ಸಾರಾಂಶ
ಕಾಲೇಜಿನ ಸಂಸ್ಥಾಪಕ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿಯೊಬ್ಬರು ಸುಂದರ ಭವಿಷ್ಯದ ಕನಸು ಕಾಣಬೇಕು. ಕನಸಿನ ಸಾಕಾರತೆಗೆ ಪ್ರಯತ್ನವು ಅತ್ಯವಶ್ಯ. ಪ್ರಯತ್ನಕ್ಕೆ ತುರ್ತು ಯಶಸ್ಸನ್ನು ನಿರೀಕ್ಷಿಸದೆ ಹಲವಾರು ಸೋಲುಗಳನ್ನು ಅನುಭವಿಸಿದ ನಂತರ ಸಿಗುವ ಯಶಸ್ಸು ಪರಿಪೂರ್ಣವಾಗಿದ್ದು ಅದರಿಂದ ಸುಂದರ ಭವಿಷ್ಯದ ನಿರ್ಮಾಣ ಸಾಧ್ಯ ಎಂದು ಕೆನರಾ ಬ್ಯಾಂಕ್ ನಿವೃತ್ತ ಡಿಜಿಎಂ ಪ್ರದೀಪ್ ಆರ್. ಭಕ್ತ ಹೇಳಿದರು.ಅವರು ನಗರದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೩೩ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಮಧುಸೂದನ್ ಭಟ್, ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಉಪೇಂದ್ರ ಪೈಗಳ, ಡಾ.ಮಾಧವ ಪೈಗಳ ಸಾಧನೆಯ ಯಶಸ್ಸಿನ ಹಿಂದಿರುವ ಪರಿಶ್ರಮಗಳು ಸಾರ್ವಕಾಲಿಕ ಆದರ್ಶವಾಗಿರುವುದಾಗಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಆಶಾಕುಮಾರಿ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ಮೂರು ವರ್ಷಗಳ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಕಾವ್ಯ ಪಿ. ಶೆಟ್ಟಿ ಹಾಗೂ ಅತ್ಯುತ್ತಮ ಕ್ರಿಯಾಶೀಲ ಪ್ರಶಸ್ತಿಯನ್ನು ತೃತೀಯ ಬಿಕಾಂ ನ ಪ್ರೇಮ್ ಸಾಯಿ ರಾಘವೇಂದ್ರ ಪಡೆದುಕೊಂಡರು.
ಕಾಲೇಜಿನ ಕಚೇರಿಯ ಹಿರಿಯ ಸಿಬ್ಬಂದಿಗಳಾದ ವಿಠಲ ನಾಯಕ್ ಮತ್ತು ಶಶಿಕಾಂತ್ ಶೆಟ್ಟಿ ಅವರನ್ನು ವಿದ್ಯಾರ್ಥಿಗಳು ಸನ್ಮಾಸಿದರು. ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಮೀನಾಕ್ಷಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಕಾವ್ಯ ಶೆಟ್ಟಿ ಸ್ವಾಗತಿಸಿದರು, ಪ್ರೇಮ್ ಸಾಯಿ ವಂದಿಸಿದರು, ಪ್ರಣೀತಾ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.