ಮರ, ಪ್ರಾಣಿಗಳಿಗಾಗಿ ಬೆಟ್ಟದಲ್ಲಿ ಹೊಂಡ: ಎಚ್.ಗೋಣಿಬಸಪ್ಪ

| Published : Jun 09 2025, 02:43 AM IST

ಸಾರಾಂಶ

ಬೆಟ್ಟದ ಮೇಲ್ಭಾಗದಲ್ಲಿ ಗ್ರಾಪಂನಿಂದ ಹೊಂಡವನ್ನು ಮಾಡುವ ಯೋಜನೆ ಇದ್ದು, ಇದರಿಂದ ಇಲ್ಲಿನ ಗಿಡ ಮರಗಳಿಗೆ, ಪ್ರಾಣಿ ಪಕ್ಷಿಗಳಿಗೆ ನಿರಂತರ ನೀರಿನ ವ್ಯವಸ್ಥೆಯಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಗೋಣಿಬಸಪ್ಪ ಎಂದು ಹೇಳಿದರು.

ಸಾರಥಿ ಗ್ರಾಮದಲ್ಲಿ ಗಿಡ ನೆಡುವ ಕಾರ್ಯ । ರೈತರಿಗೆ ಹಣ್ಣಿನ ಗಿಡ ವಿತರಣೆ

ಕನ್ನಡಪ್ರಭ ವಾರ್ತೆ ಹರಿಹರ

ಬೆಟ್ಟದ ಮೇಲ್ಭಾಗದಲ್ಲಿ ಗ್ರಾಪಂನಿಂದ ಹೊಂಡವನ್ನು ಮಾಡುವ ಯೋಜನೆ ಇದ್ದು, ಇದರಿಂದ ಇಲ್ಲಿನ ಗಿಡ ಮರಗಳಿಗೆ, ಪ್ರಾಣಿ ಪಕ್ಷಿಗಳಿಗೆ ನಿರಂತರ ನೀರಿನ ವ್ಯವಸ್ಥೆಯಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಗೋಣಿಬಸಪ್ಪ ಎಂದು ಹೇಳಿದರು.

ತಾಲೂಕಿನ ಸಾರಥಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಸಾರಥಿಯ ಸರ್ಕಾರಿ ಶಾಲೆಗಳ ಹಿರಿಯ ವಿದ್ಯಾರ್ಥಿ ಬಳಗ ಹಾಗೂ ಹರಿಹರದ ನನ್ನ ಊರು ನನ್ನ ಹೊಣೆ ತಂಡದ ಸಹಯೋಗದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ ಬೆಟ್ಟದಲ್ಲಿ 1000ಕ್ಕೂ ಅಧಿಕ ವಿವಿಧ ಜಾತಿಯ ಹಣ್ಣಿನ ಗಿಡ ನೆಟ್ಟು ಗ್ರಾಮದ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ನಾಗಲಿಂಗ ಪುಷ್ಪದ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅನೇಕರು ತೋರಿಕೆಗಾಗಿ ಗಿಡ ನೆಡುವ, ಗಿಡಕ್ಕೆ ನೀರು ಹಾಕುವ ಕಾರ್ಯ ಮಾಡುತ್ತಾರೆ. ಆದರೆ ಗ್ರಾಮದ ಸರ್ಕಾರಿ ಶಾಲೆಯ ಹಿರಿಯ ವಿದ್ಯಾರ್ಥಿ ಬಳಗದ ಸದಸ್ಯರು ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಡುತ್ತ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬೆಟ್ಟದ ತುತ್ತ ತುದಿಯಲ್ಲಿ ನೆಡಲಾಗುತ್ತಿರುವ ಸಾವಿರಕ್ಕೂ ಹೆಚ್ಚು ಸಸಿಗಳ ಬೆಳವಣಿಗೆಗಾಗಿ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಸಾರ್ವಜನಿಕರು ದೇಣಿಗೆ ಮೂಲಕ ಸುಮಾರು 15-20 ಪೈಪ್‍ಲೈನ್ ಹಾಕಿಸಿದ್ದಾರೆ. ನನ್ನ ಊರು ನನ್ನ ಹೊಣೆ ತಂಡದ ರಾಘವೇಂದ್ರ ಹಾಗೂ ರವಿಕುಮಾರ ಮಾತನಾಡಿ, ಪ್ರತಿ ವರ್ಷ ಸಾವಿರ ಗಿಡ ನೆಡುವ ಸಂಕಲ್ಪವೇ ಅದ್ಭುತ ಅವರ ಕರೆಗೆ ಓಗೊಟ್ಟು ಹರಿಹರದ ತಂಡದ ಅನೇಕ ಸದಸ್ಯರು ಆಗಮಿಸಿ ಗಿಡ ನೆಟ್ಟು ಸಂತಸ ಪಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸಲಾಯಿತು.

ಸಾರಥಿಯ ಸರ್ಕಾರಿ ಶಾಲೆಗಳ ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಹಾಗೂ ಸಹಶಿಕ್ಷಕ ವೈ.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷೆ ಹೊನ್ನಮ್ಮ ಆನ್ವೇರಿ ಹಾಗೂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಟಿ.ಎ.ಬೀರೇಶ್, ಮಾಜಿ ಸೈನಿಕ ಬಸವರಾಜ, ಸಹ ಶಿಕ್ಷಕ ವೈ. ರಾಘವೇಂದ್ರ, ನಾಟಕ ರಚನೆಕಾರ ಟಿ.ಆರ್.ವೇಣು ಗೋಪಾಲ, ಸಾಹಿತಿ ಪಿ.ರಾಜಪ್ಪ, ಗ್ರಾಪಂ ಕಾರ್ಯದರ್ಶಿ ಕೆ.ಚನ್ನಪ್ಪ, ಹರಿಹರದ ನನ್ನ ಊರು ನನ್ನ ಹೊಣೆ ತಂಡದ ಸದಸ್ಯರು ಭಾಗವಹಿಸಿದ್ದರು.