ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಅಧಿಕ ರಾಸುಗಳಿಗೆ ವಿಮೆ ಮಾಡಿಸುವ ಡೈರಿ ಕಾರ್ಯದರ್ಶಿಗಳಿಗೆ ವೈಯುಕ್ತಿಕವಾಗಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಪಟ್ಟಣದ ಕಸಾಪ ಭವನದಲ್ಲಿ ಮನ್ಮುಲ್ ಒಕ್ಕೂಟದಿಂದ ಡೈರಿ ಕಾರ್ಯದರ್ಶಿಗಳಿಗೆ ರಾಸುವಿಮೆ ಮಾಡಿಸುವ ಸಂಬಂಧ ಅರಿವು ಕಾರ್ಯಾಗಾರ ಹಾಗೂ ಫಲಾನುಭವಿಗಳಿಗೆ ರಾಸು ವಿಮೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಸುಗಳಿಗೆ ವಿಮೆ ಮಾಡಿಸಲು ರೈತರು ನಿರ್ಲಕ್ಷ್ಯ ಮಾಡಬಾರದು. ವಿಮೆ ಇಲ್ಲದ ರಾಸುಗಳು ಮರಣ ಹೊಂದಿದರೆ ಪರಿಹಾರ ದೊರೆಯುವುದಿಲ್ಲ. ಕಳೆದ ವರ್ಷ ತಾಲೂಕಿನ 15,800 ರಾಸುಗಳ ಪೈಕಿ 9717 ರಾಸುಗಳಿಗೆ ಮಾತ್ರ ವಿಮೆ ಮಾಡಿಸಿದ್ದಾರೆ ಎಂದರು.ಕಾಲು ಮುರಿದುಕೊಂಡು ಅನಾಹುತಕ್ಕೆ ಒಳಗಾಗುವ ರಾಸುಗಳಿಗೂ ವಿಮೆ ಸೌಲಭ್ಯ ಮಾಡಿಸುವ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿಲಾಗುವುದು. ಹಾಗಾಗಿ ಪ್ರತಿಯೊಬ್ಬ ಕಾರ್ಯದರ್ಶಿಗಳು ವಿಮೆ ಬಗ್ಗೆ ರೈತರಿಗೆ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ಮಾಡಿಸಬೇಕು. ಅಧಿಕ ವಿಮೆ ಮಾಡಿಸುವ ಡೇರಿ ಕಾರ್ಯದರ್ಶಿಗಳಿಗೆ ನನ್ನ ವಯುಕ್ತಿಕವಾಗಿ ಬಹುಮಾನ ನೀಡಿ ಗೌರವಿಸುತ್ತೇನೆ ಎಂದರು.
ಹೈನುಗಾರಿಕೆಯನ್ನು ಹೈನೋಧ್ಯಮ ಮಾಡಬೇಕು ಎಂಬುದು ನನ್ನ ಗುರಿ. ಯುವಕರು ಉದ್ಯೋಗ ಅರಿಸಿಕೊಂಡು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಯುವಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಅಲ್ಲಿಗಿಂತ ದುಡಿಯುವುದಕ್ಕಿಂತ ಹೆಚ್ಚಾಗಿ ದುಡಿಮೆ ಮಾಡಬಹುದು ಎಂದರು.ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಡೇರಿ ಕಾರ್ಯದರ್ಶಿಗಳು ರೈತರು, ಉತ್ಪಾದಕರಿಗೆ ರಾಸುವಿಮೆ ಹಾಗೂ ಗುಂಪು ವಿಮೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ರಾಸುವಿಮೆ ಕುರಿತು ವ್ಯಾಪಕ ಪ್ರಚಾರ ಮಾಡಿಸಬೇಕು, ಎಚ್ಎಫ್, ಜರ್ಸಿ ಹಸುಗಳಲ್ಲಿ ಶೇ.5 ರಷ್ಟು ಸಾವಿನ ಸಂಖ್ಯೆ ಇರುವುದರಿಂದ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದರು.
ಕಳೆದ ವರ್ಷ ರಾಸುಗಳ ವಿಮೆ ಮಾಡಿಸಿದ್ದ ಪೈಕಿ 151 ರಾಸುಗಳು ಮರಣ ಹೊಂದಿದ್ದು, ಈ ವರೆಗೆ 51 ಲಕ್ಷ ರಾಸು ವಿಮೆ ಪರಿಹಾರ ಹಣ ಮಂಜೂರಾಗಿದೆ. 25 ಲಕ್ಷ ಬಾಕಿ ಉಳಿದಿದೆ ಎಂದರು.ಇದೇ ವೇಳೆ ಅಕಾಲಿಕ ಮರಣ ಹೊಂದಿದ 29 ರಾಸುಗಳ ಮಾಲೀಕರಿಗೆ 13.58 ಲಕ್ಷ ಮೌಲ್ಯದ ಪರಿಹಾರದ ಚೆಕ್ ಹಾಗೂ ಡೇರಿಗೆ ಜೋಳವನ್ನು ವಿತರಿಸಿದರು. ಸಹಾಯಕ ವ್ಯವಸ್ಥಾಪಕ ಡಾ.ಪ್ರಕಾಶ್ ಬೆಳಗಲಿ, ಡಾ.ಸಂತೋಷ್ ಬುಡುಗೌದ್ರ, ಮಾರ್ಗವಿಸ್ತರಣಾಧಿಕಾರಿಗಳಾದ ಸಿ.ಎನ್.ಮಧುಶಂಕರ್, ಎನ್.ಎನ್.ಜಗದೀಶ್, ಉಷಾ, ಪ್ರಜ್ವಲ್ಗೌಡ, ನಾಗೇಂದ್ರಕುಮಾರ್, ಕಾರ್ಯದರ್ಶಿಗಳಾದ ನಟರಾಜು, ಬೋರೇಗೌಡ ಸೇರಿದಂತೆ ಹಲವರು ಹಾಜರಿದ್ದರು.