ಸಾರಾಂಶ
ಬ್ಯಾಡಗಿ: ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 136ರಲ್ಲಿ ಬರುವ ಪಟ್ಟಣದ ಎಸ್ಜೆಜೆಎಂ ಪ್ರೌಢಶಾಲೆಯಿಂದ ಪಾಲಿಟೆಕ್ನಿಕ್ ಕಾಲೇಜುವರೆಗಿನ ರಸ್ತೆಗೆ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ಹೆಸರಿಡಬೇಕೆಂದು ಪಟ್ಟಣದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಶಾಸಕ ಬಸವರಾಜ ಶಿವಣ್ಣನವರ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸುರೇಶಗೌಡ್ರ ಪಾಟೀಲ ಅವರ ನಿಸ್ವಾರ್ಥ ಸೇವೆಯಿಂದ ಬ್ಯಾಡಗಿ ಪಟ್ಟಣವು ಅಭಿವೃದ್ಧಿಗೊಂಡಿದೆ. ಮೆಣಸಿನಕಾಯಿ ವ್ಯಾಪಾರಸ್ಥರ ಸಂಘಕ್ಕೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಾಳು ಕೊಂಪೆಯಾಗಿ ಶಿಥಿಲಾವಸ್ಥೆ ತಲುಪಿದ್ದ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಅದೇ ಹೆಸರಿನಲ್ಲಿ ಬೃಹತ್ ಕಲ್ಯಾಣಮಂಟಪ ನಿರ್ಮಿಸುವ ಮೂಲಕ ಬಡವರಿಗೂ ಕೈಗೆಟುಕುವ ದರದಲ್ಲಿ ಕಲ್ಯಾಣಮಂಟಪದಲ್ಲಿ ಮದುವೆಗಳನ್ನು ಆಯೋಜನೆ ಮಾಡಿಕೊಳ್ಳಲು ಸಹಕರಿಸಿದ್ದಾರೆ.ತಾಲೂಕು ಸೇರಿದಂತೆ ಇಲ್ಲಿನ ಮಕ್ಕಳಿಗೆ ಪದವಿ ಕಾಲೇಜು ಶಿಕ್ಷಣ ಕೊಡಿಸಲು ನಿರ್ಧರಿಸಿದ ಸುರೇಶಗೌಡ್ರ ಪಾಟೀಲ ಎಲ್ಲ ವ್ಯಾಪಾರಸ್ಥರಿಂದ ವಂತಿಗೆ ಸಂಗ್ರಹಿಸಿ ಬ್ಯಾಡಗಿ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ಥಾಪಿಸುವ ಮೂಲಕ ಕಾಲೇಜು ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ವರ್ತಕರಾದ ಬಸವರಾಜ ಛತ್ರದ, ದತ್ತಾತ್ರೇಯ ಸಾಳುಂಕೆ, ಚಂದ್ರಣ್ಣ ಶೆಟ್ಟರ, ಧನಶೆಟ್ರ ಕೊಂಚಿಗೇರಿ, ಮಲ್ಲೇಶ ಬಣಕಾರ, ಗಣೇಶ ಅಚಲಕರ, ಪರಶುರಾಮ ಉಜನಿಕೊಪ್ಪ, ಮಾಲತೇಶ ಅರಳೀಮಟ್ಟಿ, ಸೋಮೇಶಖರ ಸಂಕಣ್ಣನವರ, ಗಿರೀಶ ಶಿಂಧೆ, ಮಾಲತೇಶ ಬಾರ್ಕಿ, ಎಂ.ಟಿ. ಹಾವೇರಿ, ಎಂ.ಎನ್. ಆಲದಗೇರಿ, ವೀರಯ್ಯ ಬೂದಿಹಾಳಮಠ, ವಿನಾಯಕ ಕಂಬಳಿ, ಶೈಲೇಶ ಬೂದಿಹಾಳಮಠ, ಶಂಕರ ಬಡ್ಡಿ, ಶರಣಯ್ಯ ಬೂದಿಹಾಳಮಠ ಪುರಸಬೆ ಸದಸ್ಯರು ಉಪಸ್ಥಿತರಿದ್ದರು.ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ರಾಣಿಬೆನ್ನೂರು: ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಸೋಮವಾರ ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹನುಮಂತಪ್ಪ ಕರಬಸಪ್ಪ ರಡ್ಡೇರ(40) ಮೃತ ವ್ಯಕ್ತಿ. ಮನೆಯಲ್ಲಿ ಮಜ್ಜಿಗೆ ಕಡೆಯುವ ಯಂತ್ರದಲ್ಲಿ ಮಜ್ಜಿಗೆ ಕಡಿಯುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಲಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.ಲಾರಿಗೆ ಸಿಲುಕಿ ಮಹಿಳೆ ಸಾವುರಾಣಿಬೆನ್ನೂರು: ಬೈಕ್ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬಳು ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಲಾರಿಯ ಗಾಲಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ನಗರದ ಹಲಗೇರಿ ಕ್ರಾಸ್ ಬಳಿ ಸಂಭವಿಸಿದೆ.ತಾಲೂಕಿನ ಮೆಡ್ಲೇರಿ ಗ್ರಾಮದ ಹುಲಿಗೆಮ್ಮ ಚಿಕ್ಕಪ್ಪ ಕೂನಬೇವು(23)ಮೃತಪಟ್ಟ ಮಹಿಳೆ. ಈಕೆ ಪತಿ ಹಾಗೂ ಮಕ್ಕಳೊಂದಿಗೆ ಹಲಗೇರಿ ಗ್ರಾಮಕ್ಕೆ ತೆರಳುತ್ತಿರುವಾಗ ಕಳಪೆ ಬೀಜದ ಹಾವಳಿ ತಡೆಗೆ ಒತ್ತಾಯಿಸಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದೇ ಮಾರ್ಗದಲ್ಲಿ ಎಲ್ಲ ವಾಹನಗಳು ಸಂಚಾರ ಆರಂಭಿಸಿದಾಗ ಸಂಚಾರ ದಟ್ಟಣೆ ಹೆಚ್ಚಾಗಿ ಈ ಘಟನೆ ನಡೆದಿದೆ. ಈ ಕುರಿತು ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.