ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಕೆ

| Published : Dec 06 2024, 09:00 AM IST

ಸಾರಾಂಶ

ಕಳೆದ ಫೆಬ್ರವರಿ ೨೦೨೪ ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೆಲವೆ ದಿನಗಳಲ್ಲಿ ಪರಿಹರಿಸುವದಾಗಿ ಭರವಸೆ ನೀಡಿದ್ದು ಅದು ಇಲ್ಲಿಯವರೆಗೂ ಈಡೇರಿಲ್ಲ

ಲಕ್ಷ್ಮೇಶ್ವರ: ಆಶಾ ಕಾರ್ಯಕರ್ತೆಯರಿಗೆ, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆಯ ಮೊತ್ತ ಒಟ್ಟುಗೂಡಿಸಿ ₹೧೫,೦೦೦ ಮಾಸಿಕ ನಿಶ್ಚಿತ ಗೌರವಧನ ನೀಡಬೇಕು ಎನ್ನುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿಗೆ ಗುರುವಾರ ತಾಲೂಕಿನ ಆಶಾ ಕಾರ್ಯಕರ್ತೆಯರು ಮನವಿ ಅರ್ಪಿಸಿದರು.

ಮನವಿಯಲ್ಲಿ ರಾಜ್ಯ ಸರ್ಕಾರ ಈಗ ನೀಡುತ್ತಿರುವ ₹೫೦೦೦ ಮಾಸಿಕ ನಿಶ್ಚಿತ ಗೌರವಧನ ಮತ್ತು ವಿವಿಧ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ₹೭೦೦೦ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠೆಯ ಐದು ಗ್ಯಾರಂಟಿಗಳ ಜತೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆಯ ನೀಡಿರುವ ₹೩೦೦೦ ಗಳನ್ನು ಒಟ್ಟುಗೂಡಿಸಿ ಮಾಸಿಕ ₹೧೫,೦೦೦ ಗೌರವಧನ ನಿಗದಿ ಮಾಡಬೇಕು ಎನ್ನುವ ಬೇಡಿಕೆ ಬಹುದಿನಗಳಿಂದ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದು, ಈ ಹಿಂದೆ ಕಳೆದ ಫೆಬ್ರವರಿ ೨೦೨೪ ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೆಲವೆ ದಿನಗಳಲ್ಲಿ ಪರಿಹರಿಸುವದಾಗಿ ಭರವಸೆ ನೀಡಿದ್ದು ಅದು ಇಲ್ಲಿಯವರೆಗೂ ಈಡೇರಿಲ್ಲ, ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ಮತ್ತು ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಗರ, ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಹಗಲಿರುಳು ಸರ್ಕಾರದ ಅನೇಕ ಸೌಲಭ್ಯ ತಲುಪಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೋವಿಡ್ ಸಮಯದಲ್ಲಿ ಜೀವನ ಹಂಗು ತೊರೆದು ಪ್ರಂಟ್‌ಲೈನ್ ವಾರಿರ‍್ಸ್ ಆಗಿ ಸೇವೆ ಸಲ್ಲಿಸಿದ್ದು ಆಶಾಕಾರ್ಯಕರ್ತೆಯರಿಗೆ ಮೊಬೈಲ್ ಕೆಲಸ ಮಾಡಿಸಿಕೊಳ್ಳುವ ಕಾರ್ಯ ಕೈಬಿಡಬೇಕು ಇಲ್ಲವೆ ಮೊಬೈಲ್ ಡಾಟಾ ಪೊರೈಸುವದು, ಆರೋಗ್ಯ ವಿಮೆ, ಆರೋಗ್ಯ ರಕ್ಷಣೆ, ನಿವೃತ್ತಿ ಸಹಾಯ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆ ಆಶಾಕಾರ್ಯಕರ್ತರ ಪರವಾಗಿ ಸದನದಲ್ಲಿ ದ್ವನಿ ಎತ್ತಬೇಕೆಂದು ಮನವಿ ಮಾಡುವದಾಗಿ ಹೇಳಿದರು.

ಮನವಿ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ ಆಶಾಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿ ಸದನದಲ್ಲಿ ಈ ವಿಷಯ ಕುರಿತು ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿ ಆಶಾಕಾರ್ಯಕರ್ತೆಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುಂದ್ರಮ್ಮ ಪಾಟೀಲ, ತಾಲೂಕಾಧ್ಯಕ್ಷೆ ಸುಮಂಗಳಾ ತಳವಾರ, ಶಾರದಾ ಬಡಿಗೇರ, ಕಮಲಾ ಲಮಾಣಿ, ಮಾಮಕ್ಕ ಬನ್ನಿಮಟ್ಟಿ, ಪುಷ್ಪಾ ಹವಳದ, ಪ್ರತಿಮಾ ಮೂರ್ಖಂಡಿ, ಶಾಂತವೀರಮ್ಮ ಬಿಳಗೆ, ಚನ್ನವ್ವ ಕಾರಬಾರಿ, ಜಯಶ್ರೀ ಕಾರಬಾರಿ, ವನಜಾ ಡಂಬಳ, ಸುಧಾ ಮಂಜಲಾಪೂರ, ರುಕ್ಮಿಣಿ ವಂದಾಲ, ಸುಧಾ ನರಸಮ್ಮನವರ, ಜಯವ್ವ ಆನೆಪ್ಪನವರ, ರೂಪಾ ನಾಯಕ, ಶಿವಲೀಲಾ ಕೋಟಿಹಾಳಮಠ ಸೇರಿದಂತೆ ಅನೇಕರಿದ್ದರು.