ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ ನಾಟಿ ಔಷಧಿ ಉಪಯುಕ್ತ

| Published : Jan 12 2025, 01:15 AM IST

ಸಾರಾಂಶ

ನಾಟಿ ಔಷಧಿ ಪದ್ಧತಿ ಶತಶತಮಾನಗಳಿಂದ, ಪೀಳಿಗೆಯಯಿಂದ ಪೀಳಿಗೆ ನಡೆದುಕೊಂಡು ಬಂದಿದೆ.

ಹರಪನಹಳ್ಳಿ: ನಾಟಿ ಔಷಧಿ ಪದ್ಧತಿ ಶತಶತಮಾನಗಳಿಂದ, ಪೀಳಿಗೆಯಯಿಂದ ಪೀಳಿಗೆ ನಡೆದುಕೊಂಡು ಬಂದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ನಾಟಿ ಔಷಧಿ ಉಪಯುಕ್ತವಾಗಲಿದೆ ಎಂದು ಸ್ಥಳೀಯ ತೆಗ್ಗಿನ ಮಠದ ಪೀಠಾಧಿಪತಿ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು.

ಪಟ್ಟಣದ ತೆಗ್ಗಿನಮಠದ ಆವರಣದಲ್ಲಿ ಕರ್ನಾಟಕ ಪಾರಂಪರಿಕ ನಾಟಿ ವೈದ್ಯರ ಸಂಘದಿಂದ ಆಯೋಜಿಸಿದ್ದ 108 ಗಿಡಮೂಲಿಕೆಗಳಿಂದ ತಯಾರಿಸಿದ ಉಚಿತ ಕಷಾಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಪಾರಂಪರಿಕ ನಾಟಿ ಔಷಧಿ ಪದ್ಧತಿ ಬೌಗೋಳಿಕ ಮತ್ತು ಪರಿಸರ ವಾಗಿ ಬಂದಿದೆ. ಪ್ರಚಾರದ ಕೊರತೆಯಿಂದ ಹೆಚ್ಚಿನ ಜನರಿಗೆ ತಲುಪಲಾಗಿಲ್ಲ. ಪಾರಂಪರಿಕ ನಾಟಿ ವೈದ್ಯರ ಸಂಘ ಆರೋಗ್ಯವಂತ ಸಮಾಜ ನಿರ‍್ಮಾಣದ ಗುರಿ ಹೊಂದಿದ್ದಾರೆ ಎಂದರು.

ನಾಟಿ ಔಷಧಿ ಬಗ್ಗೆ ಸರಿಯಾದ ಬರವಣಿಗೆ ಆಗಿಲ್ಲ. ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇದರ ಪ್ರಯೋಜನ ನಾವು ಪಡೆಯಬೇಕು ಎಂದರು.

ನಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಗಿಡಮೂಲಿಕೆ ಪಡೆಯಬೇಕು. ಇದರಿಂದ ನಮ್ಮ ದೇಹಕ್ಕೆ ಯಾವುದೇ ಪರಿಣಾಮ ಬಿರಲ್ಲ ಎಂದರು.

ಪಾರಂಪರಿಕ ಔಷಧಿ ನಮ್ಮ ದಾರ್ಮಿಕ ಸಾಂಸ್ಕೃತಿಕ ಅವಿಭಾಜ್ಯ ಅಂಗವಾಗಿದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ಇಲ್ಲಿಗೆ ಸೀಮಿತ ಮಾಡಬೇಡಿ. ಪ್ರತಿ ವರ್ಷ ಮಾಡಿ ನಿಮ್ಮ ಜೊತೆ ನಮ್ಮ ಮಠ ಸದಾ ಇರುತ್ತದೆ ಎಂದರು.

ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಭಾರತೀಯ ವೈದ್ಯಕೀಯ ಪದ್ಧತಿಯನ್ನು ಪಾರಂಪರಿಕವಾಗಿ ಆಚರಣೆ ಮಾಡುತ್ತ ಬರಲಾಗಿದೆ. ಸರ್ಕಾರ ಇದಕ್ಕೆಲ್ಲ ಹೆಚ್ಚಿನ ಮಹತ್ವ ನೀಡಬೇಕು. ಭಾರತದಲ್ಲಿ ನಾಟಿ ಔಷಧಿಗೆ ಬೇಕಾದ ಎಲ್ಲ ವಸ್ತುಗಳು ಸಿಗುತ್ತದೆ ಇಲ್ಲಿನ ಮಣ್ಣಿನ ಗುಣವೇ ಅಂತದ್ದು ಎಂದರು.

ರೋಗಕ್ಕೆ ತಕ್ಕಂತೆ ಔಷಧಿಗಳನ್ನು ನೀಡಬೇಕೆಂದು ಅಂದಿನ ನಾಟಿ ವೈದ್ಯರು ಬರೆದು ಇಟ್ಟಿದ್ದಾರೆ. ಕಪತಗುಡ್ಡ, ಸಂಡೂರು ಕುಮಾರಸ್ವಾಮಿ, ಗುಡ್ಡ, ಬಾಬಬುಡನ್‌ ಗಿರಿ ಬೆಟ್ಟಗಳಲ್ಲಿ ಔಷಧಿವುಳ್ಳ ಗಿಡ ಮರಗಳು ಮೈನಿಂಗ್ ನಿಂದ ನಶಿಸಿ ಹೋಗುತ್ತಿವೆ. ನಾವು ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು.

ಗಿಡಮೂಲಿಕೆ ಔಷಧಿ ಮನುಷ್ಯ ಶಕ್ತಿವಂತನ್ನಾಗಿ ಮಾಡುತ್ತದೆ ಮುಂದಿನ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸೊರಬ ತಾಲೂಕಿನ ಶಿಡ್ಡಿಹಳ್ಳಿಯ ಪ್ರಸಿದ್ಧ ನಾಟಿ ವೈದ್ಯ ನಾಗನಗೌಡ ಪಾಟೀಲ್ ಮಾತನಾಡಿ, ಸಾವಯವ ಕೃಷಿಯಿಂದ ನಮ್ಮ ಆರೋಗ್ಯ ಉತ್ತಮವಾಗುತ್ತದೆ. ಕೆಮಿಕಲ್ ಕೃಷಿಯಿಂದ ಆರೋಗ್ಯ ಕೆಡುತ್ತಿದೆ ಎಂದರು.

ನಾಟಿ ವೈದ್ಯೆ ಶಿವಲೀಲಾ ಮಾತನಾಡಿ, ನಾಟಿ ಔಷಧಿ ಮುಖ್ಯ ವಾಹಿನಿಗೆ ಬರಬೇಕಿದೆ. ನಮ್ಮ ಜ್ಞಾನ ಬಲಪಡಿಸಬೇಕಿದೆ. ನಮ್ಮ ಜ್ಞಾನಕ್ಕೆ ಗ್ರಂಥವಿಲ್ಲ. ನಾಟಿ ಔಷಧಿ ಮನುಷ್ಯ ಆರೋಗ್ಯಕ್ಕೆ ಉತ್ತಮ ಔಷಧಿ ಎಂದರು.

ಸಂಘದ ತಾಲೂಕು ಅಧ್ಯಕ್ಷ ಮಹಮ್ಮದ್ ಇಬ್ರಾಹಿಂ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಕಲ್ಲಹಳ್ಳಿ ಗೋಣಿಬಸಪ್ಪ, ಸಣ್ಣಜ್ಜಯ್ಯ, ಚಿರಬಿ ವೀರಣ್ಣ, ಕಿತ್ತೂರು ಕೊಟ್ರಪ್ಪ, ಧರ‍್ಮಪ್ಪ, ರಿಯಾಜ್, ಕೂಡ್ಲಿಗಿಯ ಮುನಿಯಪ್ಪ, ನಾಗರಾಜ, ಹರಿಹರದ ಗಿಡ್ಡಪ್ಪ, ರಾಜಣ್ಣ, ದಾವಣಗೆರೆ ರಿಯಾಜ್, ಕೆ.ಕಲ್ಲಹಳ್ಳಿಯ ಕೆ‌.ಎಂ. ಗುರುಸಿದ್ದಯ್ಯ, ನಾಗನಗೌಡ, ನಿವೃತ್ತ ಶಿಕ್ಷಕ ಬಿ.ಪ್ರಕಾಶ, ನಾಗರಾಜ, ಕಾನಹಳ್ಳಿ ಈರಮ್ಮ, ಶಾಂತಮ್ಮ, ಹುಲಿಕಟ್ಟಿ ಸಿದ್ದಪ್ಪ, ಬಿಆರ್ ಪಿ ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.