ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧ ಮುಂದೆ ಫೋಟೋ ತೆಗೆಯುವ ವಿಚಾರವಾಗಿ ಬಡಿದಾಡಿಕೊಂಡಿದ್ದ ನೇಪಾಳಿಗರನ್ನು ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಜೀತೆಂದ್ರ, ಶಕ್ತಿ ಹಾಗೂ ಈಶ್ವರ್ ಬಂಧಿತರಾಗಿದ್ದು, ಈ ಗಲಾಟೆ ಬಳಿಕ ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ವಿಧಾನಸೌಧ ಮುಂದೆ ಭಾನುವಾರ ಫೋಟೋ ತೆಗೆಯುವ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಇದೇ ರೀತಿ ಘರ್ಷಣೆ ಮಾಡಿಕೊಂಡು ನೇಪಾಳದ ಕೆಲವರು ಜೈಲು ಸೇರಿದ್ದರು. ಈಗ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ. ಈ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ತನಿಖೆಗಿಳಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ಹಲವು ದಿನಗಳ ಹಿಂದೆ ಕೆಲಸ ಅರಸಿಕೊಂಡು ನೇಪಾಳದಿಂದ ನಗರಕ್ಕೆ ಆರೋಪಿಗಳು ಬಂದಿದ್ದರು. ತರುವಾಯ ಇಂದಿರಾ ನಗರ ಸೇರಿದಂತೆ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ಗಳಾಗಿ ನೇಮಕಗೊಂಡಿ ಜೀವನ ಸಾಗಿಸುತ್ತಿದ್ದರು. ತಮಗೆ ಭಾನುವಾರ ರಜೆ ಇದ್ದ ಕಾರಣಕ್ಕೆ ವಿಧಾನಸೌಧ ಹಾಗೂ ಕಬ್ಬನ್ ಪಾರ್ಕ್ ಸುತ್ತಾಟಕ್ಕೆ ಆರೋಪಿಗಳು ಬಂದಿದ್ದರು. ಆ ವೇಳೆ ಫೋಟೋ ತೆಗೆಯುವ ವಿಚಾರವಾಗಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮೀಲಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.