಿಯೊಬ್ಬ ಸತ್ತಮೇಲೆ ಜನರ ಬಾಯಲ್ಲಿ ಬದುಕುವುದು ಸಾರ್ಥಕತೆ ತರುತ್ತದೆ. ಬಹಳಷ್ಟು ಜನ ಬದುಕಿರುವಾಗಲೆ ಸತ್ತಿರುತ್ತಾರೆ. ಒಳ್ಳೆಯ ಕ್ರಿಯಾಶೀಲ ಬದುಕಿನ ಆತ್ಮ ಸಂತೃಪ್ತಿ ಜೀವನ ನಡೆಸಬೇಕು. ಸತ್ವದಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಂತರಿಕ ಹಾಗೂ ಬಾಹ್ಯದಲ್ಲಿ ಸತ್ವವನ್ನು ಬತ್ತಿಸಿಕೊಳಬಾರದು. ಪಾಲಕರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು. ಹಿರಿಯರನ್ನು ಉಪೇಕ್ಷೆ ಮಾಡಬಾರದು. ಪ್ರೀತಿ ವಿಶ್ವಾಸಗಳಿಗೆ ಬೆಲೆ ನೀಡುವುದನ್ನು ಮರೆಯಬಾರದು ಎಂದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪರಸ್ಪರ ಸ್ನೇಹ ಸಂಪರ್ಕಗಳು ಮುನ್ನಲೆಗೆ ಬರುತ್ತವೆ. ಗ್ರಾಮೊದ್ದಾರಕ್ಕೆ ಸಹಕರಿಸಿದವರನ್ನು ಜನತೆ ಮರೆಯುವ ಮಾತಿಲ್ಲ. ಪ್ರತಿಯೊಬ್ಬರು ಗ್ರಾಮಾಭಿವೃದ್ಧಿಗೆ ಪಣತೊಟ್ಟು ನಿಲ್ಲಬೇಕು. ಬದುಕಿರುವ ವರೆಗೆ ಒಳ್ಳೇಯದನ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಮಾಜ ಹಾಗೂ ಗುರುಗಳ ಸಹಕಾರದಿಂದ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಮಸ್ಯೆಗಳಿಗೆ ಎದೆಗುಂದದೆ ಮುನ್ನಡೆಯಬೇಕು. ನಟರಾಜಣ್ಣ ಅಂದು ಕೊಂಡಂತೆ ಪೂರಕ ಯೋಜನೆ ರೂಪಿಸಿಕೊಂಡು ಗ್ರಾಮಾಭಿವೃದ್ಧಿಗೆ ಪಟ್ಟು ಹಿಡಿಯುತ್ತಿದ್ದರು. ಆನವೇರಿ ಸುತ್ತಮುತ್ತ ಪ್ರಾಬಲ್ಯ ಹೊಂದಿದ ನಟರಾಜಣ್ಣ ಹೇಳಿದ ಕೆಲಸ ಮಾಡಿಕೊಡದ ರಾಜಕಾರಣಿಗಳಿಲ್ಲ. ಜಿಪಂ ವ್ಯಾಪ್ತಿಯಲ್ಲಿ ಜನಾನುರಾಗಿಯಾದ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ಆನಾಥ ಪ್ರಜ್ಞೆ ಪ್ರತಿಯೊಬ್ಬರನ್ನು ಕಾಡುತ್ತಿದೆ ಎಂದರು.ಗ್ರಾಮಾಂತರ ಶಾಸಕಿ ಶಾರದಪೂರ್ಯಾ ನಾಯ್ಕ್ ಮಾತನಾಡಿ, ಭೂಮಿ ಮೇಲೆ ಯಾರು ಶಾಶ್ವತರಲ್ಲ. ನಾವು ಮಾಡಿದ ಸಮಾಜಮುಖಿ ಕಾರ್ಯಗಳು ಮಾತ್ರ ಶಾಶ್ವತ. ರಾಜಕೀಯ ಜೀವನದಲ್ಲಿ ಪಕ್ಷ ಬೇದ ಇಲ್ಲದೆ ಜನರ ವಿಶ್ವಾಸಗಳಿಸುವುದು ಸುಲಭದ ಮಾತಲ್ಲ. ರಾಜಕಾರಣಿಗಳ ಮನವೊಲಿಸಿ ಗ್ರಾಮೊದ್ದಾರಕ್ಕೆ ಬೇಕಾದ ಕಾಮಾಗಾರಿಗಳನ್ನು ತೆಗೆದುಕೊಳುವಲ್ಲಿ ನಟರಾಜಗೌಡ ಮುನ್ನಲೆಯಲ್ಲಿದರು. ಭಗವಂತ ಆನವೇರಿಯ ಗೌಡ್ರು ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಬೇಕು ಎಂದರು.
ಮುಖಂಡ ಷಡಾಕ್ಷರಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಅಶೋಕ್ ನಾಯ್ಕ್, ಎಸ್ ರುದ್ರೇಗೌಡ, ಹೆಚ್.ಬಸಪ್ಪ, ಇಂಪನ, ಇಂಚರ ಮಾತನಾಡಿದರು.ಮುಖಂಡರಾದ ಜಗದೀಶ್ಗೌಡ, ಆರ್.ಪ್ರಸನ್ನಕುಮಾರ್, ಬಿ.ಕೆ ಮೋಹನ್, ಶ್ರೀನಿವಾಸ್ ಕರಿಯಣ್ಣ, ವೀರಭದ್ರಪ್ಪ ಪೂಜಾರ್, ರುದ್ರಪ್ಪಗೌಡ, ಸೋಮಶೇಖರಪ್ಪಗೌಡ, ಆಯನೂರು ಮಂಜುನಾಥ್, ಹೆಚ್.ಎಲ್ ಷಡಾಕ್ಷರಿ, ಚನ್ನವೀರಪ್ಪಗೌಡ, ಮನೋರಂಜನ, ಜಿ.ಸಿ ರೇಖಾ ಆನವೇರಿ ಗೌಡ್ರು ವಂಶಸ್ಥರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗ್ರಾಪಂ ಪದಾಧಿಕಾರಿಗಳು ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.