ಯೋಗ ಜೀವನದ ಪದ್ಧತಿಯಾಗಿದೆ, ಯೋಗದಲ್ಲಿ ತೊಡಗಿಕೊಂಡು ಅಷ್ಟಾಂಗ ಯೋಗವನ್ನು ಕಲಿಯುವುದರಿಂದ ಎಲ್ಲಾ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ, ಆದ್ದರಿಂದ ಗ್ರಾಮೀಣ ಭಾಗದಲ್ಲೂ ಜನರನ್ನು ಯೋಗದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿ ಆರೋಗ್ಯಕರ ಸಮಾಜ ನಿರ್ಮಿಸುವ ಉದ್ದೇಶದಿಂದ 90 ದಿನಗಳ ಕಾಲ ತಾಲೂಕಿನ 45 ಗ್ರಾಪಂ ಕೇಂದ್ರಗಳಲ್ಲೂ ಸಹ ಯೋಗ ತರಬೇತಿ ನೀಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ರಾಷ್ಟ್ರೀಯ ಆಯುಷ್ ಮಿಷನ್ ಅಡಿಯಲ್ಲಿ ರಾಜ್ಯ ಆಯುಷ್ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯನ್ನು ಯೋಗ ಹಬ್ ಆಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ನಂಜನಗೂಡು ತಾಲೂಕನ್ನು ಫೈಲಟ್ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿಕೊಂಡು ಯೋಜನೆ ಜಾರಿಗೆ ಜು. 19 ರಂದು ಚಾಲನೆ ನೀಡಲಾಗುತ್ತಿದೆ ಎಂದು ತಾಲೂಕು ಆಯುಷ್ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಹೇಳಿದರು.ಯೋಗ ಜೀವನದ ಪದ್ಧತಿಯಾಗಿದೆ, ಯೋಗದಲ್ಲಿ ತೊಡಗಿಕೊಂಡು ಅಷ್ಟಾಂಗ ಯೋಗವನ್ನು ಕಲಿಯುವುದರಿಂದ ಎಲ್ಲಾ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ, ಆದ್ದರಿಂದ ಗ್ರಾಮೀಣ ಭಾಗದಲ್ಲೂ ಜನರನ್ನು ಯೋಗದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿ ಆರೋಗ್ಯಕರ ಸಮಾಜ ನಿರ್ಮಿಸುವ ಉದ್ದೇಶದಿಂದ 90 ದಿನಗಳ ಕಾಲ ತಾಲೂಕಿನ 45 ಗ್ರಾಪಂ ಕೇಂದ್ರಗಳಲ್ಲೂ ಸಹ ಯೋಗ ತರಬೇತಿ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ ನಂಜನಗೂಡು ತಾಲೂಕಿನ 45 ಗ್ರಾಮ ಪಂಚಾಯತಿಗಳಿಗೆ ತಲಾ ಇಬ್ಬರಂತೆ 90 ಮಂದಿ ಯೋಗ ಬೋಧಕರನ್ನು ಹಾಗೂ ಯೋಜನೆಯ ವ್ಯವಸ್ಥಿತ ಅನುಷ್ಟಾನಕ್ಕಾಗಿ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಮತ್ತು ಕಾಲೇಜಿನ 10 ಮಂದಿ ಸಿಬ್ಬಂದಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. 90 ದಿನಗಳ ಕಾಲದ ನಿರಂತರ ಯೋಗ ತರಬೇತಿ ಹಾಗೂ ಕಲಿಕೆಯಲ್ಲಿ ಸಮಸ್ತ ಜನರು ಭಾಗಿಯಾಗುವಂತೆ ನೋಡಿಕೊಳ್ಳುವುದು ಯೋಜನೆಯ ಉದ್ಧೇಶವಾಗಿದ್ದು 65, ಲಕ್ಷದ 64, ಸಾವಿರದ 560 ರೂಗಳ ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಟಾನಗೊಳಿಸಲು ಸರ್ಕಾಾರದ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಉದ್ಘಾಟನೆಯು ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಜು. 19ರ ಬೆಳಗ್ಗೆ 6 ರಿಂದ 8 ರವರೆಗೆ ಜರುಗಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಉದ್ಘಾಟಿಸುವರು, ಶಾಸಕ ದರ್ಶನ್ ಧ್ರುವನಾರಾಯಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಸುನಿಲ್ ಬೋಸ್ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ನಂಜನಗೂಡಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎನ್.ಆರ್. ಗಣೇಶಮೂರ್ತಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಜನರ ಜೀವನ ಶೈಲಿ ಹಾಗೂ ಆಹಾರ ಸೇವನಾ ಕ್ರಮದಲ್ಲಾಗಿರುವ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹೀಗಾಗಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ನೆರವಾಗಲಿದೆ. ಇನ್ನು ಯೋಗವೆಂದರೆ ದೈಹಿಕ ಕಸರತ್ತಲ್ಲ ಬದಲಾಗಿ ಅದೊಂದು ಜೀವನ ಶೈಲಿಯ ವಿಧಾನ ಎಂಬುದನ್ನು ಜನರಲ್ಲಿ ಅರಿವು ಮೂಡಿಸಬೇಕು, ಈ ನಿಟ್ಟಿನಲ್ಲಿ ಯೋಗ ತರಬೇತುದಾರರ ಮಾರ್ಗದರ್ಶನ ಅವಶ್ಯಕವಾಗಿದ್ದು, ನಂಜನಗೂಡಿನಲ್ಲಿ ಮೂರು ತಿಂಗಳ ಕಾಲ ನಡೆಯಲಿರುವ ಯೋಗ ತರಬೇತಿಗೆ ನಂಜನಗೂಡಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಆಯುಷ್ ವೈದ್ಯಾಧಿಕಾರಿಗಳಾದ ಡಾ. ರಾಘವೇಂದ್ರ ಆಚಾರ್, ಡಾ. ಸುಜಾತಾ ಇದ್ದರು.