ಸಾರಾಂಶ
ಅ.20ರಂದು ಕಾರ್ಖಾನೆ ನಿಲುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದು, ಅಷ್ಟರೊಳಗೆ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೂ ಹಣ ಬಿಡುಗಡೆ ಮಾಡಬೇಕು .
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಕಬ್ಬು ಸಾಗಾಣಿಕೆ ಹಣವನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿ, ಮೈಷುಗರ್ ಕಾರ್ಖಾನೆಗೆ ಜು.16ರಿಂದ ಅ.4ರವರೆಗೆ ಅಂದಾಜು 1600 ಮಂದಿ ರೈತರು ಕಬ್ಬು ಸರಬರಾಜು ಮಾಡಿದ್ದಾರೆ. ತಕ್ಷಣ ರೈತರಿಗೆ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಕಾರ್ಖಾನೆ ನಿಯಮಾನುಸಾರ ಕಬ್ಬು ಸಾಗಾಣಿಕೆ ಆಗಿ 15 ದಿನದೊಳಗೆ ರೈತರಿಗೆ ಹಣ ನೀಡಬೇಕು. ಆದರೆ, ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವ ಕಾರ್ಯವನ್ನು ಅ.20ರಂದು ಮುಕ್ತಾಯಗೊಳಿಸುವುದಾಗಿ ತಿಳಿಸಿದೆ. ಈವರೆಗೂ ಕನಿಷ್ಠ ಸಂಪೂರ್ಣ ರೈತರಿಗೆ ಹಣ ಬಿಡುಗಡೆಗೊಳಿಸಬೇಕಾಗಿದೆ. ಆದರೆ, ಕೇವಲ 500 ರಿಂದ 600 ಮಂದಿ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ. ರೈತರಿಗೆ ಸಕಾಲಕ್ಕೆ ಹಣ ನೀಡದೆ ಕಂಪನಿ ಆಡಳಿತ ಮಂಡಳಿಯವರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿಯಮಾನುಸಾರ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಬಿಡುಗಡೆ ಮಾಡದೆ ಬೇಜವಾಬ್ದಾರಿತನ ತೋರಿರುವ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅ.20ರಂದು ಕಾರ್ಖಾನೆ ನಿಲುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದು, ಅಷ್ಟರೊಳಗೆ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೂ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಶಿವಕುಮಾರ್ ಕೆಂಪಯ್ಯ, ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಕೃಷ್ಣ ಎಸ್, ಬೇಲೂರು ಬೊಮ್ಮೇಶ್, ಎಂ.ಎಸ್. ನಂದೀಶ್ ಸೇರಿದಂತೆ ಹಲವರು ಇದ್ದರು.