ಮಾಜಿ ಶಾಸಕರು ಹಾಗೂ ಕೆಲವರು ನನ್ನ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗೆ ಮಾಜಿ ಶಾಸಕರ ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆ ಮಾಡಿಸಿದ್ದೇನೆ, ಇದಕ್ಕಿಂತ ದೊಡ್ಡ ಉದಾಹರಣೆಗೆ ಬೇಕಾ ಎಂದು ವಿಪಕ್ಷದವರ ಕಾಲೆಳೆದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಿಪಕ್ಷದವರು ಟೀಕೆ ಮಾಡಲಿ ಓಕೆ, ಆದರೆ ಇಲ್ಲದಿರುವ ಟೀಕೆ ಮಾಡಿದರೆ ಜನ ನಂಬಲ್ಲ, ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ಗೆ ಸವಾಲು ಹಾಕಿದರು.

ಪಟ್ಟಣದ ಊಟಿ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ₹೧೦ ಲಕ್ಷ ವೆಚ್ಚದ ಹೆಚ್ಚುವರಿ ಶಾಲಾ ಕೊಠಡಿಗೆ ಭೂಮಿಪೂಜೆ ಬಳಿಕ ಮಾತನಾಡಿದರು.

ಮಾಜಿ ಶಾಸಕರು ಹಾಗೂ ಕೆಲವರು ನನ್ನ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗೆ ಮಾಜಿ ಶಾಸಕರ ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆ ಮಾಡಿಸಿದ್ದೇನೆ, ಇದಕ್ಕಿಂತ ದೊಡ್ಡ ಉದಾಹರಣೆಗೆ ಬೇಕಾ ಎಂದು ವಿಪಕ್ಷದವರ ಕಾಲೆಳೆದರು.

ಗುಂಡ್ಲುಪೇಟೆ ಕ್ಷೇತ್ರದ ಜನ ವಿಪಕ್ಷದವರ ಟೀಕೆ ಸ್ವೀಕರಿಸಲ್ಲ. ಗ್ಯಾರಂಟಿ ಯೋಜನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೆ ವೇಗ ಕೊಟ್ಟಿದ್ದಾರೆ. ತಾಲೂಕಿನ ಕೆರೆಗಳಿಗೆ ಡಿಸಿಎಂ ₹೪೭೫ ಕೋಟಿ ನೀಡಿದ್ದಾರೆ, ಇದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.

ನಾನು ಅಧಿಕಾರಕ್ಕೆ ಬಂದು ಎರಡು ವರ್ಷ ಒಂಬತ್ತು ತಿಂಗಳಾಗುತ್ತಿದೆ. ನಾನು ಸುಳ್ಳು ಭರವಸೆ ನೀಡಲ್ಲ, ಸುಳ್ಳು ಹೇಳುವುದೂ ಇಲ್ಲ. ಪಿಡಬ್ಲ್ಯೂಡಿ ಹಾಗೂ ಎಸ್‌ಟಿಪಿ ₹೪೦ ಕೋಟಿ ಅನುದಾನ, ಸಿಎಂ ವಿಶೇಷ ಅನುದಾನದಲ್ಲಿ ₹೮೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ನಾನು ಶಾಸಕನಾದ ಬಳಿಕ ಹತ್ತಿ ಮಾರುಕಟ್ಟೆ, ಮೊರಾರ್ಜಿ ಹಾಗೂ ಅಂಬೇಡ್ಕರ್‌ ವಸತಿ ಶಾಲೆ ನಿರ್ಮಿಸಲಾಗಿದೆ. ವಾಲ್ಮೀಕಿ, ಅಂಬೇಡ್ಕರ್‌ ಭವನ ತಲಾ ₹1 ಕೋಟಿ ಹಾಗೂ ಬೇಗೂರು ಉಪ ವಿದ್ಯುತ್‌ ಕೇಂದ್ರ ಆರಂಭವಾಗಿದೆ. ವಡ್ಡಗೆರೆ ಉಪ ವಿದ್ಯುತ್‌ ಕೇಂದ್ರಕ್ಕೆ ಭೂಮಿ ಪೂಜೆ ಮಾಡಲಾಗಿದೆ ಎಂದರು.

ನಿರಂಜನ್‌ ಕುಮಾರ್‌ ಶಾಸಕ ಅವಧಿಯಲ್ಲಿ ಯಾವ ಶಾಶ್ವತವಾದ ಕೆಲಸ ಮಾಡಿದ್ದೀರಾ?ನಿಮ್ಮ ಅವಧಿಯಲ್ಲಾದ ಆಶ್ರಮ ಶಾಲೆ ಬಿಟ್ಟರೆ ಇನ್ನಾವುದು ಇಲ್ಲ, ಹಾಗಾಗಿ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದರು.

ಪುರಸಭೆ ಮಾಜಿ ಸದಸ್ಯರಾದ ಲಿಂಗರಾಜು, ಮೋಹನ್‌ ಕುಮಾರ್‌, ರಂಗಸ್ವಾಮಿ, ಕೆ.ಶಿವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಚಿದಾನಂದ, ಯುವ ಕಾಂಗ್ರೆಸ್‌ ಸಾಹುಲ್‌, ಜಿ.ಕೆ.ಲೋಕೇಶ್‌, ಮಂಜುನಾಥ್‌, ಶಂಕರ್‌ ಸೇರಿದಂತೆ ಹಲವರಿದ್ದರು.

-------

೨೬ಜಿಪಟಿ೫

ಗುಂಡ್ಲುಪೇಟೆಯಲ್ಲಿ ಊಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೂಮಿ ಪೂಜೆ ನೆರವೇರಿಸಿದರು.