ಸಾರಾಂಶ
ವಿಶ್ವಯೋಗ ದಿನ । ಅಮೃತಾನಂದಮಯಿ ಭಾವಚಿತ್ರಕ್ಕೆ ಪುಷ್ಪನಮನ
ಕನ್ನಡಪ್ರಭ ವಾರ್ತೆ ದಾವಣಗೆರೆಯೋಗಾಭ್ಯಾಸದಿಂದ ಸರ್ವತೋಮುಖ ವ್ಯಕ್ತಿತ್ವದ ವಿಕಸನ ಸಾಧ್ಯವಾಗುವುದು, ಶರೀರ, ಮನಸ್ಸು, ಬುದ್ಧಿ, ಭಾವನೆಗಳು ಮತ್ತು ಆಧ್ಯಾತ್ಮ ಈ ಪಂಚಸ್ಥರಗಳು ವ್ಯಕ್ತಿತ್ವದ ಎಲ್ಲಾ ಆಯಾಮಗಳು ಸಮತೋಲನದಿಂದ ಸಮರಸಪೂರ್ಣವಾಗಿ ವಿಕಾಸ ಹೊಂದಲು ಸಹಕಾರಿಯಾಗುತ್ತದೆ ಎಂದು ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮೃತ ವಿದ್ಯಾಲಯಂ ದಾವಣಗೆರೆ ಹಾಗೂ ಅಮೃತ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ 11ನೇ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಮ್ಮ ಸಮಗ್ರ ಜೀವನದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪರಿಪೂರ್ಣ ಸಮನ್ವಯತೆಯನ್ನುಂಟು ಮಾಡುವುದು ಯೋಗದ ಉದ್ದೇಶ. ದೇಹದ ಇತರೆ ಎಲ್ಲಾ ವ್ಯವಸ್ಥೆ ಹಾಗೂ ಅಂಗಾಂಗಳ ಮೇಲೆ ನೇರ ಪ್ರಭಾವ ಬೀರುವ ನಿರ್ನಾಳ ಗ್ರಂಥಿ ವ್ಯವಸ್ಥೆ ಮತ್ತು ನರಮಂಡಲ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮರ್ಥ್ಯ ಯೋಗದಲ್ಲಿದೆ ಎಂದು ಯೋಗಾಭ್ಯಾಸದಿಂದ ನಮಗಾಗುವ ಲಾಭಗಳನ್ನು ತಿಳಿಸುತ್ತಾ ಮಕ್ಕಳ ಏಕಾಗ್ರತೆ ಮತ್ತು ಬಿದ್ದಿಮಟ್ಟ ಹೆಚ್ಚಳ ಮಾಡಿಕೊಳ್ಳುವ ಸರಳ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿ ಅಭ್ಯಾಸ ಮಾಡಿಸಿದರು.
ಪ್ರಾಚಾರ್ಯೆ ಎನ್.ಪ್ರತಿಭಾ, ಉಪ ಪ್ರಾಚಾರ್ಯ ಎಚ್.ಎಸ್.ಪ್ರತೀಕ್, ಪಪೂ ಕಾಲೇಜು ಪ್ರಾಚಾರ್ಯ ಎನ್.ಸಿ.ವಿವೇಕ್, ಯೋಗ ಶಿಕ್ಷಕ ಲಲಿತ್ಕುಮಾರ್ ವಿ. ಜೈನ್, ಶಿಕ್ಷಕರಾದ ಕವಿತಾ, ಉಷಾ ಸುರೇಶ, ವಿವಿಧ ವಿಭಾಗಗಳ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.