ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಜನರ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಗಿಡ ನೆಟ್ಟು ಬೆಳೆಸುವುದಕ್ಕೆ ಹಾಗೂ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಗಿಡಗಳ ವಿತರಣೆಗೆ ಆರ್ಥಿಕ ನೆರವನ್ನು ಕೃಷಿಕರಿಗೆ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ರೈತರಿಗೆ 1,63,000 ಗಿಡಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಆ್ಯಂಟೋನಿ ಮರಿಯಪ್ಪ ತಿಳಿಸಿದ್ದಾರೆ.ಅವರು ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ರೈತರಿಗೆ ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ 9 ನರ್ಸರಿಗಳಲ್ಲಿ ಮತ್ತು ಸಾಮಾಜಿಕ ಅರಣ್ಯ ವಿಭಾಗದ 5 ನರ್ಸರಿಗಳ ಮೂಲಕ ಸುಮಾರು 30 ವಿವಿಧ ರೀತಿಯ ಸಸ್ಯಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಒಬ್ಬ ರೈತನಿಗೆ ಗರಿಷ್ಠ ಒಂದು ಹೆಕ್ಟೇರ್ಗೆ 400 ಸಸಿ ವಿತರಿಸುವ ಯೋಜನೆ ಇದೆ. ಕೃಷಿ ಅರಣ್ಯ ವಿಕಾಸ ಯೋಜನೆಯಲ್ಲಿ ಪ್ರತಿ ಗಿಡ ನೆಟ್ಟು ಸಂರಕ್ಷಣೆ ಮಾಡಲು 125 ರು. ಆರ್ಥಿಕ ನೆರವು ರೈತರಿಗೆ ನೀಡಲಾಗುತ್ತದೆ. ನರೇಗಾದಲ್ಲೂ ಗಿಡ ನೆಡಲು ಸಹಾಯ ನೀಡಲಾಗುತ್ತದೆ ಎಂದರು.ಕಳೆದ ವರ್ಷ 7,79,000 ಗಿಡಗಳನ್ನು ಅರಣ್ಯದಲ್ಲಿ, 35,600 ಗಿಡಗಳನ್ನು ಅರಣ್ಯೇತರ ಕಡೆಗಳಲ್ಲಿ ನೆಡಲಾಗಿದೆ. 4,41,000 ಗಿಡಗಳನ್ನು ರೈತರಿಗೆ ನೀಡಲಾಗಿದೆ. 2024-25 ರಲ್ಲಿ 5 ಲಕ್ಷ ಸಸಿ ನೆಡುವ ಯೋಜನೆ ಇದೆ. ಈ ರೀತಿಯ ಪ್ರತಿ ವರ್ಷ ಸುಮಾರು 7 ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ ಎಂದು ಮರಿಯಪ್ಪ ಹೇಳಿದರು.ಹಣ್ಣಿನ ಮರಗಳ ತೋಪು:
ಕಾಡು ಪ್ರಾಣಿಗಳು ಮುಖ್ಯವಾಗಿ ಆನೆಗಳ ಹಾವಳಿ ತಡೆಯಲು ಕಾಡಿನಲ್ಲಿ ಅಕೇಶಿಯ ಮರಗಳನ್ನು ತೆರವುಗೊಳಿಸಿ ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿದೆ. ಇದುವರೆಗೆ ಸುಮಾರು 900 ಹೆಕ್ಟೇರ್ ಅಕೇಶಿಯ ಮರಗಳ ತೋಪು ತೆರವುಗೊಳಿಸಿ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ ಎಂದರು.ಆನೆಗಳ ದಾಳಿ ತಡೆಗೆ ಸೋಲಾರ್ ಬೇಲಿ ಸೇರಿದಂತೆ ಜನವಸತಿಗೆ ನುಗ್ಗದಂತೆ ತಡೆಗಳನ್ನು ನಿರ್ಮಿಸಲಾಗಿದೆ. ಆನೆಗಳ ಪಥ ಹಲವಾರು ವರ್ಷಗಳಿಂದ ಒಂದೇ ಆಗಿರುತ್ತದೆ. ರಸ್ತೆ ಇತರ ಕಾಮಗಾರಿಯ ಸಂದರ್ಭದಲ್ಲಿ ಈ ಪಥ ಬದಲಾದರೆ ಆನೆಗಳು ಗೊಂದಲಕ್ಕೆ ಒಳಗಾಗಿ ಹೊಸ ದಾರಿ ಹುಡುಕುತ್ತವೆ. ಇದರಿಂದ ಸಾಕಷ್ಟು ಬಾರಿ ಅವುಗಳು ನಾಡಿಗೆ ನುಗ್ಗಿದ ಉದಾಹರಣೆಗಳಿವೆ. ಕಳೆದ 2023-24ರಲ್ಲಿ ಆನೆ ದಾಳಿಯಿಂದ ನಾಲ್ಕು ಜೀವ ಹಾನಿಯಾಗಿದೆ. ಆನೆ, ಕಡವೆ, ಮಂಗಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಅವರಿಗೆ ಪರಿಹಾರ ನೀಡುವ ಯೋಜನೆ ಇದೆ ಎಂದು ಡಿಸಿಎಫ್ ತಿಳಿಸಿದರು.ಚಾರಣ ಆನ್ಲೈನ್ ಬುಕ್ಕಿಂಗ್:
ಚಾರಣ ಪ್ರಿಯರಿಗೆ ಆನ್ಲೈನ್ ಮೂಲಕ ಬುಕ್ ಮಾಡಿ ಹೋಗಲು ಅವಕಾಶವಿದೆ. ಅರಣ್ಯದ ಕಾನೂನಿನಲ್ಲಿ ನೀಡಲಾದ ವಿನಾಯಿತಿಗಳ ಹೊರತಾಗಿ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ಇಲಾಖೆ ಅನುಮತಿ ನೀಡುವುದಿಲ್ಲ. ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈ ನಿಯಮ ರೂಪಿಸಲಾಗಿದೆ ಎಂದು ಡಿಸಿಎಫ್ ಎ.ಮರಿಯಪ್ಪ ತಿಳಿಸಿದರು.ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪ್ರೊಬೆಷನರಿ ಐಎಫ್ಎಸ್ ಅಧಿಕಾರಿ ಅಕ್ಷಯ್ ಪ್ರಕಾಶ್ಕರ್, , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಇದ್ದರು.ಇದೇ ಸಂದರ್ಭ ಪತ್ರಕರ್ತರಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು.