ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬ್ರಹ್ಮಪುರ ಗ್ರಾಮದ ಸರ್ವೇ ನಂ.132/1 ಹಾಗೂ 132/2ರ ಜಾಗವನ್ನು ಅಳತೆ ಮಾಡಿ ಸಾರ್ವಜನಿಕ ಸ್ಮಶಾನ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ನೋಂದಾಯಿಸಬೇಕು ಎಂದು ತಹಸೀಲ್ದಾರ್ ಚೇತನ ಯಾದವ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.ನಗುವನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬ್ರಹ್ಮಪುರ ಗ್ರಾಮದ ಗ್ರಾಮಸ್ಥರು ಕಳೆದ 40 ವರ್ಷಗಳಿಂದಲೂ ವಿರಿಜಾ ನಾಲೆ ಏರಿಯ ಪಕ್ಕದ ಸರ್ವೇ ನಂ.132/1 ಹಾಗೂ 132/2ರ ಜಾಗದಲ್ಲಿ ಶವ ಹೂಳುತ್ತಿದ್ದೇವೆ. ಈ ಹಿಂದೆ ಇದ್ದ ತಹಸೀಲ್ದಾರ್ ಕೂಡ ಆ ಜಾಗದಲ್ಲಿ ಶವ ಹೂಳಲು ಅನುಮತಿ ಸಹ ನೀಡಿದ್ದರು. ಆದರೆ, ಇದೀಗ ಜಾಗಗಳೆಲ್ಲ ಒತ್ತುವರಿಯಾಗುತ್ತಿವೆ ಎಂದರು.
ಮುಂದೆ ನಮ್ಮ ಗ್ರಾಮದಲ್ಲಿ ಮೃತಪಟ್ಟವರ ಶವ ಹೂಳಲು ಜಾಗವಿಲ್ಲದಂತೆ ಆಗುವ ಸಂಭವವಿದೆ. ಹಿಂದಿನಿಂದಲೂ ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೂ ಸಹ ಅನುದಾನಗಳ ನೀಡಿ ಶವ ಸಂಸ್ಕಾರ ನಡೆಸಲು ಸ್ಮಶಾನವನ್ನು ಅಭಿವೃದ್ಧಿಪಡಿಸಿದ್ಧಾರೆ ಎಂದರು.ಆದರೆ, ಆ ಜಾಗಕ್ಕೆ ಯಾವುದೇ ಖಾತೆ ಇಲ್ಲದಿರುವುದು ಬೇಸರದ ಸಂಗತಿ. ತಹಸೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈಗ ಇರುವ ಜಾಗವನ್ನು ಅಳತೆ ಮಾಡಿ ಬಂದೋಬಸ್ತ್ ಮಾಡಿಸಿಕೊಟ್ಟರೆ ಗ್ರಾಪಂ ಕೂಡ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಅಭಿವೃದ್ದಿಗೆ ಮುಂದಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.