ಕಲಾಂ ಸಂಸ್ಥೆಗೆ ಅನುಮತಿ: ಡಿಡಿಪಿಐಗೆ ಫಜೀತಿ

| Published : Jun 25 2025, 11:47 PM IST / Updated: Jun 25 2025, 11:48 PM IST

ಸಾರಾಂಶ

ಶಿಸ್ತು ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಆಯುಕ್ತರರ ಕಚೇರಿ ವತಿಯಿಂದ ಸರ್ಕಾರಕ್ಕೆ ಜೂ.13ರಂದು ಬರೆಯಲಾಗಿರುವ ಪತ್ರ.

ಎನ್ ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿ ಇಲ್ಲದ ಅಬ್ದುಲ್ ಕಲಾಂ ಎಂಬ ನಕಲಿ ಸಂಸ್ಥೆಗೆ ಯೋಗ ಮತ್ತು ಗಣಕಯಂತ್ರಕ್ಕೆ ನುರಿತ ಶಿಕ್ಷಕರ ನೇಮಕಾತಿಗೆ ಸರ್ಕಾರದ ಗಮನಕ್ಕೆ ತರದೆ ಅನುಮತಿ ನೀಡಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಚಾಮರಾಜನಗರ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅವರು ಸಂಕಷ್ಟಕ್ಕೆ ಸಿಲುಕಿದ್ದು ಅವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷಣ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಶಿಸ್ತು ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ.

ಏತನ್ಮದ್ಯೆ ಅವರ ಬಡ್ತಿಗೂ ಸಹಾ ಸರ್ಕಾರದಿಂದ ತಡೆಯುಂಟಾಗಿದ್ದು ಸಾಕಷ್ಟು ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ. ಕಳೆದ ಆ.27, 2024ರಲ್ಲಿ ಕೊಳ್ಳೇಗಾಲದ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ಬಸವೇಶ್ವರ ನಗರದಲ್ಲಿನ ಡಾ.ಎಪಿಜೆ ಅಬ್ದುಲ್ ಕಲಾಂ ಎಂಬ ಸಂಸ್ಥೆಯ ಕೆಲ ಪದಾಧಿಕಾರಿಗಳು ನಾವು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಯೋಗ ಮತ್ತು ಗಣಕಯಂತ್ರಕ್ಕೆ ನುರಿತ ಶಿಕ್ಷಕರನ್ನು ಉಚಿತವಾಗಿ ನೇಮಿಸಿಕೊಡುತ್ತೇವೆ, ಅನುಮತಿ ನೀಡಿ ಎಂಬ ಮನವಿಗೆ ಅದೇ ದಿನ ಡಿಡಿಪಿಐ ಅವರು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದರು.

ಡಿಡಿಪಿಐ ಅವರ ಅನುಮತಿಯನ್ನೇ ಬಂಡವಾಳ ಮಾಡಿಕೊಂಡ ನಕಲಿ ಸಂಸ್ಥೆಯ ಪದಾಧಿಕಾರಿಗಳು ನೇಮಕಾತಿಗಾಗಿ ತಲಾ ಒಬ್ಬ ಫಲಾನುಭವಿಗಳಿಂದ ₹1 ಲಕ್ಷದಿಂದ ₹1.75 ಲಕ್ಷ ತನಕ ಅಕ್ರಮ ಹಣ ವಸೂಲಿ ಮಾಡಿ, ನಿಮ್ಮ ಹುದ್ದೆ ಕಾಯಂ ಆಗಲಿದೆ ಎಂಬಿತ್ಯಾದಿ ಆಶ್ವಾಸನೆ ನೀಡಿ, ನಿರುದ್ಯೋಗಿ ಯುವಕ, ಯುವತಿಯನ್ನು ವಂಚಿಸಿ ವಸೂಲಿ ಮಾಡಿದ್ದರು. ಈ ಸಂಬಂಧ ಕನ್ನಡಪ್ರಭ ಸುದೀರ್ಘ ಸರಣಿ ವರದಿಯನ್ನು ದಾಖಲೆ ಸಮೇತ ಪ್ರಕಟಿಸಿತ್ತು. ಮೋಸ ಹೋದ ಅನೇಕ ನಿರುದ್ಯೋಗಿ ಫಲಾನುಭವಿಗಳು ನೀಡಿದ್ದ ಲಕ್ಷಾಂತರ ಹಣದ ಪೈಕಿ ಶೇ.60ರಷ್ಟು ಪತ್ರಿಕೆ ವರದಿಯಿಂದ ಹಿಂತಿರುಗಿಸಿ ನೀಡಲಾಗಿತ್ತು. ಏತನ್ಮದ್ಯೆ ಆದೇಶ ರದ್ದುಗೊಳಿಸುವೆ ಎಂದು ಸ್ವತಃ ನೀಡಿದ್ದ ಹೇಳಿಕೆ ವಿರುದ್ದವೇ ಡಿಡಿಪಿಐ ಉಲ್ಟಾ ಹೊಡೆದರು. ತೊಂದರೆ ಆಗುತ್ತೆ ಎಂದು ಮನಗಂಡು ಆದೇಶದಲ್ಲಿನ ಸಹಿ ನನ್ನದಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಬಳಿಕ ಕನ್ನಡಪ್ರಭ ವರದಿಯನ್ನೆ ಸಾಕ್ಷಿಯನ್ನಾಗಿ ಪರಿಗಣಿಸಿ ನರಸ ಮಂಗಲ ಗ್ರಾಮದ ನಿರಂಜನ ಮೂರ್ತಿ ಎಂಬುವರು ಆಯುಕ್ತರು, ಸರ್ಕಾರ ಹಾಗೂ ಸಚಿವರಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ಕುರಿತು ಆಯುಕ್ತರು, ಸಚಿವರು ವಿಚಾರಣೆಗೆ ಆದೇಶಿಸಿ ಮೈಸೂರಿನ ಜಂಟಿ ನಿರ್ದೇಶಕರಾದ ಪಾಂಡು ಅವರನ್ನು ವಿಚಾರಣೆಗೆ ನೇಮಿಸಿ ಇಲಾಖೆ ಕ್ರಮಕೈಗೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

ಜಂಟಿ ನಿರ್ದೇಶಕರಿಂದ ಪಾರದರ್ಶಕ ವರದಿ:

ಮೈಸೂರು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪಾಂಡು ಅವರು ಈ ಪ್ರಕರಣದಲ್ಲಿ ನೊಂದವರು, ಹಾಗೂ ದೂರುದಾರರ ಹೇಳಿಕೆ ಪಡೆದುಕೊಂಡು ವಿಚಾರಣೆ ನಡೆಸಿ 150ಕ್ಕೂ ಅಧಿಕ ಪುಟಗಳ ಪಾರದರ್ಶಕ ವರದಿಯಲ್ಲಿ ಸಾರ್ವಜನಿಕ ಇಲಾಖೆಯ ಆಯುಕ್ತರಿಗೆ ಮೇ 9ರಂದು ವರದಿ ಸಲ್ಲಿಸಿದ್ದರು.

ವರದಿ ಹಿನ್ನೆಲೆ ಶಿಕ್ಷಣ ಇಲಾಖೆ ಶಿಸ್ತು ರಾಮಚಂದ್ರರಾಜೇ ಅರಸು ಅವರ ವಿರುದ್ಧ ಕ್ರಮಕ್ಕೂ ಸಹಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರಿಗೆ ಜೂನ್ 13ರಂದು ಪತ್ರ ಬರೆದಿದೆ. ಶಿಕ್ಷಣ ಇಲಾಖೆಯ ಆಯುಕ್ತರಾದ ತ್ರಿಲೋಕ್ ಚಂದ್ರ ಅವರ ಸೂಚನೆ, ಅನುಮೋದನೆ ಮೇರೆಗೆ ಜಂಟಿ ನಿರ್ದೇಶಕರಾದ ವಿಜಯ ಈ ರವಿಕುಮಾರ್ ಅವರು ಡಿಡಿಪಿಐ ಅವರು ವಿರುದ್ದ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ವರದಿ ಸಲ್ಲಿಸಿದ್ದು ಕಲಾಂ ಸಂಸ್ಥೆಯವರು ಅಮಾಯಕ ಜನರುಗಳನ್ನು, ನಿರುದ್ಯೋಗಿಗಳನ್ನು ಅವರ ಹುದ್ದೆಯನ್ನು ಕಾಯಂಗೊಳಿಸುವ, ಉದ್ಯೋಗ ನೀಡುವ ಭರವಸೆ ನೀಡಿ ಹಣ ಸಂಗ್ರಹಿಸಿರುವುದು ದಾಖಲೆ ಸಹಿತ ಕಂಡು ಬಂದಿರುತ್ತದೆ. ಈ ಹಿನ್ನೆಯಲ್ಲಿ ಅಬ್ದುಲ್ ಕಲಾಂ ಸಂಸ್ಥೆ ವಿರುದ್ದ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದು ಸೂಕ್ತವೆಂದು ದಾಖಲೆಗಳ ಮೇರೆಗೆ ಅಭಿಪ್ರಾಯಿಸಲಾಗಿದೆ. ಇಲ್ಲದಿದ್ದಲ್ಲಿ ಇದೆ ಸಂಸ್ಥೆ ಇನ್ನಿತರೆ ರಾಜ್ಯದ ಜಿಲ್ಲೆಗಳಲ್ಲೂ ಮತ್ತಷ್ಟು ಅಮಾಯಕರನ್ನು ವಂಚಿಸುವ ಸಾದ್ಯತೆ ಇರುತ್ತದೆ ಎಂಬುದಾಗಿ ಅಭಿಪ್ರಾಯಿಸಲಾಗಿದೆ. ಖಾಸಗಿ ಸಂಸ್ಥೆ (ಟ್ರಸ್ಟ್) ಮನವಿ ಆಧರಿಸಿ ಸರ್ಕಾರದ (ಇಲಾಖೆಯ) ಮೇಲಧಿಕಾರಿಗಳ ನಿರ್ದೇಶನ ಮತ್ತು ಪೂರ್ವಾನುಮತಿ ಇಲ್ಲದೆ ಸರ್ಕಾರಿ ಶಾಲೆಗಳಲ್ಲಿ ಗಣಕಯಂತ್ರ ಮತ್ತು ಯೋಗ ತರಬೇತಿಗೆ ನೀಡಲು ಅನುಮತಿ ನೀಡಿರುವ ಕ್ರಮವು ನಿಯಮ ಬಾಹಿರವಾಗಿರುತ್ತದೆ. ಚಾಮರಾಜನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಈ ಅನುಮತಿಯು ಅಮಾಯಕ ನಿರುದ್ಯೋಗಿ ಯುವಕ, ಯುವತಿಯರು ಖಾಸಗಿ ಸಂಸ್ಥೆ (ಕಲಾಂ ಸಂಸ್ಥೆ) ವಂಚನೆಗೊಳಗಾಗಲು ಅವಕಾಶ ಮಾಡಿಕೊಟ್ಟಿದ್ದು, ಡಿಡಿಪಿಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಬಡ್ತಿಗೆ ತಡೆ ಸಾಧ್ಯತೆ?ಪತ್ರಿಕೆಗೆ ದೊರೆತ ಉನ್ನತ ಮಾಹಿತಿಗಳ ಪ್ರಕಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಗಂಭೀರ ಆರೋಪ ಸಾಬೀತಾಗಿರುವ ಹಿನ್ನೆಲೆ ಬಡ್ತಿಗೆ ರಾಮಚಂದ್ರರಾಜೇ ಅರಸ್ ಅವರ ಹೆಸರನ್ನು ಪರಿಗಣಿಸದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು ಇವರ ವಿರುದ್ದ ಕ್ರಮಕ್ಕೂ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣ ಲೋಕಾಯುಕ್ತದಲ್ಲೂ ದಾಖಲಾಗಿದ್ದು ತನಿಖಾ ಪ್ರಾರಂಭದ ಹಂತದಲ್ಲಿದೆ ಎಂದು ಬಲ್ಲ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಡಿಡಿಪಿಐ ಅವರು ನಕಲಿ ಸಂಸ್ಥೆಗೆ ಸರ್ಕಾರದ ಗಮನಕ್ಕೆ ತರದೆ ಅನುಮತಿ ನೀಡಿದ ಪರಿಣಾಮ ನೂರಾರು ಮಂದಿ ನಿರುದ್ಯೋಗಿಗಳು ಲಕ್ಷಾಂತರ ಹಣ ವಂಚನೆಗೊಳಗಾಗಿ ಕಣ್ಣಲ್ಲಿ ನೀರು ಹಾಕುವಂತಾಗಿದೆ. ಕೆಲ ಮಹಿಳೆಯರು ಇವರ ಅನುಮತಿ ಆದೇಶ ನಂಬಿ ಮಾಂಗಲ್ಯ ಸರ ಕಳೆದುಕೊಳ್ಳುವಂತಾಗಿದೆ. ಕನ್ನಡಪ್ರಭ ವರದಿ ಗಮನಿಸಿ ಸರ್ಕಾರಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದೆ, ಅದರಂತೆ ಅವರ ವಿರುದ್ದ ಆರೋಪ ಸಾಬೀತಾಗಿದ್ದು ಶಿಸ್ತು ಕ್ರಮಕ್ಕೂ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. ಜೂ.26ರಂದು ಅವರಿಗೆ ಬಡ್ತಿ ಇದ್ದು ಸರ್ಕಾರ ನೀಡಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಬಡ್ತಿ ದೊರೆತರೆ ಕಾನೂನು ಹೋರಾಟ ನಡೆಸುವೆ.-ನಿರಂಜನ್ ಮೂರ್ತಿ, ದೂರುದಾರ ಡಿಡಿಪಿಐ ಅವರು ನಿಯಮ ಮೀರಿ ಕಲಾಂ ಸಂಸ್ಥೆಗೆ ಅನುಮತಿ ನೀಡಿದ ಪ್ರಕರಣ ಕುರಿತು ನನ್ನ ಗಮನಕ್ಕೆ ಬಂದಿದೆ. ಕೊಳ್ಳೇಗಾಲ ಶಾಸಕರು ನನ್ನ ಗಮನಕ್ಕೆ ದಾಖಲೆ ಸಮೇತ ತಂದಿದ್ದಾರೆ, ಸದನದಲ್ಲೂ ಸಹಾ ಚರ್ಚಿಸಿದ್ದಾರೆ. ಶಿಸ್ತು ಕ್ರಮಕೈಗೊಳ್ಳುವ ವಿಚಾರದಲ್ಲಿ ಶಿಕ್ಷಣ ಇಲಾಖೆ ವರದಿ ಗಮನಿಸಿ ಕ್ರಮಕೈಗೊಳ್ಳುವೆ, ಬಡ್ತಿ ಪಟ್ಟಿಯಲ್ಲಿ ಇವರ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು - ರಶ್ಮಿ ಮಹೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು