ಸಾರಾಂಶ
ಸಮಾಜದ ಋಣ ತೀರಿಸಲು ದಾನ ಧರ್ಮ ಮಾಡುವ ಸದ್ಗುಣಗಳು ಮನುಷ್ಯನಲ್ಲಿ ಬರಬೇಕು. ಶ್ರೀಗುರುಬಸವ ದೇವರು ಈ ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಾಧು, ಸಂತರು, ಮಹಾತ್ಮರ ಸೇವೆ ಮಾಡುವ ಗುಣಧರ್ಮ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ಈ ನಾಡಿನ ಭಕ್ತಿ ಪರಂಪರೆಗೆ ಮುನ್ನುಡಿ ಬರೆದ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ಸಾಗುವ ಮೂಲಕ ಗುರುವಿನ ಸೇವಾ ಕಾರ್ಯ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಇಳಕಲ್ಲಿನ ಶ್ರೀಗುರು ಮಹಾಂತ ಶ್ರೀಗಳು ಹೇಳಿದರು. ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿರುವ ಶರಣ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಮಠದ ನಿಯೋಜಿತ ಪೀಠಾಧಿಕಾರಿ ಗುರುಬಸವ ದೇವರಿಗೆ ಸನ್ಮಾನಿಸಿ ಮಾತನಾಡಿ, ಸಮಾಜದ ಋಣ ತೀರಿಸಲು ದಾನ ಧರ್ಮ ಮಾಡುವ ಸದ್ಗುಣಗಳು ಮನುಷ್ಯನಲ್ಲಿ ಬರಬೇಕು. ಶ್ರೀಗುರುಬಸವ ದೇವರು ಈ ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದರು.ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಮಾತನಾಡಿ, ಹಣ, ಸಂಪತ್ತು ಎಲ್ಲರೂ ಗಳಿಸುತ್ತಾರೆ. ಬದುಕು ಕಷ್ಟ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಹಣ, ಸಂಪತ್ತು ಗಳಿಸುವ ಮೂಲಕ ಸಮಾಜದಲ್ಲಿ ಕಷ್ಟವನ್ನು ಮೆಟ್ಟಿನಿಂತು ಆದರ್ಶರಾಗಿ ಬೆಳೆದುನಿಲ್ಲಲು ಶರಣರ ಸತ್ಯದ ನಡೆ, ನುಡಿಗಳು ನಮ್ಮಲ್ಲಿ ಒಳಮೂಡಬೇಕು ಎಂದರು.
ಕೋಟೆಕಲ್ಲ ಶ್ರೀಹೊಳೆ ಹುಚ್ಚೇಶ್ವರ ಶ್ರೀಗಳು, ಶಿರೂರು ತೀರ್ಥದ ಡಾ.ಬಸವಲಿಂಗ ಶ್ರೀಗಳು, ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ನಿಯೋಜಿತ ಪೀಠಾಧಿಕಾರಿ ಶ್ರಿಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆ ಚೇರಮನ್ ರಾಜು ಜವಳಿ, ಸಂಗನಬಸಪ್ಪ ಚಿಂದಿ, ನಾಗೇಶಪ್ಪ ಪಾಗಿ, ಚಂದ್ರಶೇಖರ ಹೆಗಡೆ, ಭಾಗ್ಯಾ ಉದ್ನೂರ ಇತರರು ಇದ್ದರು.