ಸಾರಾಂಶ
ನರೇಗಲ್ಲ: ಸ್ಪಷ್ಟ ಶುದ್ಧ ಬರವಣಿಗೆ ಮನುಷ್ಯನನ್ನು ಅಧ್ಯಯನಶೀಲನನ್ನಾಗಿ ಮಾಡುತ್ತದೆ. ಬರವಣಿಗೆ ಮನಸ್ಸಿನ ಅಂತರಾಳದಿಂದ ಉದಯಿಸಿದ ಮುತ್ತಾಗಿರುತ್ತದೆ, ಇಂತಹ ಶುದ್ಧ ದುಂಡಾದ ಅಕ್ಷರಗಳಿಂದ ಮನಸ್ಸಿನ ಕೇಂದ್ರೀಕರಣವಾಗಿ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ ಎಂದು ಎಸ್.ಎ.ವಿ.ವಿ.ಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಸಮೀಪದ ನಿಡಗುಂದಿಯ ಶ್ರೀಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಚಲಿತರಾಗದೇ ಏಕಾಗ್ರತೆಯಿಂದ ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ, ಶುದ್ಧ ಆಹಾರ, ನೀರು, ವಿಶ್ರಾಂತಿ ಮತ್ತು ದುಗುಡಮುಕ್ತ ವಾತಾವರಣದಲ್ಲಿ ಶುದ್ಧ ಮನಸ್ಸಿನೊಂದಿಗೆ ಅಧ್ಯಯನಕ್ಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ,ದೀರ್ಘ ಓದು ಹಾಗೂ ತಂತ್ರಗಾರಿಕೆಯ ವಿಧಾನದಿಂದ ಮಹತ್ವದ ಸಂಗತಿ ಸೂತ್ರ, ಚಿತ್ರ ಸ್ಮರಣೆಯೊಂದಿಗೆ ಮುಂಬರುವ ಪರೀಕ್ಷೆಯಲ್ಲಿ ಗ್ರಾಮೀಣ ಪ್ರತಿಭೆ ಅನಾವರಣವಾಗಲಿ ಎಂದರು.
ಗುರುಮೂರ್ತಿ ಮಠಯ್ಯನಮಠ ಮಾತನಾಡಿ, ಮಕ್ಕಳಿಗೆ ವಿಶೇಷ ಕೌಶಲ್ಯದೊಂದಿಗೆ ಪ್ರಚಲಿತ ವಿದ್ಯಮಾನದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಪೈಪೋಟಿಯಲ್ಲಿ ಹಿಂಜರಿಯಬಾರದು, ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದ ಸವಲತ್ತು ಬಳಕೆ ಮಾಡಿಕೊಂಡು ಉತ್ತಮ ತಾಂತ್ರಿಕ, ವೈದ್ಯಕೀಯ ಹಾಗೂ ಇತರೇ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ಸಂಸ್ಕಾರವಂತ ನಾಗರಿಕರಾಗಿರಿ ಎಂದರು.ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಐ. ದಿಂಡೂರ, ಶಿಕ್ಷಕ ವೆಂಕನಗೌಡ, ಎಂ.ಬಿ. ಕೊಪ್ಪದ, ಎಸ್.ವಿ. ಹಳ್ಳಿಕೇರಿ, ಎಚ್.ಬಿ. ಕಟ್ಟಿಮನಿ, ಎಸ್.ಬಿ. ಹಿರೇಮಠ, ಬಿ.ಪಿ. ಕಾಗಿ, ವೀರಣ್ಣ ಅರಮನಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.