ಸಾರಾಂಶ
ಖಾಸಗಿ ಹೈಟೆಕ್ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಲಭ್ಯವಾಗುತ್ತಿರುವದು ಬಹಳಷ್ಟು ಸಂತೋಷದ ಸಂಗತಿ
ಗದಗ: ಶಿಕ್ಷಣದಿಂದ ವ್ಯಕ್ತಿ ಸುಶಿಕ್ಷಿತನಾಗಬಲ್ಲ, ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಉನ್ನತ ಸಾಧನೆಗೆ ಮುನ್ನುಡಿಯಾಗಬಲ್ಲದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ರಾಜೀವಗಾಂಧಿ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಗದಗ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸರಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಹೈಟೆಕ್ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಲಭ್ಯವಾಗುತ್ತಿರುವದು ಬಹಳಷ್ಟು ಸಂತೋಷದ ಸಂಗತಿ ಎಂದರಲ್ಲದೆ, ಬಿ.ಜಿ. ಅಣ್ಣಿಗೇರಿ ಗುರುಗಳನ್ನು ನೋಡಿದ್ದಷ್ಟೇ ಅಲ್ಲ ಅವರ ಗುರುಕುಲ ಆಶ್ರಮದಲ್ಲಿ ಒಂದು ದಿನದ ವಿದ್ಯಾರ್ಥಿಯೂ ಆಗಿದ್ದೆ ಅವರಿಂದ ಪ್ರಭಾವಿತನಾಗಿರುವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಲ್.ಬಿ. ಕಾಲವಾಡ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಹಾಗೂ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ ಪ್ರತಿಷ್ಠಾನದ ಕಾರ್ಯಚಟುವಟಿಕೆ ವಿವರಿಸಿದರು. ಲಕ್ಷ್ಮೀ ಪಂಚಾಕ್ಷರಿ ಕೊಪ್ಪದ, ಪ್ರೀತಿ ಜಗದೀಶ ಅಂಬಿಗೇರ, ದೇವರಾಜ ಹಿರೇಕುರುಬರ, ಖಾನು ಇರಕಲ್, ದಾವುದ್ ಮುಲ್ಲಾ ಅವರಿಗೆ ಮುಖ್ಯ ಅತಿಥಿಗಳು ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಸಮಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಕತ್ತಿ, ಸಿದ್ಧಣ್ಣ ಕವಲೂರ, ಕೃಷ್ಣಾ ಆಟದ, ನೇಹಾ ಖಟವಟೆ, ರೇಖಾ ಹುಡೇದ ಉಪಸ್ಥಿತರಿದ್ದರು. ಮಧು ಗಂಗಪ್ಪನವರ ಸಂಗಡಿಗರು ಪ್ರಾರ್ಥಿಸಿದರು, ಪಿ.ಎಸ್. ಕರೇಕುಲದ ಸ್ವಾಗತಿಸಿದರು. ವೈ.ಎಸ್.ಬಮ್ಮನಾಳ ವಂದಿಸಿದರು.