ಸಾರಾಂಶ
ಹಸಿರು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ. ಮರಗಳಿಂದ ಭೂಮಿ ಮೇಲಿರುವ ಎಲ್ಲ ಜೀವಿಗಳಿಗೂ ಅನುಕೂಲವಿದೆ.
ಕೊಪ್ಪಳ:
ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಲು ಹೆಚ್ಚಿನ ಮರ-ಗಿಡ ಬೆಳೆಸಿ ಮಕ್ಕಳಂತೆ ಪೋಷಿಸಬೇಕೆಂದು ಉಪನ್ಯಾಸಕ ಶಿವನಗೌಡ ಪಾಟೀಲ ಹೇಳಿದರು.ಭಾಗ್ಯನಗರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗೌತಮಬುದ್ಧ ಎಸ್ಎಸ್ಜಿ ಸಂಸ್ಥೆ ಸಹಯೋಗದಲ್ಲಿ ಭಾಗ್ಯನಗರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ಅಭಿಯಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬರು ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಬೇಕು. ಅದರಿಂದ ಉತ್ತಮವಾದ ಗಾಳಿ ಸಿಗಲಿದ್ದು ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸಹಶಿಕ್ಷಕ ನಾಗರಾಜ್ ಕುಷ್ಟಗಿ ಮಾತನಾಡಿ, ಹಸಿರು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ. ಮರಗಳಿಂದ ಭೂಮಿ ಮೇಲಿರುವ ಎಲ್ಲ ಜೀವಿಗಳಿಗೂ ಅನುಕೂಲವಿದೆ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷ ಣಕ್ಕೆ ನೀಡುವ ಮಹತ್ವವನ್ನು ಸಸಿ ನೆಟ್ಟು ಬೆಳೆಸಲೂ ನೀಡಬೇಕು. ಅಂದಾಗ ಮಾತ್ರ ಉತ್ತಮ ಪರಿಸರ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಸಹಶಿಕ್ಷಕರಾದ ಬಸವರಾಜ್ ಗುಗ್ರಿ ಸ್ವಾಗತಿಸಿದರು, ಮಲ್ಲಿಕಾರ್ಜುನ ಲಾಡಿ ನಿರೂಪಿಸಿದರು. ಪಿಎಂಶ್ರೀ ಶಾಲೆಯ ವಿದ್ಯಾರ್ಥಿಗಳು ಮತ್ತು ಕಿನ್ನಾಳದ ಧರಣಿ ಕಲಾ ಬಳಗದಿಂದ ಪರಿಸರ ಜಾಗೃತಿ ಕುರಿತ ಜಾಥಾದಲ್ಲಿ ಪರಿಸರ ಜಾಗೃತಿ ಗೀತೆ ಹಾಡಿ ಜನರಿಗೆ ಪರಿಸರದ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಸಾವಿತ್ರಿ ದಾಸ್, ಗೌತಮಬುದ್ಧ ಎಸ್ಎಸ್ಜಿ ಸಂಸ್ಥೆ ಕಾರ್ಯದರ್ಶಿ ರಂಗನಾಥ ಕೋಳೂರು, ಭಾಗ್ಯನಗರ ಪಪಂ ನಾಮನಿರ್ದೇಶಿತ ಸದಸ್ಯ ಹನುಮಂತಪ್ಪ ಬಂಡಿ, ಸಹಶಿಕ್ಷಕರಾದ ನಾಗರಾಜ್ ಕುಷ್ಟಗಿ, ವಿಜಯಲಕ್ಷ್ಮಿ ಬಡಿಗೇರ, ಕಸ್ತೂರಿ ದ್ಯಾಂಪೂರ, ಕಲಾವಿದೆ ಗೌರಿ ಗೋನಾಳ ಇದ್ದರು.