ಕ್ರೀಡೆಯಿಂದ ದೈಹಿಕ, ಮಾನಸಿಕ ಸ್ಥಿರತೆ: ಹೊರಟ್ಟಿ

| Published : Mar 05 2024, 01:30 AM IST

ಸಾರಾಂಶ

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥಿರತೆ ಹೆಚ್ಚಾಗಲಿದೆ. ಇದು ಕಲಿಕೆಯಲ್ಲೂ ಉತ್ತಮ ಸಾಧನೆಗೆ ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥಿರತೆ ಹೆಚ್ಚಾಗಲಿದೆ. ಇದು ಕಲಿಕೆಯಲ್ಲೂ ಉತ್ತಮ ಸಾಧನೆಗೆ ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯವು ಸೋಮವಾರ ಜ್ಞಾನಭಾರತಿ ಕ್ಯಾಂಪಸ್‌ನ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖೇಲೋ ಇಂಡಿಯಾ ಮತ್ತು ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ವಿಜೇತರಾದ ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಕ್ರೀಡಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥಿರತೆ ಹೆಚ್ಚಾಗಲು ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರು ಎಲ್ಲ ಕ್ಷೇತ್ರದಲ್ಲೂ ಶಿಸ್ತು ಹೊಂದಿರುತ್ತಾರೆ. ವಿದ್ಯಾರ್ಥಿಗಳು ಈಗಿನಿಂದಲೇ ವ್ಯವಸ್ಥೆಯ ಬದಲಾವಣೆಯ ಭಾಗವಾಗಬೇಕು ಎಂದು ಸಲಹೆ ನೀಡಿದರು.

ತಾವು ಕೂಡ ಬೆಂಗಳೂರು ವಿಶ್ವವಿದ್ಯಾಲಯ ಹಳೆಯ ವಿದ್ಯಾರ್ಥಿ. ಬಿ.ಪಿ.ಎಡ್, ಎಂ‌.ಪಿ.ಎಡ್ ವ್ಯಾಸಂಗವನ್ನು ಬೆಂಗಳೂರು ವಿವಿಯಲ್ಲಿ ಮುಗಿಸಿ ನಂತರ ದೈಹಿಕ ಶಿಕ್ಷಕನಾಗಿ ವೃತ್ತಿ ನಿರ್ವಹಿಸಿದೆ. ನಂತರ ರಾಜಕೀಯ ಪ್ರವೇಶಿಸಿ ಪರಿಷತ್ತು ಸದಸ್ಯನಾದೆ. ಬೆಂಗಳೂರು ವಿದ್ಯಾರ್ಥಿಯಿಂದ ಸಭಾಪತಿ ಸ್ಥಾನದದವರೆಗಿನ ಪಯಣ ಹೆಮ್ಮೆ ತಂದಿದೆ ಎಂದು ಸಭಾಪತಿ ನುಡಿದರು.

ವಿವಿಯ ಕುಲಪತಿ ಡಾ। ಎಸ್‌.ಎಂ.ಜಯಕರ ಮಾತನಾಡಿ, ಭಾರತ ಇಂದು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ, ಅದೇ ನಿಟ್ಟಿನಲ್ಲಿ ಮುಂದೆಯೂ ಕ್ರೀಡಾ ಕ್ಷೇತ್ರದಲ್ಲಿ ದೇಶ ನಂಬರ್ ಒನ್ ಆಗಬೇಕಾಗಿದೆ‌. ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸುವಂತಾಗಬೇಕು. ಹಾಗಾಗಿ ಪಿಎಂ ಉಷಾ ಯೋಜನೆಯ ₹100 ಕೋಟಿ ಅನುದಾನದಲ್ಲಿ ಕ್ರೀಡಾಸೌಲಭ್ಯಗಳ ಉನ್ನತೀಕರಣಕ್ಕೂ ಕೂಡ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕುಲಸಚಿವ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಶ್ರೀನಿವಾಸ್, ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಪಿ.ಸಿ.ಕೃಷ್ಣಸ್ವಾಮಿ ಉಪಸ್ಥಿತರಿದ್ದರು.

--

ಕ್ಯಾಪ್ಷನ್‌:

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖೇಲೋ ಇಂಡಿಯಾ ಮತ್ತು ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ವಿಜೇತರಾದ ಬೆಂಗಳೂರು ವಿ.ವಿ.ಯ 42 ವಿದ್ಯಾರ್ಥಿಗಳಿಗೆ ಸಭಾಪತಿ ಬಸವರಾಜ್ ಹೊರಟ್ಟಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ನೀಡಿ ಸನ್ಮಾನಿಸಿದರು‌.