ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಜಂತುಗಳಿಗೆ ಶುದ್ಧವಾದ ಗಾಳಿ ಬೇಕು. ಪ್ರಕೃತಿಯ ನಾಶದಿಂದ ಈ ಜಗತ್ತಿನ ಅವನತಿಯಾಗಲಿದೆ. ಈ ಭೂಮಿಯ ಮೇಲೆ ಬದುಕಬೇಕೆಂದಿದ್ದರೆ ಪ್ರಾಣವಾಯು ಮರುಪೂಣಕ್ಕೆ ನಾವೆಲ್ಲ ಸಸ್ಯ ಸಂರಕ್ಷಣೆ ಮಾಡಲೇ ಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ಕದ್ರಿ ಮಂಜು ಪ್ರಾಸಾದದಲ್ಲಿ ಮಂಗಳವಾರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಂದ ಗುರುವಂದನಾ ಮತ್ತು ಸಸಿ ತುಲಾಭಾರ ನೆರವೇರಿಸಿ ಅವರು ಮಾತನಾಡಿದರು.ನಾಲ್ಕು ವೇದ, 18 ಪುರಾಣಗಳನ್ನು ನೀಡಿದ ವೇದವ್ಯಾಸರು ಜಗತ್ತಿಗೆ ಅಹಿಂಸಾ ಪರಮೋಧರ್ಮ ಸಂದೇಶ ಕೊಟ್ಟವರು. ಪ್ರಕೃತಿಯ ಆರಾಧನೆಯಿಂದ ನಾವೆಲ್ಲ ಅಹಿಂಸಾ ತತ್ವವನ್ನು ಪಾಲಿಸೋಣ ಎಂದರು.
ವಿವಿಧ ಬಗೆಯ ಸಸಿಗಳ ತುಲಾಭಾರ ನೆರವೇರಿಸಿ, ಬಳಿಕ ಕಾಣಿಕೆಯಾಗಿ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಪೇಜಾವರಶ್ರೀಗಳು ರಾಮ ಭಜನೆ ನೆರವೇರಿಸಿದರು. ಸಂಘಟಕ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕ ಮಾತನಾಡಿದರು.ಮಂಗಳೂರು ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯೆ ಶಕೀಲಾ ಕಾವ, ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ವಿಹಿಂಪ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಸುಧಾಕರ ರಾವ್ ಪೇಜಾವರ, ಭಾಸ್ಕರ್ ರೈ ಕುಕ್ಕುವಳ್ಳಿ, ಶ್ರೀಧರ ಹೊಳ್ಳ, ಕೃಷ್ಣ ಭಟ್, ರಾಮಚಂದ್ರ ಭಟ್ ಎಲ್ಲೂರು, ಜನಾರ್ದನ ಹಂದೆ ಮತ್ತಿತರರು ಇದ್ದರು.
---ವಾಹನ, ಎಸಿ ಇದ್ದವರು ಕಡ್ಡಾಯ ಸಸಿ ನೆಡಿನಗರ ಪ್ರದೇಶದ ಮನೆಗಳಲ್ಲಿ ಈಗ ವಾಹನಗಳು, ಹವಾನಿಯಂತ್ರಿತ(ಎಸಿ) ವ್ಯವಸ್ಥೆಗಳು ಸಾಮಾನ್ಯ. ಇದು ಇಲ್ಲದೆ ಬದುಕೇ ಇಲ್ಲ ಎಂಬಂತಾಗಿದೆ. ಆದರೆ ಪ್ರಕೃತಿಗೆ ಇಂತಹ ಕಡೆಗಳಲ್ಲಿ ಆದ್ಯತೆ ಇರುವುದಿಲ್ಲ.
ಮನೆಯಲ್ಲಿ ದ್ವಿಚಕ್ರ ವಾಹನ ಇದ್ದವರು ಎರಡು ಸಸಿ, ತ್ರಿಚಕ್ರ ವಾಹನ ಇದ್ದರೆ ಮೂರು ಸಸಿ, ಚತುಷ್ಚಕ್ರ ವಾಹನ ಹೊಂದಿದವರು ನಾಲ್ಕು ಸಸಿ, ಎಸಿ ವ್ಯವಸ್ಥೆ ಇರುವವರು ಸಸ್ಯಗಳ ಪೋಷಣೆಯನ್ನು ಕಡ್ಡಾಯ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಆಗ ಮಾತ್ರ ಹಸಿರೇ ಉಸಿರಾಗಲು ಸಾಧ್ಯ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.